ADVERTISEMENT

ದೆಹಲಿ ಹಿಂಸಾಚಾರ: ರಾಜಕಾರಣಿಗಳ ವಿರುದ್ಧದ ಅರ್ಜಿ ವಿಚಾರಣೆ ನಾಳೆ

ರಾಜಕಾರಣಿಗಳ ವಿರುದ್ಧ ಎಫ್‌ಐಆರ್‌ಗೆ ಮನವಿ

ಪಿಟಿಐ
Published 2 ಮಾರ್ಚ್ 2020, 19:10 IST
Last Updated 2 ಮಾರ್ಚ್ 2020, 19:10 IST
   

ನವದೆಹಲಿ: ‘ದೆಹಲಿ ಹಿಂಸಾಚಾರಕ್ಕೆ ಬಿಜೆಪಿ ನಾಯಕರಾದ ಅನುರಾಗ್ ಸಿಂಗ್ ಠಾಕೂರ್, ಪರ್ವೇಶ್ ವರ್ಮಾ, ಕಪಿಲ್ ಮಿಶ್ರಾ ಹಾಗೂ ಅಭಯ್ ವರ್ಮಾ ಅವರ ದ್ವೇಷಭಾಷಣಗಳೇ ಕಾರಣ. ಇವರ ವಿರುದ್ಧ ಎಫ್‌ಐಆರ್‌ ದಾಖಲಿಸಬೇಕು’ ಎಂದು ಕೋರಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಯನ್ನು ಬುಧವಾರ (ಮಾರ್ಚ್ 4) ಕೈಗೆತ್ತಿಕೊಳ್ಳುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.

ಗಲಭೆ ಸಂತ್ರಸ್ತರಾದ 10 ಜನರು ಸಲ್ಲಿಸಿರುವ ಈ ಅರ್ಜಿಯನ್ನು ತುರ್ತಾಗಿ ವಿಚಾರಣೆ ನಡೆಸಬೇಕು ಎಂದು ಹಿರಿಯ ವಕೀಲ ಕಾಲಿನ್ ಗೊನ್ಸಾಲ್ವೆಸ್ ಅವರು ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬಡೆ ನೇತೃತ್ವದ ಪೀಠಕ್ಕೆ ಸೋಮವಾರ ಕೋರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ‘ನಾವು ಶಾಂತಿ ಬಯಸುತ್ತೇವೆ. ಆದರೆ ಸಾಕಷ್ಟು ಮಿತಿಗಳಿವೆ. ಜನರು ಸಾಯಬೇಕೆಂದು ನಾವು ಹೇಳುತ್ತಿಲ್ಲ. ನಡೆದಿರುವ ಸಂಗತಿಯನ್ನು ನಾವು ಪರಿಶೀಲಿಸಬಹುದು. ಆದರೆ ಘಟನೆ ಸಂಭವಿಸುವುದನ್ನು ನಾವು ತಡೆಯಲು ಸಾಧ್ಯವಿಲ್ಲ’ ಎಂದು ಹೇಳಿತು.

ADVERTISEMENT

‘ಈ ರೀತಿಯ ಒತ್ತಡವನ್ನು ನಿರ್ವಹಿಸಲು ಸಾಧ್ಯವಿಲ್ಲ. ನಾವು ಸಹ ಪತ್ರಿಕೆ ಓದುತ್ತೇವೆ. ಘಟನೆಗೆ ನ್ಯಾಯಾಲಯವೇ ಕಾರಣ ಎನ್ನುವಂತಹ ಹೇಳಿಕೆಗಳು ಬರುತ್ತವೆ’ ಎಂದು ನ್ಯಾಯಮೂರ್ತಿ ಬಿ.ಆರ್. ಗವಾಯಿ ಹಾಗೂ ಸೂರ್ಯಕಾಂತ್ ಅವರನ್ನು ಒಳಗೊಂಡ ಪೀಠ ಹೇಳಿತು.

ಹಿಂಸಾಚಾರದ ಪರಿಣಾಮವಾಗಿ ಜನರು ಇನ್ನೂ ಸಾವಿಗೀಡಾಗುತ್ತಿದ್ದರೂ, ಈ ಸಂಬಂಧ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಆರು ವಾರಗಳ ಬಳಿಕ ಪರಿಶೀಲಿಸುವುದಾಗಿ ದೆಹಲಿ ಹೈಕೋರ್ಟ್ ಹೇಳಿದೆ ಎನ್ನುವ ವಿಷಯವನ್ನು ಅವರು ಪೀಠಕ್ಕೆ ಇದೇ ವೇಳೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.