ಶ್ರೀಕೃಷ್ಣ
ಮಹಾವಿಷ್ಣುವಿನ ಎಂಟನೆಯ ಅವತಾರ ಶ್ರೀಕೃಷ್ಣ. ಹುಟ್ಟಿನ ಜೊತೆಯಲ್ಲೇ ಪವಾಡಗಳನ್ನೂ ಹೊತ್ತು ತಂದ. ನಂತರ ಗೋಕುಲದಲ್ಲಿ ಬೆಳೆದ. ತನ್ನನ್ನು ಕೊಲ್ಲಲು ದುಷ್ಟ ಮಾವ ಕಂಸ ಯತ್ನಿಸಿದಾಗ, ಅವನ ಪ್ರಯತ್ನಗಳನ್ನೆಲ್ಲ ವಿಫಲಗೊಳಿಸಿದ. ನಂತರ ಕಂಸನನ್ನು ಸಂಹರಿಸಿದ.
ದೊಡ್ಡವನಾದ ನಂತರ ಶ್ರೀಕೃಷ್ಣ ಮಹಾಭಾರತದಲ್ಲಿ ಬಹುದೊಡ್ಡ ಪಾತ್ರ ನಿಭಾಯಿಸಿದ. ಕುರುಕ್ಷೇತ್ರ ಯುದ್ಧದಲ್ಲಿ ಅರ್ಜುನನ ಸಾರಥಿಯಾದ. ಯುದ್ಧರಂಗದಲ್ಲಿ ತನ್ನ ಬಂಧುಗಳ ಮೇಲೆ ಬಾಣ ಹೂಡಲು ಅರ್ಜುನ ಹಿಂದೇಟು ಹಾಕಿದಾಗ, ಶ್ರೀಕೃಷ್ಣ ಅರ್ಜುನನಿಗೆ ಯುದ್ಧರಂಗದಲ್ಲೇ ಉಪದೇಶ ನೀಡಿದ. ಧರ್ಮಕ್ಕಾಗಿ ಹೋರಾಡುವಂತೆ ಪ್ರೇರೇಪಿಸಿದ. ಈ ಉಪದೇಶವೇ ಭಗವದ್ಗೀತೆ ಎಂದು ಪ್ರಸಿದ್ಧವಾಗಿದೆ!
**
ಬಾಲ ಇಲ್ಲದ ಬೆಕ್ಕು!
ಬಾಲ ಇಲ್ಲದ ಬೆಕ್ಕು ‘ಮ್ಯಾಂಕ್ಸ್’ನ ಮೂಲ ಇರುವುದು ಇಂಗ್ಲೆಂಡ್ ಸಮೀಪದ ದ್ವೀಪ ಐಲಸ್ ಮ್ಯಾನ್ನಲ್ಲಿ. ಈ ದ್ವೀಪದಲ್ಲಿ ಈ ಬೆಕ್ಕು ಇಂದಿಗೂ ಕಂಡುಬರುತ್ತದೆ. ಮ್ಯಾಂಕ್ಸ್ ಬೆಕ್ಕು ಗುಂಡಗಿನ ದೇಹ ಹೊಂದಿದೆ. ಇದರ ಮುಖ ದುಂಡಗಿದೆ, ಕಣ್ಣುಗಳು ಕೂಡ ಹಾಗೇ ಇವೆ. ಇದರ ಹಿಂದಿನ ಕಾಲುಗಳು ಉದ್ದವಾಗಿದ್ದು, ಆ ಕಾರಣದಿಂದಾಗಿ ಇದರ ಭುಜಕ್ಕಿಂತಲೂ ಹಿಂಭಾಗವೇ ಎತ್ತರವಾಗಿ ಕಾಣುತ್ತದೆ. ಈ ಬೆಕ್ಕು ಭಾರಿ ವೇಗದಲ್ಲಿ ಓಡಬಲ್ಲದು.
ಇದರ ಬಾಲ ಬಹಳ ವಿಶಿಷ್ಟ. ಮಧ್ಯಮ ಗಾತ್ರದ ಬೆಕ್ಕಿನಲ್ಲಿ ಚಿಕ್ಕದಾದ ಬಾಲ ಇರಬಹುದು, ಬಾಲ ಇಲ್ಲದೆಯೂ ಇರಬಹುದು. ಈ ಬೆಕ್ಕಿನ ಬೆನ್ನುಹುರಿಯಲ್ಲಿ ಆದ ನೈಸರ್ಗಿಕ ಬದಲಾವಣೆಯ ಕಾರಣದಿಂದಾಗಿ ಬಾಲ ಇಲ್ಲವಾಗಿದೆ. ಬಾಲ ಇಲ್ಲದ ಮ್ಯಾಂಕ್ಸ್ ಬೆಕ್ಕನ್ನು ‘ರಂಪಿ’ ಎಂದು, ಚಿಕ್ಕ ಬಾಲ ಇರುವ ಬೆಕ್ಕನ್ನು ‘ಸ್ಟಂಪಿ’ ಅಥವಾ ‘ಸ್ಟಬ್ಬಿ’ ಎಂದು ಕರೆಯಲಾಗುತ್ತದೆ. ಈ ಬೆಕ್ಕುಗಳು ಮನುಷ್ಯನ ಸ್ನೇಹಿತರು. ತಮ್ಮ ಒಡೆಯನ ಬಗ್ಗೆ ಇವುಗಳಿಗೆ ಭಾರಿ ಕಾಳಜಿ.
ಈ ದ್ವೀಪದ ಜನ ಈ ಬೆಕ್ಕುಗಳ ಬಗ್ಗೆ ಅಭಿಮಾನ ಹೊಂದಿದ್ದಾರೆ. ಇವು ತಮ್ಮ ಸಾಂಸ್ಕೃತಿಕ ಪರಂಪರೆಯ ಭಾಗ ಎಂದು ಭಾವಿಸಿದ್ದಾರೆ. ಅಲ್ಲಿನ ನೋಟುಗಳ ಮೇಲೆ, ಅಂಚೆ ಚೀಟಿಗಳ ಮೇಲೆ ಈ ಬೆಕ್ಕುಗಳ ಚಿತ್ರ ಇದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.