ADVERTISEMENT

ಇದು ವರ್ಣಮಾಲೆಯ ಚಿತ್ರಕಲೆ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 9 ಸೆಪ್ಟೆಂಬರ್ 2018, 19:30 IST
Last Updated 9 ಸೆಪ್ಟೆಂಬರ್ 2018, 19:30 IST
ಚಿತ್ರ ಬಿಡಿಸುತ್ತಿರುವ ವಿದ್ಯಾರ್ಥಿಗಳು
ಚಿತ್ರ ಬಿಡಿಸುತ್ತಿರುವ ವಿದ್ಯಾರ್ಥಿಗಳು   

ಆ ಇ ಈ ಉ ಊ ಋ ಎ ಏ ಐ ಒ ಓ ಔ ಅಂ ಅಃ ಇದೇನು ಶಿಕ್ಷಕರು ಮಕ್ಕಳಿಗೆ ಕನ್ನಡ ವರ್ಣಮಾಲೆಯ ಅಕ್ಷರಾಭ್ಯಾಯಸವನ್ನೇನಾದರೂ ಮಾಡುತ್ತಿದ್ದಾರಾ ಎಂದು ಚಿಂತಿಸಬೇಡಿ. ಇದು ‘ವಿಶ್ವ ಸಾಕ್ಷರತಾ ದಿನಾಚರಣೆ’ ಅಂಗವಾಗಿ ‘ಆರ್ಟ್ ಮ್ಯಾಟರ್ರ್‍ಸ್’ ಸಂಸ್ಥೆಯು ‘ರಂಗೋಲಿ ಮೆಟ್ರೊ ಕಲಾ ಕೇಂದ್ರ’ದಲ್ಲಿ ಆಯೋಜಿಸಿರುವ ಚಿತ್ರ ಪ್ರದರ್ಶನವಿದು.

‘ಅ’ ಅಕ್ಷರದಲ್ಲಿ ಅಮ್ಮನ ಮಮತೆ, ಪ್ರೀತಿಯನ್ನು ಚಿತ್ರಿಸಿದರೆ, ‘ಆ’ ವರ್ಣಮಾಲೆಯಲ್ಲಿ ಬರುವ ಪ್ರಾಣಿ, ಪಕೃತಿಯನ್ನು ವರ್ಣಸಿದ್ದಾರೆ. ‘ಇ’ ಅಂದ್ರೆ ಇಲಿ ಅನ್ನುವ ಹಾಗೆ ಅನೇಕ ಇಲಿಯ ಚಿತ್ರಣ ಮೂಡಿಸಿದ್ದಾರೆ. ‘ಎ’ ವರ್ಣಮಾಲೆಯಲ್ಲಿ ಎಲೆ, ಪರಿಸರದ ಚಿತ್ರಣವನ್ನು ಮೂಡಿಸಿದ್ದಾರೆ. ಹೀಗೆ ಪ್ರತಿಯೊಂದು ವರ್ಣಮಾಲೆಯ ಮೇಲೆ ಅದಕ್ಕೆ ಸಂಬಂಧಿಸಿದಂತೆ ಕಲೆಯ ರಂಗನ್ನು ಚೆಲ್ಲಿ ಕನ್ನಡ ಭಾಷೆಯ ಬಗ್ಗೆ ತಿಳಿಸಿದ್ದಾರೆ.

ಕರ್ನಾಟಕ ಚಿತ್ರಕಲಾ ಪರಿಷತ್ತು, ಕೆನ್ ಚಿತ್ರಕಲಾ ಶಾಲೆ, ಕಲಾ ಮಂದಿರ, ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸೇರಿ ಸಾಕ್ಷರತಾ ದಿನಾಚರಣೆಯ ಚಿತ್ರಗಳನ್ನು ಬಿಡಿಸಿದ್ದಾರೆ.

ADVERTISEMENT

‘ಆಧುನಿಕ ಯುಗದಲ್ಲಿ ಶಿಕ್ಷಣ ಬಹುತೇಕರ ಕೈಗೆಟಕುವಂತಾಗಿದೆ. ಸಾಕ್ಷರತಾ ದಿನಾಚರಣೆ ಕೇವಲ ಅಕ್ಷರಾಭ್ಯಾಸಕ್ಕೆ ಮಾತ್ರ ಮೀಸಲಾಗದೆ, ಅವರ ನಡವಳಿಕೆ, ಹಾವಭಾವಗಳಿಗೂ ಸಂಬಂಧಿಸುತ್ತಿರುತ್ತದೆ. ಕನ್ನಡ ಭಾಷೆಯೂ ಪುಸ್ತಕಕ್ಕೆ ಸೀಮಿತವಾಗುತ್ತಿದೆಯೋ ಎಂಬ ಆತಂಕ ಎದುರಾಗುತ್ತಿದೆ. ಹಾಗಾಗಿ ಕನ್ನಡ ಭಾಷೆಯ ಉಳಿವು ಹಾಗೂ ಸಾಕ್ಷರತಾ ದಿನಾಚರಣೆ ಅಂಗವಾಗಿ ಇದೊಂದು ಅರಿವಿನ ಕಾರ್ಯಕ್ರಮ’ ಎಂದು ಆರ್ಟ್ ಮ್ಯಾಟರ್ರ್‍ಸ್ ಸಂಚಾಲಕರಾದ ಶಿವಪ್ರಸಾದ್ ತಿಳಿಸಿದರು. ಸಮಾಜಕ್ಕೆ ಕಲೆಯ ಮೂಲಕವೇ ಏನಾದರೂ ಕೊಡುಗೆ ನೀಡಬೇಕೆಂದು ಕರ್ನಾಟಕ ಚಿತ್ರಕಲಾ ಪರಿಷತ್ತಿನ ವಿದ್ಯಾರ್ಥಿಗಳು ಮೂರು ವರ್ಷಗಳ ಹಿಂದೆ ’ಆರ್ಟ್ ಮ್ಯಾಟರ್ರ್‍ಸ್’ ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. ಸಾಮಾಜಿಕ ಕಳಕಳಿಯ ವಿಷಯಗಳಿಗೆ ಸಂಬಂಧಿಸಿದಂತೆ ಇದು ಕಾರ್ಯನಿರ್ವಹಿಸುತ್ತಿದೆ.

ಚಿತ್ರಕಲಾ ಪರಿಷತ್ತಿನ ವಿದ್ಯಾರ್ಥಿಗಳು ಕನ್ನಡದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲೆಂದು ಕಲೆಯ ಕಲಾರಸಿಕತೆಯನ್ನು ಅಚ್ಚಳಿಸಿದ್ದಾರೆ. ಇದೊಂದು ವಿಭಿನ್ನ ರೀತಿಯ ಚಟುವಟಿಕೆ.

‘ಹೀಗೆ ಕೆಲವು ವರ್ಷಗಳಿಂದ ಸಾಮಾಜಿಕ ಕಳಿಕಳಿಯ ವಿಷಯಗಳಿಗೆ ಸಂಬಂಧಿಸಿದಂತೆ ತಿಂಗಳಿಗೆ ಒಂದಾದರೂ ಕಲಾಪ್ರದರ್ಶನವನ್ನು ನೀಡುತ್ತಾ ಬರುತ್ತಿದ್ದೇವೆ. ಅಂತರರಾಷ್ಟ್ರೀಯ ದಿನಾಚರಣೆಗಳಂದು ಬೆಂಗಳೂರು ಮತ್ತು ಮೈಸೂರು ಎರಡೂ ಕಡೆಗಳಲ್ಲೂ ಚಿತ್ರಪ್ರದರ್ಶನಗಳನ್ನು ನಡೆಸಿದ್ದೇವೆ. ಇತ್ತೀಚೆಗೆ ಅತ್ಯಾಚಾರಗಳು ಹೆಚ್ಚಾಗುತ್ತಿದ್ದು, ಅದು ನಿಲ್ಲಬೇಕು ಎಂದು ಜಾಗೃತಿ ಮೂಡಿಸಲು ಕಳೆದ ತಿಂಗಳು ಚಿತ್ರಪ್ರದರ್ಶನವನ್ನು ಆಯೋಜಿಸಿದ್ದೆವು ಎಂದು ಶಿವಪ್ರಸಾದ್‌ ಮಾಹಿತಿ ನೀಡಿದರು.

ಶನಿವಾರದಿಂದ ಆರಂಭವಾಗಿರುವ ಇದು ಸೆಪ್ಟೆಂಬರ್‌ 15ರವರೆಗೂ ಮಹಾತ್ಮ ಗಾಂಧಿ ರಸ್ತೆಯ ‘ರಂಗೋಲಿ ಮೆಟ್ರೊ ಕಲಾ ಕೇಂದ್ರದಲ್ಲಿ’ ಈ ಚಿತ್ರ ಪ್ರದರ್ಶನ ಇರುತ್ತದೆ. ಉಚಿತ ಪ್ರವೇಶಾವಕಾಶವಿದ್ದು ಕಲಾರಸಿಕರು, ಆಸಕ್ತರು ಪ್ರದರ್ಶನವನ್ನು ಣ್ತುಂಬಿಸಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.