ಕುವೆಂಪು
ಚಿತ್ರಯೋಗಿ
ಚಿತ್ರ ಸಿದ್ಧಾಂತವನ್ನು ಯೋಗದ ರೀತಿ ಅನುಸರಿಸಿ ವರ್ಣಶಿಲ್ಪಿಯಾಗಿ ಖ್ಯಾತರಾದವರು ಶ್ರೀ ಕೆ.ವೆಂಕಟಪ್ಪನವರು. ಅವರು ರಚಿಸಿದ ‘ಶಕುಂತಲೆ ಕಣ್ವಾಶ್ರಮದಿಂದ ಬೀಳ್ಕೊಳ್ಳುವ ಮೃತ್ತಿಕಾ ಚಿತ್ರದಿಂದ ಪ್ರೇರಿತವಾಗಿ’ ಕುವೆಂಪು ಅವರು ‘ವರ್ಣಶಿಲ್ಪಿ ವೆಂಕಟಪ್ಪನವರಿಗೆ’ ಕವನ ರಚಿಸಿದ್ದಾರೆ. ಆ ಚಿತ್ರ ಭೂತಕಾಲದ ಘಟನೆಯಾಗಿ, ವರ್ತಮಾನದಲ್ಲಿ ಶೋಭಿಸುತ್ತ, ಭವಿತವ್ಯದ ಚಿತ್ರಕಲಾ ಚತುರರಿಗೆ ಮಾರ್ಗದರ್ಶಿಯಾಗಿದೆ ಎಂದು ಹೇಳುತ್ತ ಕುವೆಂಪು ಅವರು ವೆಂಕಟಪ್ಪನವರ ಕುಶಲತೆಗೆ ತಲೆಬಾಗಿ ‘ಚಿತ್ರಯೋಗಿ’ ಎಂದು ಬಣ್ಣಿಸಿದ್ದಾರೆ.
‘ಭೂತಕಾಲವ ಸುಲಿದು ವರ್ತಮಾನಕೆ ನೀಡಿ
ಭವಿತವ್ಯಕಿಣುಕುತಿದೆ, ಚಿತ್ರಯೋಗಿ!’
ಹೊಗೆವಳ್ಳಿ
ಕುವೆಂಪು ಅವರು ಒಮ್ಮೆ ಸ್ನೇಹಿತ ಮೂರ್ತಿಯೊಂದಿಗೆ ಮಲೆನಾಡಿನ ಬೆಟ್ಟಗಳನ್ನು ಏರಿ ಸಾಗುವ ಸೊಬಗಿನ ಚಿತ್ರಣದ ಕವನ ‘ವೈಶಾಖ ಸೂರ್ಯೋದಯ’. ಮುಗಿಲಿನ ಮಟ್ಟ ಸೇರಿ ಕೆಳಗಡೆ ಕಣಿವೆಯಲ್ಲಿ ಅಲ್ಲಲ್ಲಿ ತಲೆಯೆತ್ತಿರುವ ‘ಬಿಂಕದ ಹುಲ್ಮನೆ ನೋಟಗಳನ್ನು ನೋಡುತ್ತಾರೆ. ಕವಿಯು ಆ ಮನೆಗಳಿಂದ ಮೆಲ್ಲಗೆ ಮೇಲಕ್ಕೆ ಏರುವ ಹೊಗೆಯ ಆಕಾರವನ್ನು ಬಳ್ಳಿಗೆ ಹೋಲಿಸಿ ಹೊಸ ಪದ ‘ಹೊಗೆವಳ್ಳಿ’ಯಿಂದ ಹೀಗೆ ಚಿತ್ರಿಸಿದ್ದಾರೆ:
ಮನೆಮನೆಯಿಂದ ಸುನೀಲಾಕಾಶಕೆ
ಮೆಲ್ಲಗೇರ್ವ ಹೊಗೆವಳ್ಳಿಗಳು
ನೀಲಿಯ ಕನಸಿನ ಬಳ್ಳಿಗಳು!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.