ಕುವೆಂಪು
ಅಕ್ಷಿಪಕ್ಷಿ
ಅಕ್ಷಿಪಕ್ಷಿ (ನಾ). ಕಣ್ಣ ಹಕ್ಕಿ
ಕುವೆಂಪು ಅವರು ರಾಮನು ಹರಧನುಸ್ಸಿನ ಬಳಿ ನಿಂತು ತನ್ನ ಒಲವಿನ ಮೀನಾಕ್ಷಿಯ ಕಡೆ ‘ಕಣ್ಣ ಪಕ್ಷಿ’ಯನ್ನು ಅಟ್ಟಿ ನೋಡಿದನು ಎಂದು ಚಿತ್ರಿಸಿದ್ದಾರೆ. ನೋಟದ ಹಾರುವಿಕೆಯ ಸಮರ್ಥ ಪ್ರತಿಮೆ ಅದು.
‘ಶಂಕರ ಚರಣ ಪಂಕಜಕೆ
ಬಗೆಯ ಪೂಜೆಯ ಸಲಿಸುತಕ್ಷಿಪಕ್ಷಿಯನಟ್ಟಿ...
ತನ್ನ ಮೀನಾಕ್ಷಿಯಂ ಮೈಥಿಲಿಯನೊಯ್ಯನೆಯೆ
ಕೋಮಳ ಕಟಾಕ್ಷದಿಂದೀಕ್ಷಿಸಿ.’
ನಿದ್ದೆನೈವೇದ್ಯ
ದೇವರಿಗೆ ಹಣ್ಣು, ಕಾಯಿ ಮೊದಲಾದುವುಗಳನ್ನು ಅರ್ಪಿಸುವುದು ನೈವೇದ್ಯ. ರಾಮನು ಹರಧನುಸ್ಸನ್ನು ಹೆದೆ ಏರಿಸುವ ದಿನದ ರಾತ್ರಿಯಲ್ಲಿ ಸೀತೆಯು ರಾಮನ ಬಲಕ್ಕೆ ತನ್ನ ಪ್ರೇಮಬಲವನ್ನು ನೀಡಲೆಂದು ವ್ರತಧಾರಿಯಾದಳು. ಆ ರಾತ್ರಿ ತನ್ನ ಹೃದಯ ಕಮಲದಿಂದ ಗಿರಿಜೇಶನನ್ನು ಪೂಜಿಸಿ ‘ನಿದ್ದೆ ನೈವೇದ್ಯ’ವನ್ನು ಸಮರ್ಪಣೆ ಮಾಡಿದಳು. ಕುವೆಂಪು ಅವರು ಸೀತೆಯು ಮಾಡಿದ ಧ್ಯಾನಪೂರ್ಣ ಜಾಗರಣೆಯನ್ನು ‘ನಿದ್ದೆ ನೈವೇದ್ಯ’ ನುಡಿಯಿಂದ ಬಣ್ಣಿಸಿದ್ದಾರೆ.
‘ಹೃತ್ಪದ್ಮದಿಂದೆ ಭೂಜಾತೆ ಗಿರಿಜೇಶನಂ
ಪೂಜಿಸಿದಳಾ ರಾತ್ರಿ, ನಿದ್ದೆ ನೈವೇದ್ಯಮಂ
ನೀಡಿ.’
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.