ADVERTISEMENT

'ಪ್ರಜಾವಾಣಿ’ ವರ್ಷದ ಸಾಧಕ ಸಂತೋಷ್: 'ತೈವಾನ್‌ ಸೀಬೆ ತಂದ ಸಂಭ್ರಮ'

​ಪ್ರಜಾವಾಣಿ ವಾರ್ತೆ
Published 1 ಜನವರಿ 2022, 6:11 IST
Last Updated 1 ಜನವರಿ 2022, 6:11 IST
ಸಂತೋಷ್‌
ಸಂತೋಷ್‌   

ಸಂತೋಷ್ ಹುಟ್ಟಿದ್ದು ರೈತ ಕುಟುಂಬದಲ್ಲಿಯೇ.ಓದಿದ್ದು ಮೆಕ್ಯಾನಿಕಲ್‌ ಎಂಜಿನಿಯರಿಂಗ್‌. ತನ್ನಲ್ಲಿದ್ದ ಪ್ರತಿಭೆಗೆ ಕೈತುಂಬ ಸಂಬಳ ನೀಡುವ ಖಾಸಗಿ ಕಂಪನಿಯಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು ಅವರಿಗೇನು ಕಷ್ಟವಾಗಲಿಲ್ಲ.

ಪದವಿಯಲ್ಲಿ ಇರುವಾಗಲೇ ಕನಸು ಕಂಡಿದ್ದ ಕೆಲಸಕ್ಕೆ ಸೇರಿದ್ದೂ ಆಯಿತು. ಆದರೆ, ಅಲ್ಲಿನ ಯಂತ್ರಗಳ ಚಲನೆಗೆ ತಕ್ಕಂತೆ ಅವರ ಮನಸ್ಸು ಮಾತ್ರ ಚಲಿಸಲಿಲ್ಲ. ತಾಂತ್ರಿಕ ನೈಪುಣ್ಯ ಸಾಧಿಸಿದ್ದ ಅವರು ಕೊನೆಗೆ ಮೇಟಿ ವಿದ್ಯೆಯೇ ಲೇಸೆಂದು ಕೃಷಿಯತ್ತ ಹೊರಳಿದಾಗ ಕುಟುಂಬಕ್ಕೂ ಅಚ್ಚರಿ ಕಾದಿತ್ತು.

ದೇವನಹಳ್ಳಿ ತಾಲ್ಲೂಕಿನ ನೀರಿನ ಕೊರತೆಯಿದೆ. ಮತ್ತೊಂದೆಡೆ ಮಾರ್ಗದರ್ಶನದ ಕೊರತೆಯಿಂದ ಕೃಷಿ ಕ್ಷೇತ್ರ ತ್ಯಜಿಸಿ ನಗರ ಪ್ರದೇಶಗಳತ್ತ ಯುವಜನರು ಗುಳೆ ಹೊರಟಿರುವುದು ಗುಟ್ಟೇನಲ್ಲ. ಸಂತೋಷ್‌ ಇದಕ್ಕೆ ಅಪವಾದ. ಹಳ್ಳಿಗೆ ಬಂದು ತೋಟಗಾರಿಕೆಯಲ್ಲಿ ತೊಡಗಿಸಿಕೊಂಡು ಉತ್ತಮ ಆದಾಯಗಳಿಸುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ಅವರ ಪರಿಶ್ರಮಕ್ಕೆ ಜಮೀನಿನಲ್ಲಿ ಈಗ ತೈವಾನ್‌ ಸೀಬೆ ಗಿಡಗಳು ಸಮೃದ್ಧವಾಗಿ ಬೆಳೆದು ನಿಂತಿವೆ.

ADVERTISEMENT

ಬಯಲುಸೀಮೆಯಲ್ಲಿ ಅಪರೂಪವಾಗಿರುವ ಬೆಳೆ ಬೆಳೆಯುವುದರಲ್ಲಿ ಅವರಿಗೆ ವಿಶೇಷ ಆಸಕ್ತಿ. ಕಲಬುರಗಿ, ಹಗರಿಬೊಮ್ಮನಹಳ್ಳಿ ಮುಂತಾದೆಡೆ ತರಬೇತಿ ಪಡೆದು ಪ್ರಾಯೋಗಿಕವಾಗಿ 24 ಗುಂಟೆ ಜಮೀನಿನಲ್ಲಿ ತೈವಾನ್ ಸೀಬೆ ಸಸಿಗಳನ್ನು ನೆಟ್ಟರು. ಬಳಿಕ ಕೋಲ್ಕತ್ತದಿಂದ ಸಸಿಗಳನ್ನು ತಂದು ಇನ್ನೂ ಒಂದು ಎಕರೆಗೆ ಕೃಷಿ ವಿಸ್ತರಿಸಿದರು. ಇದಕ್ಕಾಗಿ ವ್ಯಯಿಸಿದ ಬಂಡವಾಳ ಕೇವಲ 1.5 ಲಕ್ಷ. ಲಾಕ್‌ಡೌನ್ ಸಮಯದಲ್ಲೂ ₹ 26 ಲಕ್ಷಕ್ಕೂ ಹೆಚ್ಚು ಆದಾಯಗಳಿಸಿದ ಖುಷಿ ಅವರದು. ಕೃಷಿ ಎಂದಾಕ್ಷಣ ಮೂಗು ಮುರಿಯುವ ಯುವಜನರಿಗೆ ಅವರ ಬದುಕು ಮಾದರಿ ಎಂದರೆ ಅತಿಶಯೋಕ್ತಿಯಲ್ಲ.

ಹೆಸರು: ಸಂತೋಷ್
ವೃತ್ತಿ: ಎಂಜಿನಿಯರಿಂಗ್
ಸಾಧನೆ: ತೋಟಗಾರಿಕೆ ‌ಕ್ಷೇತ್ರ, ತೈವಾನ್ ಸೀಬೆ ಕೃಷಿಯಲ್ಲಿ ಗಣನೀಯ ಸಾಧನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.