ಇಂಡೋ- ಜರ್ಮನ್ ಅಭಿವೃದ್ಧಿ ನಿಗಮವು ಯಶಸ್ವಿಯಾಗಿ 60 ವರ್ಷಗಳನ್ನು ಪೂರೈಸಿದ ಸವಿನೆನಪಿಗಾಗಿ ಆರಂಭಿಸಿದ ‘ಪ್ರವಾಸೀ ಪ್ರದರ್ಶನ'ಕ್ಕೆ ಗೋಥೆ ಸಂಸ್ಥೆಯ ಆವರಣದಲ್ಲಿ ಈಚೆಗೆ ಚಾಲನೆ ನೀಡಲಾಯಿತು. ಬೆಂಗಳೂರಿನಲ್ಲಿ ಪ್ರದರ್ಶನ ನೀಡಿದ ನಂತರ ಈ ಪ್ರವಾಸೀ ಪ್ರದರ್ಶನವು ಚೆನ್ನೈಗೆ ತಲುಪಲಿದ್ದು ನಂತರ ಕೊಚ್ಚಿಯಲ್ಲಿ ಸಮಾರೋಪಗೊಳ್ಳಲಿದೆ.
ಜರ್ಮನ್ ದೂತವಾಸದ ಮಾರ್ಗಿತ್ ಹೆಲ್ವಿಂಗ್- ಬೋಟೆ ಈ ಪ್ರದರ್ಶನಕ್ಕೆ ಚಾಲನೆ ನೀಡಿದರು. ಬೆಂಗಳೂರಿನಲ್ಲಿರುವ ಭಾರತ ಹಾಗೂ ಜರ್ಮನ್ನ ವಿವಿಧ ಸಂಸ್ಥೆಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವು.
60 ವರ್ಷಗಳನ್ನು ಪೂರೈಸಿದ ಸವಿನೆನಪಿಗಾಗಿ ಆರಂಭಿಸಿರುವ ಈ ಪ್ರವಾಸೀ ಪ್ರದರ್ಶನವನ್ನು ಜರ್ಮನ್ನ ಅಭಿವೃದ್ಧಿ ಸಂಸ್ಥೆಗಳಾಗಿರುವ ಡಚ್ ಗೆಸೆಲ್ ಸ್ಚಾಪ್ಟ್ ಮತ್ತು ಕೆಎಫ್ಡಬ್ಲ್ಯೂ ಜಂಟಿಯಾಗಿ ಆಯೋಜಿಸಿವೆ.
ಈ ಪ್ರದರ್ಶನವು ಭಾರತ ಮತ್ತು ಜರ್ಮನ್ ಅಭಿವೃದ್ಧಿ ನಿಗಮದದ ಐತಿಹಾಸಿಕ ಮೈಲಿಗಲ್ಲುಗಳನ್ನು ಒಳಗೊಂಡಿದೆ. 1958ರಲ್ಲಿ ಮದ್ರಾಸ್ನ ಐಐಟಿಯಲ್ಲಿ ಆರಂಭಗೊಂಡ ಈ ಅಭಿವೃದ್ಧಿ ನಿಗಮವು ಬೆಂಗಳೂರಿನಲ್ಲಿ 1968ರಲ್ಲಿ ಫೋರ್ಮನ್ ತರಬೇತಿ ಸಂಸ್ಥೆಯನ್ನು ಆರಂಭಿಸಿ, 1995 ರಿಂದ ಪೋಲಿಯೊ ರೋಗ ನಿರ್ಮೂಲನೆಗೆ ಶ್ರಮಿಸುತ್ತಿದೆ. 2015ರಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಚಾವಣಿಗೆ ಸೌರಫಲಕಗಳನ್ನು ಅಳವಡಿಸಿದೆ.
ಭಾರತದಲ್ಲಿನ ಜರ್ಮನ್ ರಾಯಭಾರಿ ಮಾರ್ಗಿಟ್ ಹೆಲ್ವಿಗ್ ಬೋಟೆ ಮಾತನಾಡಿ, ‘ಈ ಪ್ರದರ್ಶನವು ಎರಡೂ ದೇಶಗಳ ನಡುವಣ ಸಂಬಂಧ ಸುಧಾರಣೆಯ ವಿವಿಧ ಮಜಲುಗಳನ್ನು ದಾಖಲಿಸಿದೆ. ನಾವೀಗ ಭವಿಷ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಿದೆ. ಈದು ಮುಂದಿನ 60 ವರ್ಷಗಳ ಸ್ನೇಹ ಸಂಬಂಧವನ್ನು ನಿರ್ಧರಿಸುತ್ತದೆ’ ಎಂದರು.
ನಬಾರ್ಡ್ ಮಾಜಿ ಮುಖ್ಯ ಪ್ರಧಾನ ವ್ಯವಸ್ಥಾಪಕ ಡಾ.ವೆಂಕಟೇಶ ಟಗಾತ್, ಗೋಥೆ ಸಂಸ್ಥೆಯ ಉಪ ನಿರ್ದೇಶಕ ಡಾ. ಅಕ್ಸೆಲ್ ಬೇರ್, ಜಿಐಝಡ್ ಸಂಸ್ಥೆಯ ಭಾರತ ಮುಖ್ಯಸ್ಥ ಡಾ.ಜೂಲಿ ರೆವಿರೆ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.