ಗುಜರಿ ಸೇರಲಿದ್ದ ಸುಮಾರು 60 ಸಾವಿರಕ್ಕೂ ಹೆಚ್ಚು ಕಾಗದದ ಹಾಳೆಗಳು, ಬಡ ವಿದ್ಯಾರ್ಥಿಗಳಿಗೆ ಪುಸಕ್ತಗಳಾಗಿವೆ. ಶಿಕ್ಷಣದ ಮಹತ್ವಾಕಾಂಕ್ಷಿ ಹೊತ್ತ ಈ ವಿದ್ಯಾರ್ಥಿಗಳಿಗೆ ಬರೆಯಲು ಸಹಕಾರಿಯಾಗಿದೆ. ಹೌದು, ಸುಳ್ಯದ ಯುವ ಬ್ರಿಗೇಡ್ ತಂಡವು ‘ನೋಟ್ ಪ್ಯಾಡ್ ಮ್ಯಾನ್’ ಯೋಜನೆಯಡಿ ಗುಜರಿ ಸೇರಲಿದ್ದ ಹಾಳೆಗಳನ್ನು ಸಂಗ್ರಹಿಸಿ, ನೋಟ್ ಪುಸ್ತಕ ಮಾಡಿ ನೀಡಿದೆ.ಎಲ್ಲೋ ಎಸೆದು ಗುಜರಿ ಅಂಗಡಿ ಸೇರುತ್ತಿದ್ದ ಪುಸ್ತಕದ ಖಾಲಿ ಹಾಳೆಗಳು ಒಂದಾಗಿ 100 ಪುಟದ ಸುಮಾರು 600 ಪುಸ್ತಕಗಳಾಗಿವೆ.
ಖಾಲಿ ಹಾಳೆಗಳೆಂದು ಎಸೆದು ಬಿಡಬೇಡಿ. ಸಂಗ್ರಹಿಸಿ ಇಡಿ. ಅದು ಪುಸ್ತಕವಾಗುತ್ತದೆ. ಬಡ ವಿದ್ಯಾರ್ಥಿಗಳಿಗೆ ಓದಲು ಸಹಾಯವಾಗುತ್ತದೆ. ಪರಿಸರವೂ ಉಳಿಯುತ್ತದೆ. ಇಂತಹದ್ದೊಂದು ವಿಶೇಷ ಯೋಚನೆಯನ್ನು ಯುವ ಬ್ರಿಗೆಡ್ ಮಾಡಿತ್ತು. ಮಾತ್ರವಲ್ಲ ಈ ವಿಷಯವನ್ನು ನೂರಾರು ಪೋಷಕರ ಮುಂದೆಟ್ಟಿತ್ತು. ಇದಕ್ಕೆ ಸ್ಪಂದನೆ ದೊರೆತಿತ್ತು.
ಇದಕ್ಕಾಗಿ ವರ್ಷದ ಕೊನೆಗೆ ವಿವಿಧ ಶಾಲೆಗಳಿಗೆ, ಪೋಷಕರ ಮನೆಗೆ ಬ್ರಿಗೇಡ್ ತಂಡ ಭೇಟಿ ನೀಡಿತ್ತು. ಖಾಲಿ ಹಾಳೆಗಳನ್ನು ಸಂಗ್ರಹಿಸಿತ್ತು. ಅದನ್ನು ಸುಳ್ಯದ ಗಣೇಶ್ ಪ್ರಿಂಟರ್ಸ್ ಮಾಲೀಕರು ಸುಂದರವಾಗಿ ಜೋಡಿಸಿ ಕೊಟ್ಟರು. ಆಗ 100 ಪುಟದ 600 ಪುಸ್ತಕಗಳು ಸಿದ್ಧಗೊಂಡಿದ್ದವು.
‘ನಾವು ಬಡಮಕ್ಕಳ ಜೊತೆ ಪರಿಸರಕ್ಕೂ ಕೊಡುಗೆ ನೀಡಿದ ತೃಪ್ತಿ ಇದೆ. ಇದೇ ದೇಶಸೇವೆ’ ಎಂದು ಸುಳ್ಯ ಯುವ ಬ್ರಿಗೆಡ್ನ ಶರತ್ ತಮ್ಮ ತಂಡದ ಕಾರ್ಯದ ಕುರಿತು ಸಂತಸ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.