ಯಲಹಂಕ: ನಿರುಪಯುಕ್ತ ವಾಹನಗಳ ಬಿಡಿಭಾಗಗಳಿಂದ ತಯಾರಿಸಿರುವ ಕಲಾಕೃತಿಗಳು ಇಲ್ಲಿನ ದೊಡ್ಡಬಳ್ಳಾಪುರ ಮುಖ್ಯರಸ್ತೆಯ ಎನ್.ಇ.ಎಸ್ ವೃತ್ತ, ಮೇಜರ್ ಸಂದೀಪ್ ಉನ್ನಿಕೃಷ್ಣನ್ ರಸ್ತೆ ಹಾಗೂ ಡೇರಿ ವೃತ್ತದ ಪಾದಚಾರಿ ಮಾರ್ಗಗಳಲ್ಲಿ ಜನರನ್ನು ಆಕರ್ಷಿ
ಸುತ್ತಿವೆ.
ಅಶೋಕ ಸ್ತಂಭ, ಕುದುರೆ, ಜಿಂಕೆ, ಆನೆ, ಗೂಳಿ, ಸಿಂಹ, ಆಟೊ, ಟ್ರ್ಯಾಕ್ಟರ್, ಅಂಬಾಸೆಡರ್ ಕಾರ್ ಸೇರಿದಂತೆ ಲೋಹದ ವಿವಿಧ ಕಲಾಕೃತಿಗಳನ್ನು ರಸ್ತೆಬದಿ ಹಾಗೂ ವೃತ್ತಗಳಲ್ಲಿ ನಿಲ್ಲಿಸಲಾಗಿದೆ. ಇವುಗಳಿಗೆ ಬಣ್ಣ ಬಣ್ಣದ ವಿದ್ಯುತ್ ದೀಪಗಳ ಅಲಂಕಾರ ಮಾಡಲಾಗಿದೆ. ರಾತ್ರಿ ವೇಳೆ ಝಗಮಗಿಸುವ ಬೆಳಕಿನಿಂದ ಕಂಗೊಳಿಸುತ್ತಿರುವ ಈ ಕಲಾಕೃತಿಗಳು ಇಲ್ಲಿನ ರಸ್ತೆಗಳಲ್ಲಿ ಸಾಗುವವರ ಕಣ್ಮನ ಸೆಳೆಯುತ್ತಿವೆ.
ಕಲಾಕೃತಿಗಳನ್ನು ಉದ್ಘಾಟಿಸಿದ ಶಾಸಕ ಎಸ್.ಆರ್.ವಿಶ್ವನಾಥ್, ‘ನಿರುಪಯುಕ್ತ ವಾಹನಗಳ ಬಿಡಿಭಾಗಗಳನ್ನು ಬಳಸಿಕೊಂಡು ಈ ಲೋಹದ ಕಲಾಕೃತಿಗಳನ್ನು ಸಿದ್ಧಪಡಿಸಲಾಗಿದೆ. ಜನರನ್ನು ಆಕರ್ಷಿಸುವಂತೆ ರಸ್ತೆ ಬದಿಗಳಲ್ಲಿ ನಿಲ್ಲಿಸಲಾಗಿದೆ. ಈ ಕಲಾಕೃತಿಗಳಿಗೆ ಹಾಗೂ ಇಲ್ಲಿನ ವಿಶೇಷ ಉದ್ಯಾನ ನಿರ್ಮಾಣಕ್ಕೆ ಪಾಲಿಕೆ ವತಿಯಿಂದ ಒಟ್ಟು ₹3 ಕೋಟಿ ವೆಚ್ಚ ಮಾಡಲಾಗಿದೆ’ ಎಂದರು.
‘ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಯಲಹಂಕ ನಗರವನ್ನು ವಿಶೇಷ ಆಕರ್ಷಣೆಗಳ ಮೂಲಕ ಮತ್ತಷ್ಟು ವರ್ಣರಂಜಿತವಾಗಿಸಲು ಕ್ರಮ ಕೈಗೊಳ್ಳಲು ಸರ್ಕಾರ ಬದ್ಧವಾಗಿದೆ’ ಎಂದರು.
ಬಿಬಿಎಂಪಿ ಯಲಹಂಕ ವಲಯದ ಜಂಟಿ ಆಯುಕ್ತರಾದ ಪೂರ್ಣಿಮಾ,ಸಹಾಯಕ ಕಾರ್ಯಪಾಲಕ ಎಂಜಿನಿಯರ್ ನಂದೀಶ್, ಬಿಜೆಪಿ ಮುಖಂಡರಾದ ಎಂ.ಸತೀಶ್, ಎಂ.ಮುನಿರಾಜು, ಎ.ಸಿ.ಮುನಿಕೃಷ್ಣಪ್ಪ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.