ಹೊಸ ವರ್ಷದ ಆರಂಭದಲ್ಲಿ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ವನಿತೆಯರ ಯಕ್ಷ ಕಲರವ ಹೊರಹೊಮ್ಮಲಿದೆ. ಯಕ್ಷಗಾನ ಯೋಗಕ್ಷೇಮ ಅಭಿಯಾನದಡಿಯಲ್ಲಿ ತೆಂಕು ಬಡಗಿನ ಮುಮ್ಮೇಳ ಮಹಿಳಾ ಕಲಾವಿದರ ಸಮಾಗಮದಲ್ಲಿ ಪ್ರಪ್ರಥಮ ಬಾರಿಗೆ ಕಲಾಕ್ಷೇತ್ರದಲ್ಲಿ ಪ್ರವೇಶ ಧನದೊಂದಿಗೆ ದ್ರೌಪದಿ ಪ್ರತಾಪ ಮತ್ತು ದಕ್ಷಯಜ್ಞ ಪ್ರಸಂಗಗಳು ಸುರೇಶ ಹೆಗಡೆಯವರ ಸಂಯೋಜನೆಯಲ್ಲಿ ಪ್ರದರ್ಶನಗೊಳ್ಳಲಿವೆ.
ಎರಡು ದಶಕದ ಹಿಂದೆ ಕಲಾಸಕ್ತರ ಸಹಯೋಗದೊಂದಿಗೆ ದಿ.ವಿ.ಆರ್.ಹೆಗಡೆ ಹೆಗಡೆಮನೆಯವರು ಪ್ರಾರಂಭಿಸಿದ ಯಕ್ಷಗಾನ ಯೋಗಕ್ಷೇಮ ಅಭಿಯಾನ, ಯಕ್ಷಗಾನದ ಬೆಳವಣಿಗೆಯಲ್ಲಿ ತನ್ನದೇ ಕೊಡುಗೆ ನೀಡಿದೆ.
ಯಕ್ಷಗಾನದ 18 ಕಲಾವಿದರಿಗೆ ಒಂದು ಲಕ್ಷ ರೂಪಾಯಿಗಳ ಹಮ್ಮಿಣಿಯೊಂದಿಗೆ ಗೌರವಿಸಿದ್ದು ಇದರ ಹೆಗ್ಗಳಿಕೆ. ಸಪ್ತಾಹ, ದಶಾಹಗಳನ್ನು ಕಲಾಪೋಷಕರ ಸಹಕಾರದಿಂದ ನಡೆಸಿ ಮಕ್ಕಳು, ಮಹಿಳೆಯರು, ಹವ್ಯಾಸಿ ಕಲಾವಿದರುಗಳಿಗೆ ವೇದಿಕೆಯನ್ನು ಒದಗಿಸಿಕೊಟ್ಟಿದೆ.
ಗಂಡು ಕಲೆಯೆಂದೇ ಈ ಹಿಂದೆ ಇದ್ದ ಹೆಸರನ್ನು ಅಳಿಸಿ ಇದೀಗ ಮಹಿಳೆಯರು ಪುರುಷರಿಗೆ ಸರಿಸಟಿಯಾಗಿ ಪ್ರದರ್ಶನ ನೀಡುತ್ತಿದ್ದಾರೆ. ತೆಂಕು ಬಡಗು ಎರಡೂ ಪ್ರಕಾರಗಳ ಅನುಭವಿ ಕಲಾವಿದರಿದ್ದಾರೆ. ಹಿಮ್ಮೇಳದ ಭಾಗವತಿಕೆ, ಮದ್ದಲೆ, ಚಂಡೆ, ಮುಮ್ಮೇಳದ ನರ್ತನ, ಅಭಿನಯ, ಅರ್ಥಗಾರಿಕೆಯನ್ನು ಮೈಗೂಡಿಸಿಕೊಂಡವರಿದ್ದಾರೆ. ದೇಶ ವಿದೇಶಗಳಲ್ಲಿ ಯಕ್ಷಗಾನದ ಕಂಪನ್ನು ಪಸರಿಸಿದ ಪ್ರಮೀಳೆಯರೂ ಇದ್ದಾರೆ. ಇವರೆಲ್ಲರ ಸಮಾಗಮದ ಕೂಡಾಟವೇ ‘ಮಹಿಳಾ ಯಕ್ಷೋತ್ಸವ–2020’ ಜನವರಿ 12 ಭಾನುವಾರ ಮಧ್ಯಾಹ್ನ 3.30ರಿಂದ ಕಲಾಕ್ಷೇತ್ರದಲ್ಲಿ ನಡೆಯಲಿದೆ.
ತೆಂಕುತಿಟ್ಟು ಹಿಮ್ಮೇಳ ಕಲಾವಿದರು: ಶಿವಶಂಕರ ಭಟ್ ಬಲಿಪ, ಭವ್ಯಶ್ರೀ ಕುಲ್ಕುಂದ, ಅವಿನಾಶ ಬೈಪಡಿತ್ತಾಯ, ಅಕ್ಷಯ ರಾವ್ ವಿಟ್ಲ, ದಿವ್ಯಶ್ರೀ ಸುಬ್ರಹ್ಮಣ್ಯ, ಶಿಖಿನ್ ಶರ್ಮ ಶರವೂರು. ಮುಮ್ಮೇಳ ಕಲಾವಿದರು: ಪೂರ್ಣಿಮಾ ಯತೀಶ್ ರೈ, ಸಾಯಿಸುಮಾ ಮಿಥುನ್ ನಾವಡ, ಸುಷ್ಮಾ ಮೈರ್ಪಾಡಿ ವಶಿಷ್ಠ, ಲತಾ ಹೊಳ್ಳ, ಶರಣ್ಯ ರಾವ್ ಶರವೂರು, ಛಾಯಾಲಕ್ಷ್ಮಿ ಆರ್.ಕೆ., ಅಶ್ವಿನಿ ಆಚಾರ್ಯ.
ಬಡಗುತಿಟ್ಟು ಹಿಮ್ಮೇಳ ಕಲಾವಿದರು: ಸರ್ವೇಶ್ವರ ಹೆಗಡೆ ಮೂರೂರು, ಸುಬ್ರಾಯ ಹೆಬ್ಬಾರ, ಆನಂದ ಅಂಕೋಲ, ಅನಂತ ಪದ್ಮನಾಭ ಪಾಠಕ್, ನಾರಾಯಣ ಹೆಬ್ಬಾರ, ಶ್ರೀನಿವಾಸ ಪ್ರಭು, ಆದಿತ್ಯ ಕಾಶೈನ್, ಗಣೇಶ ಭಂಡಾರಿ.
ಮುಮ್ಮೇಳ ಕಲಾವಿದರು: ಕಿರಣ ಪೈ, ಸೌಮ್ಯಾ ಅರುಣ, ಅಶ್ವಿನಿ ಕೊಂಡದಕುಳಿ, ಅರ್ಪಿತಾ ಹೆಗಡೆ, ನಾಗಶ್ರೀ ಜಿ.ಎಸ್., ನಿಹಾರಿಕಾ ಭಟ್, ಮಾನಸಾ ಉಪಾಧ್ಯ, ವಿದ್ಯಾ ನಾಯ್ಕ, ವಿನಯ ನಾಯ್ಕ, ಶ್ರೇಯಾ, ಶ್ರಾವ್ಯಾ ಮುಂತಾದವರಿದ್ದಾರೆ.
ಸಂಪರ್ಕ: 9986509511, 934183907
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.