ADVERTISEMENT

ಬ್ರಾವೊ ಮೇಲೆ ಸಿಟ್ಟಾದ ಕೂಲ್ ಕ್ಯಾಪ್ಟನ್; ಮರಳಿದ ಧೋನಿ ರಿವ್ಯೂ ಸಿಸ್ಟಂ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಸೆಪ್ಟೆಂಬರ್ 2021, 11:38 IST
Last Updated 20 ಸೆಪ್ಟೆಂಬರ್ 2021, 11:38 IST
ಮಹೇಂದ್ರ ಸಿಂಗ್ ಧೋನಿ
ಮಹೇಂದ್ರ ಸಿಂಗ್ ಧೋನಿ   

ದುಬೈ: ಬಹಳ ದಿನಗಳ ಬಳಿಕ ಮಹೇಂದ್ರ ಸಿಂಗ್ ಧೋನಿ ಆಟವನ್ನು ಕಣ್ಣಾರೆ ನೋಡುವ ಅವಕಾಶ ಅಭಿಮಾನಿಗಳಿಗೆ ಒದಗಿದೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸುತ್ತಿರುವ ಧೋನಿ ಮಗದೊಮ್ಮೆ ಅದ್ಭುತ ನಾಯಕತ್ವ ಕೌಶಲ್ಯವನ್ನು ಪ್ರದರ್ಶಿಸಿದ್ದಾರೆ.

ಈ ಮೂಲಕ ದುಬೈನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ 20 ರನ್ ಅಂತರದ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದ್ದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ಈ ನಡುವೆ ಮೈದಾನದಲ್ಲಿ ಸಹ ಆಟಗಾರ ಡ್ವೇನ್ ಬ್ರಾವೊ ಮೇಲೆ ಧೋನಿ ಸಿಟ್ಟಾಗಿರುವ ಘಟನೆ ನಡೆದಿದೆ. ಮುಂಬೈ ಬ್ಯಾಟಿಂಗ್ ವೇಳೆ ದೀಪಕ್ ಚಾಹರ್ ಎಸೆದ ಇನ್ನಿಂಗ್ಸ್‌ನ 18ನೇ ಓವರ್‌ನಲ್ಲಿ ಸೌರಭ್ ತಿವಾರಿ ಹೊಡೆದ ಚೆಂಡನ್ನು ಹಿಡಿಯಲು ಯತ್ನಿಸುವಾಗ ಧೋನಿ ಹಾಗೂ ಬ್ರಾವೊ ಪರಸ್ಪರ ಮುಖಾಮುಖಿಯಾಗಿದ್ದರು.

ಪರಿಣಾಮ ಇಬ್ಬರು ಕ್ಯಾಚ್ ಕೈಚೆಲ್ಲಿದ್ದರು. ಈ ವೇಳೆ 'ಕ್ಯಾಪ್ಟನ್ ಕೂಲ್' ಖ್ಯಾತಿಯ ಧೋನಿ ತಾಳ್ಮೆ ಕಳೆದುಕೊಂಡು ಸಿಟ್ಟಾದರು.

ಏತನ್ಮಧ್ಯೆ ಡಿಸಿಷನ್ ರಿವ್ಯೂ ಸಿಸ್ಟಂ (ಡಿಆರ್‌ಎಸ್) ಅಂದರೆ ಧೋನಿ ರಿವ್ಯೂ ಸಿಸ್ಟಂ ಎಂಬುದು ಮಗದೊಮ್ಮೆ ಸಾಬೀತಾಗಿದೆ. ಇದರೊಂದಿಗೆ ಧೋನಿ ರಿವ್ಯೂ ಸಿಸ್ಟಂ ಮರಳಿದೆ ಎಂದು ಅಭಿಮಾನಿಗಳು ಕೊಂಡಾಡಿದ್ದಾರೆ.

ದೀಪಕ್ ಚಾಹರ್ ದಾಳಿಯಲ್ಲಿ ಕ್ವಿಂಟನ್ ಡಿ ಕಾಕ್ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು.ಆದರೆಬಲವಾದ ಮನವಿಯನ್ನು ಅಂಪೈರ್ ಪುರಸ್ಕರಿಸಲಿಲ್ಲ. ತಕ್ಷಣ ಧೋನಿ ಡಿಆರ್‌ಎಸ್ ಮೇಲ್ಮನವಿ ಮೋರೆ ಹೋಗಲು ನಿರ್ಧರಿಸಿದರು. ಬಳಿಕ ಮೂರನೇ ಅಂಪೈರ್ ರಿಪ್ಲೇ ಪರಿಶೀಲಿಸಿದಾಗ ಎಲ್‌ಬಿಡಬ್ಲ್ಯು ಎಂಬುದು ಸ್ಪಷ್ಟಗೊಂಡಿತ್ತು. ಪರಿಣಾಮ ಡಿ ಕಾಕ್ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.