ADVERTISEMENT

‘ಸಂಸ್ಕೃತ ಸಂಜೀವಿನಿ’ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 1 ಜನವರಿ 2019, 19:45 IST
Last Updated 1 ಜನವರಿ 2019, 19:45 IST
ಜ್ಞಾನಾಕ್ಷಿ ಶಾಲೆ
ಜ್ಞಾನಾಕ್ಷಿ ಶಾಲೆ   

ಸಂಸ್ಕೃತ ಭಾರತೀಯ ಸಂಸ್ಥೆಯು ‘ಸಂಸ್ಕೃತ ಸಂಜೀವಿನಿ’ ತ್ರೈವಾರ್ಷಿಕ ಸಂಸ್ಕೃತ ಸಮ್ಮೇಳನವನ್ನು ಇದೇ 4 ರಿಂದ 6ರ ವರೆಗೆ ರಾಜರಾಜೇಶ್ವರಿನಗರದ ಜ್ಞಾನಾಕ್ಷಿ ವಿದ್ಯಾನಿಕೇತನ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದೆ.

ರಾಜ್ಯದ ವಿವಿಧ ಜಿಲ್ಲೆಗಳಿಂದ 1,500 ಪ್ರತಿನಿಧಿಗಳು ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ. ಗ್ರಾಮ, ತಾಲ್ಲೂಕು, ಜಿಲ್ಲೆ, ನಗರ ಮತ್ತು ಪ್ರಾಂತ ಮಟ್ಟದ ಜವಾಬ್ದಾರಿ ಹೊತ್ತಿರುವ ಕಾರ್ಯಕರ್ತರು, ಅಂಚೆ ಮೂಲಕ ಸಂಸ್ಕೃತ ಕಲಿಯುತ್ತಿರುವ ಸಮಾಜದ ಗಣ್ಯರು, ಮಹಿಳೆಯರು, ಸಂಸ್ಕೃತ ಪರಿವಾರ ಸದಸ್ಯರು, ಸಂಸ್ಕೃತ ಹಿತೈಷಿಗಳು, ಸಂಸ್ಕೃತ ಶಿಕ್ಷಕರು, ವಿದ್ವಾಂಸರೂ ಭಾಗವಹಿಸಲಿದ್ದಾರೆ.

ಸಮ್ಮೇಳನದ ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾಗಿ ತಿರುಚ್ಚಿ ಸಂಸ್ಥಾನ ಮಠದ ಜಯೇಂದ್ರಪುರಿ ಸ್ವಾಮೀಜಿ, ಅಧ್ಯಕ್ಷರಾಗಿ ಸಾಹಿತಿ ಹಂಪ ನಾಗರಾಜಯ್ಯ, ಉಪಾಧ್ಯಕ್ಷರಾಗಿ, ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ್, ಜ್ಞಾನಾಕ್ಷಿ ವಿದ್ಯಾನಿಕೇತನದ ಕಾರ್ಯದರ್ಶಿ ಹಯಗ್ರೀವಾಚಾರ್ಯರು, ಅದಮ್ಯಚೇತನ ಸಂಸ್ಥೆಯ ಅಧ್ಯಕ್ಷೆ ಡಾ. ತೇಜಸ್ವಿನಿ ಅನಂತಕುಮಾರ, ಗೂಗಲ್ ಸಂಸ್ಥೆಯ ಪ್ರಮುಖ ಆನಂದರಂಗರಾಜನ್ ಮತ್ತು ಕೋಷಾಧ್ಯಕ್ಷರನ್ನಾಗಿ ಲೆಕ್ಕ ಪರಿಶೋಧಕ ದೀಪಕ್ ಪದ್ಮನಾಭನ್ ಅವರನ್ನು ಆಯ್ಕೆ ಮಾಡಲಾಗಿದೆ. ಜೊತೆಗೆ 40ಕ್ಕೂ ಹೆಚ್ಚಿನ ಗಣ್ಯರನ್ನು ಸ್ವಾಗತ ಸಮಿತಿಯ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

ಇದೇ 4ರಂದು ಬೆಳಿಗ್ಗೆ 10ಕ್ಕೆ ವಸ್ತು ಪ್ರದರ್ಶನ ನಡೆಯಲಿದ್ದು, ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ ಉದ್ಘಾಟಿಸಲಿದ್ದಾರೆ. ಪ್ರದರ್ಶನದಲ್ಲಿ ಸಂಸ್ಕೃತಕ್ಕೆ ಸಂಬಂಧಿಸಿದ ವಿವಿಧ ವಸ್ತುಗಳ ಪರಿಚಯ, ಪ್ರಾಚೀನ ಭಾರತೀಯರ ಸಾಧನೆಯನ್ನು ಪ್ರತಿಬಿಂಬಿಸುವ ಜ್ಞಾನ- ವಿಜ್ಞಾನ, ತಂತ್ರಜ್ಞಾನ, ಗಣಿತ, ಅರ್ಥಶಾಸ್ತ್ರಗಳ ವಿಸ್ತೃತ ವಿವರಣೆ ನೀಡುವ ಫಲಕಗಳು, ಪ್ರತಿಕೃತಿಗಳು ಇರಲಿವೆ.

50ಕ್ಕೂ ಅಧಿಕ ಶೈಕ್ಷಣಿಕ ಸಂಸ್ಥೆಗಳ ವಿದ್ಯಾರ್ಥಿಗಳು ತಯಾರಿಸಿದ ಫಲಕಗಳು ಮತ್ತು ಮಾದರಿಗಳನ್ನು ಸಾರ್ವಜನಿಕರ ಪ್ರದರ್ಶನಕ್ಕೆ ಇಡಲಾಗುವುದು. ಸಂಸ್ಕೃತ ಪ್ರಚಾರಕ ಅಂಗಡಿಗಳು, ಸಂಸ್ಕೃತ ಪುಸ್ತಕ ಪ್ರದರ್ಶನ ಸಹ ಇದೆ. 5ರಂದು ಬೆಳಿಗ್ಗೆ 10ಕ್ಕೆಸಮ್ಮೇಳನದ ಉದ್ಘಾಟನೆ ಜರುಗಲಿದೆ. ಅಂದು ಸಂಜೆ 6 ರಿಂದ 8ರ ವರೆಗೆ ಸಾಂಸ್ಕೃತಿಕ ಕಾರ್ಯಕ್ರಮ ಇರುತ್ತದೆ. ಇದೇ 6 ರಂದು ಬೆಳಿಗ್ಗೆ 9 ಗಂಟೆಗೆ ಬೆಂಗಳೂರು ಐಐಎಂನ ಪ್ರಾಧ್ಯಾಪಕ ಪ್ರೊ.ಬಿ.ಮಹದೇವನ್‌ ಅವರೊಂದಿಗೆ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಧ್ಯಾಹ್ನ 3ಕ್ಕೆ‘ಸಂಸ್ಕೃತ ಸಾಮರಸ್ಯ’ ವಿಷಯದ ಬಗ್ಗೆ ಸಾರ್ವಜನಿಕ ಸಭಾಕಾರ್ಯಕ್ರಮ ಆಯೋಜಿಸಲಾಗಿದೆ.

ಸಂಭಾಷಣಾ ಶಿಬಿರ

ಸಮ್ಮೇಳನಕ್ಕೆ ಪೂರ್ವಭಾವಿಯಾಗಿ ಡಿಸೆಂಬರ್ 22ರಿಂದಈಗಾಗಲೇ ನಗರದ ವಿವಿಧೆಡೆ 52 ಸಂಸ್ಕೃತ ಸಂಭಾಷಣ ಶಿಬಿರಗಳನ್ನು ಆಯೋಜಿಸಲಾಗಿದೆ. ಶಿಬಿರಗಳಲ್ಲಿ ಸಂಸ್ಕೃತ ಸಂಭಾಷಣೆಯ ಬಗ್ಗೆ ಮಾಹಿತಿ ನೀಡಿ ಆಸಕ್ತರಿಗೆ ಅದನ್ನು ಕಲಿಸಲಾಗುತ್ತಿದೆ.ಶಿಬಿರಗಳಲ್ಲಿ ಪಾಲ್ಗೊಳ್ಳಲು ಮುಕ್ತ ಅವಕಾಶವಿದ್ದು, ಯಾವುದೇ ಶುಲ್ಕವಿಲ್ಲ. ನಗರದ ಶೃಂಗೇರಿ ರಾಜೀವಗಾಂಧಿ ಪರಿಸರದ ಮಹಾವಿದ್ಯಾಲಯದಸ್ಥಾನೀಯ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ಶಿಬಿರ ನಡೆಸಿಕೊಡುತ್ತಿದ್ದಾರೆ.

ಸಂಪರ್ಕ: 8951446682 / 9886675794

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.