ADVERTISEMENT

ವಾಚಕರ ವಾಣಿ: ಇದ್ದಾರೆ ಹಿಟ್ಲರನ ಸಮರ್ಥಕರು!

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2021, 20:30 IST
Last Updated 22 ಆಗಸ್ಟ್ 2021, 20:30 IST

ಖಾಸಗಿ ಟಿ.ವಿ. ವಾಹಿನಿಯೊಂದರಲ್ಲಿ ಈಚೆಗೆ ‘ಹಿಟ್ಲರ್ ಕಲ್ಯಾಣ’ ಎಂಬ ಹೆಸರಿನ ಧಾರಾವಾಹಿ ಪ್ರಸಾರವಾಗುತ್ತಿದೆ. ಅದರ ನಿರ್ದೇಶಕರು ಯಾವ ಸದುದ್ದೇಶದಿಂದ ಇಂತಹ ಶೀರ್ಷಿಕೆ ರೂಪಿಸಿದ್ದಾರೋ ತಿಳಿಯದು. ಲಕ್ಷಾಂತರ ಯಹೂದಿಗಳ ದಾರುಣ ಅಂತ್ಯಕ್ಕೆ ಕಾರಣನಾದ ಹಿಟ್ಲರನನ್ನು ಶೀರ್ಷಿಕೆಯನ್ನಾಗಿಸಿ ಜನರಿಗೆ ಯಾವ ಸಂದೇಶ ತಲುಪಿಸಲಾಗುತ್ತಿದೆ? ನಮ್ಮ ಸಂಬಂಧಿಕರ ಮಗನೊಬ್ಬ, ‘ಹಿಟ್ಲರ್ ಯಾರು’ ಎಂಬ ಪ್ರಶ್ನೆಗೆ ‘ಅದೇ, ಆ ಧಾರಾವಾಹಿಯ ಹೀರೊ’ ಎಂದು ಉತ್ತರಿಸಿದ್ದ. ನಾವೆಲ್ಲ ಅದೊಂದು ದೊಡ್ಡ ಜೋಕ್ ಎಂಬಂತೆ ನಕ್ಕಿದ್ದೆವು. ಪರಿಚಿತರೊಬ್ಬರ ವಾಟ್ಸ್‌ಆ್ಯಪ್ ಸ್ಟೇಟಸ್‌ನಲ್ಲಿ ಹಿಟ್ಲರ್ ಹಾಗೂ ಆತನ ಕೃತ್ಯಗಳ ಸಮರ್ಥನೆಯ ವಿಡಿಯೊ ತುಣುಕೊಂದನ್ನು ನೋಡಿ ಅತ್ಯಾಶ್ಚರ್ಯವಾಗಿತ್ತು. ‘ಸೀತೆಯನ್ನು ಕಾಡಿಗಟ್ಟಿದ ರಾಮನಿಗಿಂತ, ಆಕೆಯ ಒಪ್ಪಿಗೆಗೆ ಕಾದ ರಾವಣ ಮೇಲು’ ಎಂದೋ, ‘ಹಲವು ಹೆಂಡಿರ ಗಂಡ ಕೃಷ್ಣನಿಗಿಂತ, ಏಕಪತ್ನೀಧರನಾದ ದುರ್ಯೋಧನ ಶ್ರೇಷ್ಠ’ ಎಂದೋ‌ ಬಿಂಬಿಸುವ ಹತ್ತು ಹಲವು ಸಂಗತಿಗಳನ್ನು ನಿತ್ಯ ನೋಡುತ್ತಲೇ ಇದ್ದೇವೆ. ಅಂತೆಯೇ ಹಿಟ್ಲರನನ್ನೂ ಸಮರ್ಥಿಸಿಕೊಳ್ಳುವವರು ಇದ್ದಾರೆ ಎನ್ನುವುದು, ಜನಪ್ರಿಯ ವಾಹಿನಿಯೊಂದು ನರಹಂತಕನ‌ ಹೆಸರಿನಲ್ಲಿ ‘ಕಲ್ಯಾಣ’ ಸಾಧಿಸಲು ಹೊರಟಿರುವುದು ಸರಿಯಲ್ಲ.

-ಪ್ರದೀಪ ಟಿ.ಕೆ.,ತಿಮ್ಮೇಗೌಡನದೊಡ್ಡಿ, ಕನಕಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT