ADVERTISEMENT

ಸಂದರ್ಶನ | ವಿಚಾರ ಸಾಹಿತ್ಯದಿಂದ ಯುದ್ಧಗಳನ್ನೇ ತಪ್ಪಿಸಬಹುದು: ಬಿ. ಸುಜ್ಞಾನಮೂರ್ತಿ

ಅರುಣ್ ಜೋಳದ ಕೂಡ್ಲಿಗಿ
Published 11 ಜುಲೈ 2020, 19:32 IST
Last Updated 11 ಜುಲೈ 2020, 19:32 IST
ಬಿ. ಸುಜ್ಞಾನಮೂರ್ತಿ (ಚಿತ್ರ: ಶಿವಶಂಕರ್ ಬಣಗಾರ)
ಬಿ. ಸುಜ್ಞಾನಮೂರ್ತಿ (ಚಿತ್ರ: ಶಿವಶಂಕರ್ ಬಣಗಾರ)   

ತೆಲುಗು ಸಾಹಿತ್ಯದ ಪ್ರಖರ ವೈಚಾರಿಕತೆಯನ್ನು ಅನುವಾದಗಳ ಮೂಲಕ ಕನ್ನಡಕ್ಕೆ ಕಸಿಮಾಡಿದವರು ಬಸಪ್ಪಾಚಾರಿ ಸುಜ್ಞಾನಮೂರ್ತಿ. 2003 ರಲ್ಲಿ ಅನುವಾದಿಸಿದ ಮಹಾಶ್ವೇತಾದೇವಿ ಅವರ ‘ಯಾರದೀ ಕಾಡು’ ಮೊದಲುಗೊಂಡು ಈತನಕ ಹದಿನೇಳು ವರ್ಷಗಳಲ್ಲಿ 55 ಪುಸ್ತಕಗಳನ್ನು ತೆಲುಗಿನಿಂದ ಕನ್ನಡಕ್ಕೆ ತಂದಿದ್ದಾರೆ. ಈ ಮೂಲಕ ತೆಲುಗು ಸಾಹಿತ್ಯವನ್ನು ನೋಡುವ ಕನ್ನಡಿಗರ ನೋಟವನ್ನೇ ಬದಲಿಸಿದ್ದಾರೆ. ‘ಯಾರದೀ ಕಾಡು’ ಕೃತಿಗೆ 2003ರಲ್ಲಿ, ಆಂಧ್ರದ ಚಾರಿತ್ರಿಕ ರೈತ ಹೋರಾಟದ ಕಥನ ‘ತೆಲಂಗಾಣ ಹೋರಾಟ’ ಕೃತಿಗೆ 2013ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಪ್ರಶಸ್ತಿ ಸಂದಿದೆ.

ಅನುವಾದಗಳ ಮೂಲಕ ಆಯಾ ಹೊತ್ತಿನ ಗಾಯಗಳಿಗೆ ಔಷಧಿ ಹುಡುಕಿದ ಬಿ. ಸುಜ್ಞಾನಮೂರ್ತಿ ಅವರನ್ನು ಗುರುತಿಸಿ ಕುವೆಂಪು ಭಾಷಾಭಾರತಿ ಪ್ರಾಧಿಕಾರವು 2016ನೇ ಸಾಲಿನ ಗೌರವ ಪ್ರಶಸ್ತಿ ನೀಡಿದೆ. ಪುಸ್ತಕವನ್ನು ಅಂದಗೊಳಿಸುವ ವಿನ್ಯಾಸಕಾರರಾಗಿಯೂ, ತಂತ್ರಜ್ಞರಾಗಿಯೂ ಇವರು ಪರಿಚಿತರು.

ಸುಜ್ಞಾನಮೂರ್ತಿ ಅವರು ತಮ್ಮ ಅನುವಾದದ ಪಯಣದ ಬಗ್ಗೆ ಕೆಲವು ಮಾತುಗಳನ್ನು ಆಡಿದ್ದಾರೆ.

ADVERTISEMENT

* ಸರ್, ನಿಮ್ಮ ಬಾಲ್ಯದ ನೆನಪುಗಳಿಗೆ ಮರಳಬಹುದೇ?

ನಮ್ಮೂರಿನಿಂದ ತಮಿಳುನಾಡಿನ ಗಡಿ ಕೇವಲ 8 ಕಿ.ಮೀ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲ್ಲೂಕಿನ ಮುತ್ತಾನಲ್ಲೂರು ನಮ್ಮೂರು. ಮುತ್ತಿನಂಥ ನೆಲ್ಲು ಬೆಳೆಯುತ್ತಾರೆಂದು ಮುತ್ತಾನಲ್ಲೂರು ಎಂಬ ಹೆಸರು ಬಂದಿದೆಯಂತೆ. ನಮ್ಮದು ತ್ರಿಭಾಷಿಕ ಪರಿಸರವಾದರೂ ತೆಲುಗು ಮನೆಮಾತಿನ ಜನರೇ ಹೆಚ್ಚು. ಕೆಲವರು ನನ್ನ ಅನುವಾದ ಕಂಡು ‘ನಿಮ್ಮ ಮದರ್ ಟಂಗ್ ತೆಲುಗೇ’ ಎಂದು ಕೇಳುತ್ತಾರೆ, ಆಗ ನಾನು ‘ಇಲ್ಲ ನನ್ನ ಅದರ್ ಟಂಗ್ ತೆಲುಗು’ ಎನ್ನುವೆ. ನನ್ನ ಹೆತ್ತಭಾಷೆ ಕನ್ನಡ, ಹೊತ್ತಭಾಷೆ ತೆಲುಗು. ತಮಿಳು ಚೆನ್ನಾಗಿ ಅರ್ಥ ಅಗುತ್ತೆ.

* ನೀವು ಅನುವಾದಕ್ಕೆ ಪ್ರವೇಶ ಪಡೆದದ್ದು...?

ಬಾಲ್ಯದಲ್ಲಿ ನಾನು ದ್ವಿಭಾಷಿಕ ಪರಿಸರದಲ್ಲಿ ಇದ್ದಿದ್ದರಿಂದ ಅನಾಯಾಸವಾಗಿ ತೆಲುಗು ಮಾತನಾಡಲು ಕಲಿತೆ. ತೆಲುಗು ಸಿನೆಮಾಗಳನ್ನು ನೋಡುತ್ತಾ ತೆಲುಗು ಭಾಷಿಕ ಪರಿಸರದಲ್ಲಿ ಬೆಳೆದೆ. ಕನ್ನಡ ಎಂ.ಎ. ನಂತರ ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ದ್ವಿಭಾಷಿಕ ನಿಘಂಟು ರೂಪಿಸುವ ಯೋಜನೆಯಲ್ಲಿ ಕೆಲಸ ಸಿಕ್ಕಿತು. ಆ ಸಂದರ್ಭದಲ್ಲಿ ತೆಲುಗು ಓದಲು ಕಲಿತೆ, ತೆಲುಗು ಸಾಹಿತ್ಯದ ಮುಖ್ಯ ಕೃತಿಗಳನ್ನು ಓದಿಕೊಂಡೆ. ಆಗ ಅಲ್ಲಿ ಪ್ರಾಧ್ಯಾಪಕರಾಗಿದ್ದ ಆರ್‌ವಿಎಸ್‌ ಸುಂದರಂ ಅವರು ತೆಲುಗಿನಿಂದ ಕನ್ನಡಕ್ಕೆ ಅನುವಾದಿಸಲು ಪ್ರೇರೇಪಿಸಿದರು.

* ವೈಚಾರಿಕ ಸಾಹಿತ್ಯವನ್ನೇ ಹೆಚ್ಚಾಗಿ ಅನುವಾದಕ್ಕೆ ಆಯ್ಕೆ ಮಾಡಿಕೊಂಡದ್ದೇಕೆ?

ವಿಚಾರ ಸಾಹಿತ್ಯ ನಮ್ಮ ಬದುಕನ್ನು ಸುಲಭವಾಗಿಸುತ್ತದೆ, ಸುಖಮಯವಾಗಿಸುತ್ತದೆ, ಮತ್ತು ಹಸನಾಗಿಸುತ್ತದೆ ಎಂದು ಇಂದಿಗೂ ನಂಬಿದ್ದೇನೆ. ಸರಿಯಾದ ವಿಚಾರಗಳಿಂದ ಯುದ್ಧಗಳನ್ನೇ ತಪ್ಪಿಸಬಹುದೆಂದು ತೆಲುಗಿನ ಪ್ರಖ್ಯಾತ ಚಿಂತಕ ವಿ.ಆರ್.ನಾರ್ಲ ಹೇಳಿರುವುದು ಸತ್ಯವೆನಿಸುತ್ತಿದೆ. ದೇವರು, ಧರ್ಮ, ಜಾತಿ, ಕಂದಾಚಾರ, ಸಂಪ್ರದಾಯ, ಮೂಢನಂಬಿಕೆ ಇವು ನನ್ನೊಳಗೆ ಇದುವರೆಗೂ ಬರದಂತೆ ವಿಚಾರ ಸಾಹಿತ್ಯ ನನ್ನನ್ನು ರೂಪಿಸಿದೆ. ಯಾವಾಗಲೂ ಸೃಜನಶೀಲಕ್ಕೆ ಅನುವಾದಕರು ಹೆಚ್ಚು. ಸೃಜನಶೀಲವಲ್ಲದವುಗಳನ್ನು, ಅದರಲ್ಲೂ ವಿಚಾರ ಸಾಹಿತ್ಯವನ್ನು ಅನುವಾದಿಸುವವರು ಕಡಿಮೆ. ಆದ್ದರಿಂದ ನಾನು ಹೆಚ್ಚಾಗಿ ವೈಚಾರಿಕ ಬರಹಗಳನ್ನು ಅನುವಾದಿಸಿದೆ. ನನಗೆ ತಿಳಿದಂತೆ, ತೆಲುಗಿನಲ್ಲಿರುವಷ್ಟು ವೈಚಾರಿಕ ಪ್ರಖರ ಚಿಂತಕರು ಕನ್ನಡದಲ್ಲಿಲ್ಲ. ವಿ.ಆರ್.ನಾರ್ಲ, ಗೋರಾ, ಕೆ.ಬಾಲಗೋಪಾಲ, ಕಂಚ ಐಲಯ್ಯ, ಕತ್ತಿ ಪದ್ಮಾರಾವ್ ಇವರಂಥವರು ನಮ್ಮಲ್ಲಿಲ್ಲ. ಹಾಗೆಯೇ, ಡಿ.ಆರ್. ನಾಗರಾಜ್, ಕೆ.ವಿ. ನಾರಾಯಣ ತರಹದ ವಿಮರ್ಶಕರು ತೆಲುಗಿನಲ್ಲಿಲ್ಲ.

* ಕನ್ನಡ-ತೆಲುಗು ಭಾಷಾಂತರದಲ್ಲಾದ ಮುಖ್ಯ ಪಲ್ಲಟಗಳೇನು?

ತೆಲುಗಿನ ಜನಪ್ರಿಯ ಸಾಹಿತ್ಯ ಕನ್ನಡಕ್ಕೆ ಹೆಚ್ಚು ಅನುವಾದಗೊಂಡಿದೆ. ಉಳಿದಂತೆ ಕತೆ, ಕಾವ್ಯ ಬಂದಿವೆ. ತೆಲುಗಿನ ವೈಚಾರಿಕ ಕೃತಿಗಳು ಕನ್ನಡಕ್ಕೆ ಬಂದದ್ದು ವಿರಳ. ತೆಲುಗು ಸಾಹಿತ್ಯದಲ್ಲಿ ವಿಮರ್ಶೆ ಕಡಿಮೆ, ಸೃಜನಶೀಲ ಸಾಹಿತ್ಯ ಹೆಚ್ಚು. ಜಗತ್ತಿನ ಅತ್ಯುತ್ತಮ ಕೃತಿಗಳನ್ನು ಬಹುಬೇಗ ಅನುವಾದಿಸಿಕೊಳ್ಳುತ್ತಾರೆ. ಹಾಗಾಗಿ ಅಲ್ಲಿ ವೈವಿಧ್ಯಮಯ ಸಾಹಿತ್ಯ ರೂಪುಗೊಂಡಿದೆ. ಈ ಕಾರಣಕ್ಕೇ ಇರಬೇಕು, ಕನ್ನಡದ ಕೆಲವು ಅತ್ಯುತ್ತಮ ಕೃತಿಗಳು ತೆಲುಗಿಗೆ ಹೋಗಿದ್ದರೂ, ಅಲ್ಲಿ ಚರ್ಚೆ ಆಗಲಿಲ್ಲ. ತೆಲುಗಿನ ಕ್ಲಾಸಿಕ್ ಕೃತಿಗಳು, ಶ್ರೇಷ್ಠ ಕಾದಂಬರಿಕಾರರ ಕಾದಂಬರಿಗಳು ಕನ್ನಡಕ್ಕೆ ಇನ್ನೂ ಬಂದಿಲ್ಲ.

* ನಿಮ್ಮ ಮಹತ್ವಾಕಾಂಕ್ಷೆಯ ‘ತೆಲಂಗಾಣ ಹೋರಾಟ’ ಕೃತಿ ಅನುವಾದದ ಒತ್ತಾಸೆಗಳೇನು?

ತೆಲಂಗಾಣ ರೈತ ಹೋರಾಟ 1946ರಿಂದ 1951ರವರೆಗೆ ಆಂಧ್ರಪ್ರದೇಶದಲ್ಲಿ ಘಟಿಸಿದ ಚಾರಿತ್ರಿಕ ಆಂದೋಲನ. ಬ್ರಿಟಿಷ್ ಸಾಮ್ರಾಜ್ಯಶಾಹಿ, ನಿಜಾಮನ ಫ್ಯೂಡಲ್ ಆಳ್ವಿಕೆ ಮತ್ತು ಜೀವವಿರೋಧಿ ಭೂಮಾಲೀಕರ ವಿರುದ್ಧ ರೈತರು ನಡೆಸಿದ ಮಹಾವಿಪ್ಲವ. ಸರ್ವಾಧಿಕಾರ ಎನ್ನುವ ಪರ್ವತವನ್ನು ಛಿದ್ರಗೊಳಿಸಿದ ಸಾಮಾನ್ಯ ಜನರ ಆತ್ಮಬಲ ಅಲ್ಲಿ ಕಾಣುತ್ತದೆ. ತೆಲಂಗಾಣ ಹೋರಾಟ ಜಗತ್ತಿನ ಎರಡನೆ ಅತಿದೊಡ್ಡ ರೈತ ಹೋರಾಟ. ಗೆಳೆಯ ಡಾ.ಬಿ.ಎಂ. ಪುಟ್ಟಯ್ಯ ನನಗೆ ಈ ಕೃತಿಯನ್ನು ಅನುವಾದಿಸಲು ಪ್ರೇರೇಪಿಸಿದರು. ಕನ್ನಡಿಗರಿಗೆ ಈ ಕೃತಿಯ ಅಗತ್ಯವಿದೆ ಎಂದು ಅನುವಾದಿಸಿದೆ.

* ನಿವೃತ್ತಿ ನಂತರದ ಯೋಜನೆಗಳು...

ಪುಸ್ತಕ ಪ್ರಕಟವಾಗುವ ಹೊತ್ತಿಗೆ, ಹಲವು ಹೊಸ ಪುಟ ವಿನ್ಯಾಸಗಳು ಬಂದಿರುತ್ತವೆ ಎನ್ನುವ ಭಯದಲ್ಲಿ ‘ಪುಟವಿನ್ಯಾಸ’ ಕುರಿತ ಪುಸ್ತಕವನ್ನು ಈ ತನಕ ಬರೆಯಲಾಗಿಲ್ಲ. ಹಾಗಾಗಿ ಸರಳ ಸುಂದರ ಪುಟ ವಿನ್ಯಾಸದ ಬಗ್ಗೆ ಪುಸ್ತಕ ಬರೆಯುವೆ. ತೆಲುಗಿನ ಶ್ರೇಷ್ಠ ಕಾದಂಬರಿಗಳಾದ ಬುಚ್ಚಿಬಾಬು ಅವರ ‘ಚಿವರಕು ಮಿಗಿಲೇದಿ’ (ಕೊನೆಗೆ ಉಳಿಯೋದು) ನವೀನ್ ಅವರ ‘ಅಂಪಶಯ್ಯ’ (ಶರಶಯ್ಯೆ) ಕಾದಂಬರಿಗಳನ್ನು ಅನುವಾದಿಸುವ ಯೋಜನೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.