ADVERTISEMENT

ನೆರೆ ಸಂಕಷ್ಟ, ಸೇನೆ, ಸಂತರ ಸಾಧನೆ ಸಾರಿದ ಜಂಬೂ ಸವಾರಿ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2019, 14:16 IST
Last Updated 8 ಅಕ್ಟೋಬರ್ 2019, 14:16 IST
ಮೈಸೂರು ದಸರಾ ಜಂಬೂ ಸವಾರಿ ಮೆರವಣಿಗೆಯಲ್ಲಿ ಬಾಗಲಕೋಟೆಯ ಜಿಲ್ಲೆಯಲ್ಲಿ ಅಗಸ್ಟ್‌ನಲ್ಲಿ ಉಂಟಾದ ಪ್ರವಾಹದಲ್ಲಿ ಸಿಲುಕಿರುವ, ಸರ್ಕಾರದಿಂದ ಸಂತ್ರಸ್ತರಿಗೆ ನಿರ್ಮಿಸಿರುವ ಪರಿಹಾರ ಕೇಂದ್ರಗಳ, ರಕ್ಷಣಾ ಕಾರ್ಯಾಚರಣೆಯ ದೃಶ್ಯದ ಸ್ತಬ್ಧಚಿತ್ರ.
ಮೈಸೂರು ದಸರಾ ಜಂಬೂ ಸವಾರಿ ಮೆರವಣಿಗೆಯಲ್ಲಿ ಬಾಗಲಕೋಟೆಯ ಜಿಲ್ಲೆಯಲ್ಲಿ ಅಗಸ್ಟ್‌ನಲ್ಲಿ ಉಂಟಾದ ಪ್ರವಾಹದಲ್ಲಿ ಸಿಲುಕಿರುವ, ಸರ್ಕಾರದಿಂದ ಸಂತ್ರಸ್ತರಿಗೆ ನಿರ್ಮಿಸಿರುವ ಪರಿಹಾರ ಕೇಂದ್ರಗಳ, ರಕ್ಷಣಾ ಕಾರ್ಯಾಚರಣೆಯ ದೃಶ್ಯದ ಸ್ತಬ್ಧಚಿತ್ರ.   

ಮೈಸೂರು: ಜಗದ್ವಿಖ್ಯಾತ ಮೈಸೂರು ದಸರಾ ಉತ್ಸವದಲ್ಲಿ ಮಂಗಳವಾರ’ಅರ್ಜುನ‘ ಅಂಬಾರಿ ಹೊತ್ತು ಗಾಂಭೀರ್ಯದ ಹೆಜ್ಜೆ ಹಾಕಿದ. ಮುಂದೆ ಸಾಗಿದ್ದ ಮೆರವಣಿಗೆಯಲ್ಲಿ, ಸ್ತಬ್ಧಚಿತ್ರಗಳು ಹಾಗೂ ಕಲಾ ತಂಡಗಳು ಮೆರವಣಿಗೆಗೆ ಮೆರುಗು ನೀಡಿದ್ದವು.

ಅರಮನೆ ಆವರಣದಲ್ಲಿ ಮುಖ್ಯಮಂತ್ರಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನಂದಿ ಧ್ವಜಕ್ಕೆ ಪೂಜೆಗೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆ ಮುಂದೆ ಸಾಗಿದ ಬಳಿಕ, ಅಂಬಾರಿಯಲ್ಲಿ ವಿರಾಜಮಾನವಾಗಿದ್ದಚಾಮುಂಡೇಶ್ವರಿ ದೇವಿಗೆ ಯಡಿಯೂರಪ್ಪ ಹಾಗೂ ಗಣ್ಯರು ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂ ಸವಾರಿಗೆ ಚಾಲನೆ ನೀಡಿದರು.

ಒಟ್ಟಾರೆ 45 ಸಾಂಸ್ಕೃತಿಕ ತಂಡಗಳು, 35ಕ್ಕೂ ಹೆಚ್ಚು ಸ್ತಬ್ಧ ಚಿತ್ರಗಳು ದಸರಾ ಮೆರವಣಿಗೆಯಲ್ಲಿ ಸಾಗಿದವು. ಪ್ರವಾಸೋದ್ಯಮ ಇಲಾಖೆಯಿಂದ ಹಂಪಿಯನ್ನು ನೆನಪಿಸುವ ಸ್ತಬ್ಧಚಿತ್ರ ನಿರ್ಮಿಸಲಾಗಿತ್ತು. ಈ ಮೂಲಕ ರಾಜ್ಯದಲ್ಲಿ ಉಂಟಾಗಿದ್ದ ನೆರೆ ಸಂಕಷ್ಟ, ಭಾರತೀಯ ಸೇನೆ ಸಾಧನೆ, ಸಿದ್ಧಗಂಗೆಯ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿ ಸೇರಿದಮತೆ ನಾಡಿನ ಸಂತರ ಸಾಧನೆಗಳನ್ನು ಜಂಬೂ ಸವಾರಿಯ ಮೆರವಣಿಗೆಯಲ್ಲಿ ಅನಾವರಣಗೊಂಡಿತು.

ADVERTISEMENT

ಪೂಜಾ ಕುಣಿತದಲ್ಲಿ ಕಲಾವಿದರು ಸಮತೋಲನ ಕಾಯ್ದುಕೊಂಡು ನೃತ್ಯ ಪ್ರದರ್ಶಿಸಿದರು. ನರಸಿಂಹನ ಗೊಂಬೆ ಸೇರಿದಂತೆ ವಿವಿಧ ಗೊಂಬೆಗಳು ಗಮನ ಸೆಳೆದವು. ಕಲಾವಿದರಿಂದ ಪಟ ಪ್ರದರ್ಶನ ನಡೆಯಿತು.

ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಯಲ್ಲಿಮಂಗಳವಾರ ಚಿನ್ನದ ಅಂಬಾರಿಯನ್ನು ಹೊತ್ತ ಅರ್ಜುನ ಆನೆಅರಮನೆಯ ಆವರಣದಲ್ಲಿ ಗಜಗಾಂಭೀರ್ಯದಿಂದ ಹೆಜ್ಜೆ ಹಾಕಿದ ದೃಶ್ಯ. ಪ್ರಜಾವಾಣಿ ಚಿತ್ರ : ಅನೂಪ್ ರಾಗ್. ಟಿ.

ಸ್ತಬ್ಧಚಿತ್ರಗಳು

ಉತ್ಸವದಲ್ಲಿ ಮೈಸೂರು ಸಂಸ್ಥಾನವನ್ನು ಆಳಿದ ಅರಸರಾದ ಶ್ರೀ ಜಯಚಾಮರಾಜ ಒಡೆಯರ್ ಅವರ ಸ್ತಬ್ಧಚಿತ್ರ ಗಮನ ಸೆಳೆಯಿತು.

ಪ್ರವಾಸೋದ್ಯಮ ಇಲಾಖೆಯಿಂದ ಹಂಪಿಯನ್ನು ನೆನಪಿಸುವ ಸ್ತಬ್ಧಚಿತ್ರ ನಿರ್ಮಿಸಲಾಗಿದ್ದು ಸುಂದರವಾಗಿತ್ತು.

ಅತಿವೃಷ್ಠಿಯಿಂದ ನಲುಗಿದ ಬಾಗಲಕೋಟೆ, ಬೆಳಗಾವಿ ಜಿಲ್ಲೆಗಳಿಂದ ಪ್ರವಾಹ ವೇಳೆ ನಡೆದ ರಕ್ಷಣಾ ಕಾರ್ಯಾಚರಣೆಯನ್ನು ಬಿಂಬಿಸುವ ಸ್ತಬ್ಧಚಿತ್ರ ನಿರ್ಮಿಸಿ, ಗಮನ ಸೆಳೆಯಲಾಯಿತು.

ಮತ್ತೊಂದೆಡೆ ಹೆಣ್ಣು ಮಕ್ಕಳ ಚಂಡೆ ತಂಡ ಸದ್ದು ಮಾಡಿತು.

ಉತ್ಸವದಲ್ಲಿ 61 ವರ್ಷದ ಬಲರಾಮ ಪಾಲ್ಗೊಂಡಿದ್ದ. ಸತತ 14 ವರ್ಷ ಕಾಲ ಅಂಬಾರಿ ಹೊತ್ತಿರುವ ಹೆಗ್ಗಳಿಕೆ ಬಲರಾಮನಿಗಿದೆ.

* ಬಾಲಾಕೋಟ್‌ನಲ್ಲಿ ನಡೆದ ‘ಏರ್‌ ಸ್ಟ್ರೈಕ್‌‘ ಸ್ತಬ್ಧಚಿತ್ರ ದೇಶದ ವಾಯು ಸೇನೆಯ ಸಾಧನೆಯನ್ನು ಬಿಂಬಿಸುತ್ತಾ ಸಾಗಿತು.

ಗಮನ ಸೆಳೆದ ಕಲಾತಂಡಗಳು

ಜಡೆ ಕೋಲು ಕುಣಿತದ ಮೂಲಕ ತಂಡ ಜ್ಜೆಗಳನ್ನು ಹಾಕುತ್ತಲೇ ಜಡೆ ಹೆಣೆದರು. ಅದೇ ಕ್ರಮದಲ್ಲಿ ಜಡೆಯನ್ನು ಬಿಚ್ಚಿದರು. ಈ ಮೂಲಕ ಜನರ ಮನ ಸೆಳೆಯುತ್ತಾ ಮುಂದೆ ಸಾಗಿದರು.

ಹಲಗೆ ತಂಡ ತಾಳಬದ್ಧವಾಗಿ ನುಡಿಸುತ್ತಾ ಸಾಗಿತು.ಬಣ್ಣ ಬಣ್ಣದ ವೇಷ, ಧಿರಿಸುಗಳಲ್ಲಿ ಕಲಾವಿದರು ನೋಡುಗರ ಗಮನ ಸೆಳೆದರು.

* ಮಹಾತ್ಮ ಗಾಂಧೀಜಿ ಅವರ 150ನೇ ಜಯಂತಿ ಸ್ಮರಣೆ ಹಾಗೂ ಸ್ವಾತಂತ್ರ್ಯ ಹೋರಾಟ ನೆನಪಿಸುವ ಸ್ಥಬ್ಭಚಿತ್ರ ನಿರ್ಮಿಸಲಾಗಿತ್ತು.

* ಎನ್ರಿ ಇರ್ವಿನ್‌ ಅವರು ಹಾಕಿಕೊಟ್ಟ ವಾಸ್ತು ವಿನ್ಯಾಸದಲ್ಲಿ ಮೈಸೂರು ಅರಮನೆ ನಿರ್ಮಿಸಲಾಗಿದೆ. 1897ರಿಂದ 1912ರ ಮಧ್ಯೆ ನಿರ್ಮಿಸಲಾದ ಈ ಅರಮನೆ ಆವರಣದಲ್ಲಿ ಸೇರಿರುವ ಲಕ್ಷಾಂತರ ಜನ ದಸರಾ ಮೆರವಣಿಗೆಗೆ ಸಾಕ್ಷಿಯಾದರು.

* ಹುಲಿ ವೇಷಧಾರಿಗಳು ಹೆಜ್ಜೆ ಹಾಕುತ್ತಾ ಸಾಗುತ್ತಿದ್ದದ್ದು ನೋಡುಗರು ಹಜ್ಜೆ ಹಾಕುವಂತೆ ಮಾಡುತ್ತಿತ್ತು.

* ಡ್ರಿಜ್ಜವ್‌ಂ.. ಡ್ರಿಜ್ಜವ್‌ಂ... ಡ್ರಿಜಕ್ಕುಡ್ರಿಜ್ಜವ್‌ಂ... ಸದ್ದು ಹೊರಡಿಸುತ್ತಿದ್ದ, ಡೊಳ್ಳಾಸುರನನ್ನು ನೆನಪಿಸುವ ಡೊಳ್ಳು ಕುಣಿತದ ಪ್ರತಿ ಏಟೂ ನೆರೆದಿದ್ದವರನ್ನು ಹೆಜ್ಜೆ ಹಾಕುವಂತೆ ಮಾಡುತ್ತಿತ್ತು.

* ಸಮಾಳದ ತಾಳಕ್ಕೆ ವೀರಗಾಸೆ ಕುಣಿತ ಕಲಾವಿದರು ವೀರಶೈವ ಪರಂಪರೆಯನ್ನು ಪ್ರಸ್ತುತಪಡಿಸಿದರು.

* ಮೈಸೂರು ಅರಮನೆ ಕಲಾವಿದರ ವಾದ್ಯಗೋಷ್ಠಿ ಗಮನ ಸೆಳೆಯಿತು.

* ದಕ್ಷಿಣ ಭಾರತ ಸಾಂಸ್ಕೃತಿ ಸಂಘದ ಸದಸ್ಯರು ನುಡಿಸುತ್ತಾ ಸಾಗಿದ ಪುಣೇರಿ ಡೋಲು ಸದ್ದು ಮಾಡಿತು.

* 8ನೇ ಬಾರಿಗೆ ಅಂಬಾರಿ ಹೊತ್ತಿರುವ ಅರ್ಜುನ ಗಾಂಭೀರ್ಯದಿಂದ ಹೆಜ್ಜೆ ಹಾಕಿ, ಸಂಜೆ 6ಕ್ಕೆ ಜಂಬೂ ಸವಾರಿಯನ್ನು ಬನ್ನಿಮಂಟಪಕ್ಕೆ ತಲುಪಿಸಿದ. 20 ದಸರಾ ಮೆರವಣಿಗೆಯಲ್ಲಿ ಪಾಲ್ಗೊಂಡ ಹೆಗ್ಗಳಿಕೆ ಹೊಂದಿರುವ ಅರ್ಜುನ ಈ ಬಾರಿಯ ಮೆರವಣಿಗೆ ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾನೆ. ಬನ್ನಿ ಮಂಟಪದಲ್ಲಿ ಪಂಜಿನ ಕವಾಯತು ನಡೆಯಲಿದೆ. ಇದರೊಂದಿಗೆ ಪ್ರಸಕ್ತ ವರ್ಷದ ಮೈಸೂರು ದಸರಾ ಉತ್ಸವ ತೆರೆ ಕಾಣಲಿದೆ.

13 ಆನೆಗಳು

ಅಂಬಾರಿಹೊತ್ತ ‘ಅರ್ಜುನ‘ ಆನೆಯ ಜತೆಗೆಧನಂಜಯ, ಈಶ್ವರ,ಬಲರಾಮ, ಕಾವೇರಿ(ಹೆಣ್ಣಾನೆ, ಕುಮ್ಕಿ ಆನೆ), ವಿಜಯ (ಹೆಣ್ಣಾನೆ, ಕುಮ್ಕು ಆನೆ), ವಿಕ್ರಮ, ದುರ್ಗಾಪರಮೇಶ್ವರಿ(ಹೆಣ್ಣಾನೆ), ಜಯಪ್ರಕಾಶ್‌, ಲಕ್ಷಿ ಸೇರಿದಂತೆ 13 ಆನೆಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು. ‘ಜಯಮಾರ್ತಾಂಡ‘ ಆನೆ ಪ್ರಪ್ರಥಮ ಬಾರಿಗೆ ಅಂಬಾರಿ ಹೊತ್ತ ಹೆಗ್ಗಳಿಕೆ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.