ADVERTISEMENT

ಒಳನೋಟ: ಧ್ವನಿಯಾದ ಉಡುಪಿ ಜನಪ್ರತಿನಿಧಿಗಳು

ಕೋವಿಡ್‌ ಕಾಲದಲ್ಲಿ ಜನರಿಂದ ದೂರವಾಗಿರುವ ಶಾಸಕರು–ಸಂಸದರು l ಕೆಲವರಷ್ಟೇ ಸಕ್ರಿಯ

​ಪ್ರಜಾವಾಣಿ ವಾರ್ತೆ
Published 1 ಮೇ 2021, 22:00 IST
Last Updated 1 ಮೇ 2021, 22:00 IST
ಬೆಂಗಳೂರಿನಿಂದ ತಮ್ಮ ಜನರನ್ನು ಕರೆದೊಯ್ಯಲು ಬಸ್‌ ವ್ಯವಸ್ಥೆ ಮಾಡಿದ ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜ.
ಬೆಂಗಳೂರಿನಿಂದ ತಮ್ಮ ಜನರನ್ನು ಕರೆದೊಯ್ಯಲು ಬಸ್‌ ವ್ಯವಸ್ಥೆ ಮಾಡಿದ ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜ.   

ಉಡುಪಿ: ಕಳೆದ ವರ್ಷ ಲಾಕ್‌ಡೌನ್ ಅವಧಿಯಲ್ಲಿ ಜಿಲ್ಲೆಯ ಶಾಸಕರು ನಿರ್ಗತಿಕರಿಗೆ ಆಹಾರದ ಕಿಟ್‌ ವಿತರಣೆ, ಊಟ, ಉಪಾಹಾರದ ವ್ಯವಸ್ಥೆ ಮಾಡಿದ್ದರೆ, ಈ ಬಾರಿ ಇದಕ್ಕೆ ಬದಲಾಗಿ ರಕ್ತದಾನ ಶಿಬಿರ, ಕೋವಿಡ್‌ ಸಹಾಯವಾಣಿ, ಆಂಬುಲೆನ್ಸ್‌ ವ್ಯವಸ್ಥೆ ಮಾಡಿದ್ದಾರೆ.

ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್, ‘ನಿಮ್ಮ ಜತೆ ನಾವಿದ್ದೇವೆ’ ಎಂಬ ಘೋಷಣೆಯಡಿ ಕೋವಿಡ್ 2.0 ಸಹಾಯವಾಣಿ ಆರಂಭಿಸಿದ್ದಾರೆ. ಬಡರೋಗಿಗಳನ್ನು ಆಸ್ಪತ್ರೆಗೆ ಕರೆತರಲು ಆಂಬುಲೆನ್ಸ್‌ ವ್ಯವಸ್ಥೆ, ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯಡಿ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್‌ಗೆ ಉಚಿತ ಚಿಕಿತ್ಸೆ ನೀಡಲು ನೆರವು, ಅಂತ್ಯಸಂಸ್ಕಾರಕ್ಕೆ ಪ್ರತ್ಯೇಕ ತಂಡ ರಚನೆ, ಹೋಂ ಐಸೊಲೇಷನ್‌ಲ್ಲಿರುವ ಸೋಂಕಿತರ ಮನೆಗೆ ಮೆಡಿಕಲ್‌ ಕಿಟ್‌ಗಳನ್ನು ನೀಡಲು ತಂಡಗಳನ್ನು ರಚಿಸಿದ್ದಾರೆ. ಈಚೆಗೆ ಶಾಸಕ ಸುನಿಲ್ ಕುಮಾರ್ ಅವರಿಗೂ ಕೋವಿಡ್‌ ದೃಢಪಟ್ಟಿತ್ತು.

ಕಾಪು ಶಾಸಕ ಲಾಲಾಜಿ ಮೆಂಡನ್‌ ರಕ್ತದಾನ ಶಿಬಿರಗಳನ್ನು ಆಯೋಜಿಸುತ್ತಿದ್ದು, ಕೋವಿಡ್‌ ಲಸಿಕಾ ಕಾರ್ಯವನ್ನು ಪರಿಶೀಲಿಸುತ್ತಿದ್ದಾರೆ. ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಕೋವಿಡ್‌ ಸೋಂಕಿನಿಂದ ಗುಣಮುಖರಾಗಿ ಹೋಂ ಕ್ವಾರಂಟೈನ್‌ನಲ್ಲಿದ್ದಾರೆ. ಉಡುಪಿ ಶಾಸಕ ರಘುಪತಿ ಭಟ್ ಕೋವಿಡ್‌ ಸಹಾಯವಾಣಿ ಕೇಂದ್ರ ಹಾಗೂ ಉಚಿತ ಆಂಬುಲೆನ್ಸ್‌ ಹಾಗೂ ಕೋವಿಡ್‌ ಲಸಿಕೆ ಪಡೆಯುವವರನ್ನು ಆಸ್ಪತ್ರೆಗೆ ಕರೆತರಲು ವಾಹನ ವ್ಯವಸ್ಥೆ ಮಾಡಿದ್ದಾರೆ

ADVERTISEMENT

ಉಸ್ತುವಾರಿ ಸಚಿವರೇ ಇಲ್ಲ
ಚಿಕ್ಕಮಗಳೂರು ಜಿಲ್ಲೆಗೆ ಉಸ್ತುವಾರಿ ಸಚಿವರೇ ಇಲ್ಲದೆ ಏಳು ತಿಂಗಳಾಗಿದೆ. ಕಷ್ಟದಲ್ಲಿರುವ ಕಾರ್ಮಿಕರು, ಬಡವರಿಗೆ ಸಹಾಯ ಹಸ್ತ ಚಾಚುವ ಕೆಲಸಗಳನ್ನು ಜನಪ್ರತಿನಿಧಿಗಳು ಇನ್ನೂ ಶುರು ಮಾಡಿಲ್ಲ. ಕಳೆದ ಬಾರಿ ತೋರಿದ ಉತ್ಸಾಹವನ್ನು ಜನಪ್ರತಿನಿಧಿಗಳು ಈಗ ತೋರುತ್ತಿಲ್ಲ.

ಶಾಸಕರು, ಸಂಸದರು ಕೋವಿಡ್‌ ನಿರ್ವಹಣೆಗೆ ಸಂಬಂಧಿಸಿದಂತೆ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಕೆಲವರು ಪಿಪಿಐ ಕಿಟ್‌ ಧರಿಸಿ ಕೋವಿಡ್‌ ವಾರ್ಡ್‌ಗಳಿಗೆ ತೆರಳಿ ರೋಗಿಗಳ ಯೋಗಕ್ಷೇಮ ವಿಚಾರಿಸಿದ್ದಾರೆ ಅಷ್ಟೆ. ಶಾಸಕರು, ವಿಧಾನ ಪರಿಷತ್‌ ಸದಸ್ಯರ ಅನುದಾನದಲ್ಲಿ ಎಂಟು ಆಂಬುಲೆನ್ಸ್‌ಗಳು ಬಂದಿವೆ.

ಸಿ.ಟಿ.ರವಿ ರಾಜೀನಾಮೆ ನಂತರ ಉಸ್ತುವಾರಿ ಸಚಿವರನ್ನು ನೇಮಿಸಿಲ್ಲ. ಉಸ್ತುವಾರಿ ಸಚಿವರು ಇಲ್ಲದಿರುವುದರಿಂದ ಕೋವಿಡ್‌ ನಿರ್ವಹಣೆ ನಿಗಾ, ಪರಿಶೀಲನೆ ಮಾಡುವವರಿಲ್ಲ ಎಂಬಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.