ಕಲೆ ಮತ್ತು ಪ್ರಕೃತಿಗೆ ಒಂದು ಬಗೆಯ ಅನ್ಯೋನ್ಯವಾದ ಸಂಬಂಧ. ಪ್ರಕೃತಿಯಲ್ಲಿ ಸಿಗುವ ನೈಜ ವಸ್ತುಗಳನ್ನು ಬಳಸಿಕೊಂಡು ಕಲೆಗಾರ ತನ್ನ ಚಾಣಾಕ್ಷ್ಯದಿಂದ ಕಲೆಗೆ ಚೆಂದದ ಸೊಬಗನ್ನು ನೀಡುತ್ತಾನೆ. ಅಂಥ ಕಲಾತ್ಮಕ ಹವ್ಯಾಸ ಜಗದೀಶ ಎಚ್.ಎನ್. ಅವರಿಗೆ ಕರಗತ.
ತುಮಕೂರು ಜಿಲ್ಲೆಯ ಹೊನ್ನುಡಿಕೆ ಗ್ರಾಮದ ಜಗದೀಶ, ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ವಾಣಿಜ್ಯ ಪದವಿ ವಿದ್ಯಾರ್ಥಿ. ಅವರ ಕೈಗೆ ಕಡು (ಚಾಕ್ಪೀಸ್) ಸಿಕ್ಕರೆ ಸಾಕು; ಅದು ಕತ್ತಿಯಾಗಲಿದೆ, ಸಿಂಹಮುದ್ರೆಯಾಗಲಿದೆ, ಗದೆಯಾಗಲಿದೆ, ಅಷ್ಟೇ ಅಲ್ಲ; ಒಂದರೊಳಗೊಂದು ಕೊಂಡಿ ಬೆಸೆದುಕೊಂಡ ಸರಪಳಿಯೂ ಆಗಲಿದೆ. ಅವರ ಇಂಥ ಕಲಾತ್ಮಕತೆ ಮೂಗಿನ ಮೇಲೆ ಬೆರಳನ್ನಿರಿಸಲಿದೆ. ಕೆತ್ತನೆಯಲ್ಲಿ ಅಷ್ಟು ಸೂಕ್ಷ್ಮವೆನಿಸುವ ಕೈಚಳಕವನ್ನು ಜಗದೀಶ ಹೊಂದಿದ್ದಾರೆ.
ಸೂಜಿ, ಕಟರ್,ಇಂಕ್ಪೆನ್ ಮತ್ತು ಇಯರ್ ಬಡ್ಸ್, ಫೆವಿಕ್ವಿಕ್ ಅನ್ನು ಬಳಸಿಕೊಂಡು ಈಗಾಗಲೇ 45ಕ್ಕೂ ಹೆಚ್ಚಿನ ಚಾಕ್ ಪೀಸ್ ಕಲಾಕೃತಿಯನ್ನು ರಚಿಸಿದ್ದಾರೆ. ಮೊಬೈಲಿನಲ್ಲಿ ಕಲಾಕೃತಿಯನ್ನು ಡೌನ್ಲೋಡ್ ಮಾಡಿ ಅದರಂತೆ ಕೆತ್ತಿ ಕಲಾತ್ಮಕತೆ ತೋರುತ್ತಾರೆ. ಇದಕ್ಕಾಗಿ ಅವರು ಯಾರ ಬಳಿಯೂ ತರಬೇತಿ ಪಡೆದಿಲ್ಲ. ಆಸಕ್ತಿಯಿಂದ, ಅಷ್ಟೇ ಪರಿಶ್ರಮದಿಂದ ಈ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಸತತ ಐದು ವರ್ಷದ ಪ್ರಯತ್ನದ ಫಲವೇ ಅಪೂರ್ವ ಕಲಾಕೃತಿಗಳು. ಕಂಬ, ವಿಗ್ರಹ, ಕತ್ತಿ, ಲಿಂಗ, ಗೋಪುರ, ಗೊಂಬೆಯ ಮುಖ, ಹೂವು, ಮಂಟಪ, ಚೈನ್ ಹಲವಾರು ಪ್ರಕಾರದ ಕಲಾಕೃತಿಯನ್ನು ಈಗಾಗಲೇ ರಚಿಸಿದ್ದಾರೆ.
ಚಾಕ್ಪೀಸ್ನಲ್ಲಿ ಮಾತ್ರವಲ್ಲದೆ ಡ್ರಾಯಿಂಗ್ ಪೆನ್ಸಿಲ್ ಮತ್ತು ಅಡಿಕೆಯಲ್ಲೂ ಸುಂದರ ಕುಸುರಿ ಕೆತ್ತನೆಯ ಪಾಂಡಿತ್ಯ ಹೊಂದಿದ್ದಾರೆ. ಮುಂದೆ ಐಪಿಎಸ್ ಆಗುವ ಕನಸನ್ನು ಹೊತ್ತ ಇವರು ತಮ್ಮ ಈ ಹವ್ಯಾಸದಿಂದ ಗಿನ್ನಿಸ್ ದಾಖಲೆ ಮಾಡುವ ಬಯಕೆಯನ್ನು ಹೊಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.