ಸಿಂಧನೂರ (ರಾಯಚೂರು ಜಿಲ್ಲೆ): ಇಲ್ಲಿಯ ಮೆಹಬೂಬ್ ಕಾಲೊನಿಯ ನಾಲ್ಕು ವರ್ಷದ ಪುಟಾಣಿ ರಜಾಬಿಗೆ ಎಲ್ಲಾ ಮಕ್ಕಳಂತೆ ಓಡಾಡಿಕೊಂಡು, ಆಟವಾಡುವ ಆಸೆ. ಆದರೆ, ಅಪೌಷ್ಟಿಕತೆಯ ಕಾರಣ ಈ ಮಗುವಿನ ಕಾಲುಗಳಿಗೆ ಶಕ್ತಿ ಬಂದಿಲ್ಲ. ಕುಣಿದು ನಲಿಯಬೇಕಾದ ವಯಸ್ಸಿನಲ್ಲಿ ಮಗು ತೆವಳಿಕೊಂಡೇ ಹೋಗುತ್ತಿದೆ.
ರಜಾಬಿ ತಂದೆ ಶಬ್ಬೀರ್ (25) ಹಾಗೂ ತಾಯಿ ಶಾಹೀದಾ (23) ಹೊಟ್ಟೆಪಾಡಿಗಾಗಿ ಕೂಲಿ ಕೆಲಸ ಮಾಡಿಕೊಂಡಿದ್ದಾರೆ. ಚಿಕ್ಕ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಈ ದಂಪತಿಯ ಬಡತನದ ಕಾರಣ, ಮಗಳಿಗೆ ಪೌಷ್ಟಿಕ ಆಹಾರ ನೀಡಲು ಆಗುತ್ತಿಲ್ಲ. ಶಾಹೀದಾ ಅವರು ಗರ್ಭಿಣಿ ಇದ್ದಾಗಲೇರಕ್ತಹೀನತೆಯ ತೊಂದರೆ ಅನುಭವಿಸಿದರು. ಹೆರಿಗೆ ನಂತರ ಮಗು ಕಡಿಮೆ ತೂಕವಿತ್ತು. ಇದೀಗ ನಾಲ್ಕು ವರ್ಷ ಕಳೆದ ಮೇಲೂ ಮಗುವಿನ ಆರೋಗ್ಯದಲ್ಲಿ ಸುಧಾರಣೆ ಕಂಡಿಲ್ಲ. ತೂಕ ಕೂಡ 8.4 ಕೆ.ಜಿ ಇದೆ.
ಸಿಂಧನೂರು, ರಾಯಚೂರು, ಕಲಬುರ್ಗಿ ಸರ್ಕಾರಿ ಆಸ್ಪತ್ರೆಗಳಿಗೆ ಹಲವು ಬಾರಿ ತೋರಿಸಿದ್ದಾರೆ. ‘ಕಾಲುಗಳಿಗೆ ಏನೂ ತೊಂದರೆ ಇಲ್ಲ. ಶಕ್ತಿ ಇಲ್ಲದ ಕಾರಣ ಮಗು ನಡೆಯುತ್ತಿಲ್ಲ. ಸತ್ವಯುತ ಆಹಾರ ಕೊಟ್ಟರೆ ಸರಿಯಾಗುತ್ತಾಳೆ ಎಂದು ವೈದ್ಯರು ಹೇಳಿ ಕಳುಹಿಸಿದ್ದಾರೆ. ಎನ್ಆರ್ಸಿ ಕೇಂದ್ರಗಳಲ್ಲೂ ತಿಂಗಳವರೆಗೆ ದಾಖಲಿಸಿದ್ದೇವೆ. ಆದರೂ ಸುಧಾರಣೆ ಕಂಡಿಲ್ಲ’ ಎನ್ನುವುದು ದಂಪತಿಯ ನೋವಿನ ನುಡಿ.
‘ಗರ್ಭ ಧರಿಸಿದ್ದಾಗ ಸರ್ಕಾರಿ ಆಸ್ಪತ್ರೆಯ ವೈದ್ಯರು, ಅಂಗನವಾಡಿಯವರು ಹೇಳಿದ ಎಲ್ಲ ನಿಯಮಗಳನ್ನು ಪಾಲಿಸಿದ್ದೇನೆ. ಆದರೆ, ಸರ್ಕಾರದಿಂದ ನೀಡುವ ಧಾನ್ಯಗಳು ಎರಡು ದಿನಕ್ಕೂ ಸಾಲುತ್ತಿಲ್ಲ. ಅಕ್ಕಿ, ತೊಗರಿ ಬೇಳೆ, ಹೆಸರು ಬೇಳೆ, ಸಕ್ಕರೆ, ಬೆಲ್ಲ, ಗೋಧಿ ಎಲ್ಲವನ್ನೂ ಅರ್ಧ ಕೆ.ಜಿ ಮಾತ್ರ ಕೊಡುತ್ತಾರೆ. ಹಾಲಿನ ಪುಡಿ ಒಂದು ಪಾಕೀಟು, ಆರು ಮೊಟ್ಟೆ... ಇದು ಒಂದು ತಿಂಗಳಿಗೆ ಹೇಗೆ ಸಾಲುತ್ತದೆ? ಹೆರಿಗೆ ಸಂದರ್ಭದಲ್ಲಿ ಅನಿವಾರ್ಯ ಆಗಬಹುದು ಎಂದು ಸ್ವಲ್ಪ ಹಣ ಕೂಡಿಟ್ಟುಕೊಳ್ಳಬೇಕಾಯಿತು. ಸಮತೋಲಿತ ಆಹಾರ ಸೇವಿಸಲು ಸಾಧ್ಯವಾಗಲಿಲ್ಲ. ಹೀಗಾಗಿ, ನಮ್ಮ ಮಗಳು ಅಂಗವಿಕಲೆಯಾಗುತ್ತಾಳೇನೋ’ ಎಂದು ಕಣ್ಣೀರಿಟ್ಟರು ಶಾಹೀದಾ.
‘ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವ ಶಕ್ತಿ ನನ್ನಲ್ಲಿಲ್ಲ. ಮಗಳು ತೆವಳುತ್ತ ಹೋಗುವುದನ್ನು ನೋಡಲು ಹಿಂಸೆಯಾಗುತ್ತಿದೆ’ ಎಂಬ ಅಸಹಾಯಕತೆ ಶಬ್ಬೀರ್ ಅವರದು. ಈಗ ನಾಲ್ಕು ತಿಂಗಳ ಗರ್ಭಿಣಿಯಾಗಿರುವ ಶಾಹೀದಾ, ಮಗಳಿಗೆ ಪೌಷ್ಟಿಕ ಆಹಾರ ನೀಡುವ ಸವಾಲಿನ ಜತೆಗೆ ತಮ್ಮ ಆರೋಗ್ಯವನ್ನೂ ನೋಡಿಕೊಳ್ಳಬೇಕಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.