ADVERTISEMENT

ನುಡಿನಮನ: ಮರಗಳ ಮಾತೆ ಸಾಲುಮರದ ತಿಮ್ಮಕ್ಕ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2025, 16:52 IST
Last Updated 14 ನವೆಂಬರ್ 2025, 16:52 IST
<div class="paragraphs"><p>ಗಿಡಮರಗಳ ಲಾಲನೆ–ಪಾಲನೆ ಮತ್ತು ಪರಿಸರ ಸಂರಕ್ಷಣೆಗೆ ಟೊಂಕ ಕಟ್ಟಿ ನಿಂತಿರುವ ಸಾವಿರಾರು ಪರಿಸರ ಪ್ರೇಮಿಗಳಿಗೆ ಆದರ್ಶ ಸಾಲುಮರದ ತಿಮ್ಮಕ್ಕ. ‘ವೃಕ್ಷ ಮಾತೆ’ ಎನ್ನುವುದು ಅವರ ಅನ್ವರ್ಥನಾಮ. </p></div>

ಗಿಡಮರಗಳ ಲಾಲನೆ–ಪಾಲನೆ ಮತ್ತು ಪರಿಸರ ಸಂರಕ್ಷಣೆಗೆ ಟೊಂಕ ಕಟ್ಟಿ ನಿಂತಿರುವ ಸಾವಿರಾರು ಪರಿಸರ ಪ್ರೇಮಿಗಳಿಗೆ ಆದರ್ಶ ಸಾಲುಮರದ ತಿಮ್ಮಕ್ಕ. ‘ವೃಕ್ಷ ಮಾತೆ’ ಎನ್ನುವುದು ಅವರ ಅನ್ವರ್ಥನಾಮ.

   

ಕುದೂರಿನ ಮಣ್ಣಿನ ಆಳದಲ್ಲಿ ಸಾಲು ಮರದ ತಿಮ್ಮಕ್ಕ ನೀರೆರೆದ 284 ಆಲದ ಮರಗಳ ಬೇರು ಬಿಳಲುಗಳು ಈಗ ಶೋಕಸಾಗರದಲ್ಲಿ ಮುಳುಗಿವೆ. ಅವುಗಳ ಸಂತಾಪಸಭೆಯಲ್ಲಿ ಏನೆಲ್ಲಾ ಮಾತುಕತೆಗಳು ಆಗುತ್ತಿರಬಹುದು? ಅವಳಿದ್ದಾಗ, ಇಲ್ಲದಾಗ ಅವುಗಳ ಮಾತುಗಳನ್ನು ಕೇಳಿಸಿಕೊಳ್ಳುವಷ್ಟು ವ್ಯವಧಾನ ಎಂದೂ ನಮ್ಮೊಳಗೆ ಜಾಗೃತವಾಗಲೇ ಇಲ್ಲ. 

ಅವಳಿಗೆ ಮಕ್ಕಳಿರಲಿಲ್ಲ ಎಂಬುದರಿಂದ ಮೊದಲುಗೊಂಡು ಮಕ್ಕಳಿಲ್ಲದ ಆಕೆ ಮಾತೆಯಾಗಿದ್ದು ಹೇಗೆ ಎಂದು ಓದಿದ್ದೇವೆ, ಅವಳ ಮಾತುಗಳಲ್ಲೇ ಕೇಳಿದ್ದೇವೆ. ನಮ್ಮ ಮಕ್ಕಳು ಅವರ ಉತ್ತರ ಪತ್ರಿಕೆಗಳಲ್ಲಿ ಅವಳ ಬದುಕನ್ನು ಉರುಹೊಡೆದು ಅಂಕಗಳ ಬೇಟೆಯಲ್ಲಿದ್ದಾರೆ. ಆದರೆ, ನಿಜಕ್ಕೂ ನಾವು ಅವಳಿಂದ ಏನನ್ನು ಕಲಿತೆವು? ನಮ್ಮ ಸೆಲೆಬ್ರಿಟಿಗಳು ಏನು ಕಲಿತರು? ಸರ್ಕಾರಗಳು ಏನು ಕಲಿತವು? 

ADVERTISEMENT

ಅವಳಿಗೆ ಬಂದ ಹಲವಾರು ಪ್ರಶಸ್ತಿ ಫಲಕಗಳು, ಅವಳನ್ನು ಸಭೆಗೆ ಕರೆದು ಹೂವಿನ ಕುಂಡಕ್ಕೆ ನೀರು ಹಾಕಿಸಿದ ಸಂಘಗಳು, ಅವಳಿಗೆ ಹಸಿರು ಸೀರೆ, ಕಣ ಉಡಿತುಂಬಿದ ಸಂಸ್ಥೆಗಳು ತಪ್ಪದೇ ಫೋಟೊ ಹೊಡೆಸಿಟ್ಟುಕೊಂಡಿವೆ. ಪುಟ್ಟ ಕುದೂರಿನಿಂದ ಲಾಸ್ ಏಂಜಲೀಸ್‌ವರೆಗೆ ವಿಮಾನಯಾನ ಮಾಡಿರುವ ಆ ಜೀವ ವಿಮಾನದ ಕಿಟಕಿಯಾಚೆಗೆ ಇಣುಕಿ ಕಾಂಕ್ರೀಟು ಕಾಡನ್ನು ಕಂಡು ಅದೆಷ್ಟು ತಲ್ಲಣಿಸಿರಬಹುದು? 

ಅಂದಿನ ದಿನಮಾನದಲ್ಲಿ ಮಕ್ಕಳಿಲ್ಲವೆಂದು ಸಮಾಜ ಹೆಣ್ಣುಮಕ್ಕಳನ್ನು ವಾಚಾಮಗೋಚರ ನಿಂದಿಸುತ್ತಿದ್ದ ಕಾಲದಲ್ಲಿ ಆ ನೋವನ್ನು ನುಂಗಿ ದುಃಖವನ್ನು ನೀಗಿಕೊಳ್ಳಲು ಆಕೆ ಕಂಡುಕೊಂಡ ಮಾರ್ಗ ಎಂಥದ್ದು? ಈ ಕಾಲದಲ್ಲಿಯೂ ಮಕ್ಕಳಾಗದ ಹೆಣ್ಣುಮಕ್ಕಳಿಗೆ/ದಂಪತಿಗಳಿಗೆ ಆಕೆಯೊಂದು ಉದಾಹರಣೆಯಾಗಲಿಲ್ಲ ಯಾಕೆ?

ಯಾವ ಕೌನ್ಸಿಲರ್, ಥೆರಪಿಸ್ಟುಗಳೂ ಸೂಚಿಸದ ಈ ಒಂದು ಥೆರಪಿಯನ್ನು ನಾವು ಯಾಕೆ ಕಡೆಗಣಿಸಿಬಿಟ್ಟೆವು?
ಮನೆಯ ಮುಂದಿನ ಪಾಟಿಗೆ ನೀರುಹಾಯಿಸಲು ಮರೆಯುವ ನಾವು, ಮೂರ್ನಾಲ್ಕು ಮೈಲು ನಡೆದು 284 ಸಸಿಗಳನ್ನು ನೆಟ್ಟು ಬಿಸಿಲು ಬಿರುಗಾಳಿ ಲೆಕ್ಕಿಸದೆ ನೀರುಣಿಸಿ, ದನಕರುಗಳು ಮೇಯದಂತೆ ಕಾಯುತ್ತಾ, ಎಳೆಗಿಡಗಳನ್ನು ಮರವಾಗಿಸಿದ, ತನ್ನ ಕರುಳ ಕುಡಿಗಳಂತೆ ಕಾಪಾಡಿದ ತಾಯಿಗೆ ಸಿಕ್ಕ ಪ್ರಶಸ್ತಿ ಸಮ್ಮಾನಗಳೆಲ್ಲವೂ ಕಡಿಮೆಯೇ!

ಅದೆಲ್ಲಾ ಸರಿ. ಆಕೆಯ ಪುಟ್ಟದೊಂದು ಕನಸನ್ನು ಅತಿರಥ ಮಹಾರಥರಿಗೂ, ಘನ ಸರ್ಕಾರಗಳಿಗೂ ಈಡೇರಿಸಲು ಸಾಧ್ಯವೇ ಆಗಲಿಲ್ಲವಲ್ಲ! ಆಕೆ ಬಯಸಿದ್ದಾದರೂ ಏನು? ಮಕ್ಕಳಿಲ್ಲದ ಮಾತಾಯಿ ಹೆರಿಗೆ ಆಸ್ಪತ್ರೆ ಕಟ್ಟಲು ಆಸೆಪಟ್ಟಳು. ಅದೂ ತನ್ನೂರಿನಲ್ಲಿ! ವರ್ಷಗಳ ಕಾಲ ನನೆಗುದಿಗೆ ಬಿದ್ದ ಯೋಜನೆ ಕಾರ್ಯಪ್ರವೃತ್ತವಾಗಲೇ ಇಲ್ಲ.  ಅದು ಈಡೇರಿಸಲಸಾಧ್ಯವಾದ ಕನಸಾಗಿತ್ತೇ ಎಂದು ನಾನು ಹಲವು ಸಲ ಯೋಚಿಸಿದ್ದೇನೆ. 

ಅವಳ ತ್ಯಾಗದ ಕತೆ ನಮ್ಮೆಲ್ಲರಿಗೂ ಮಾದರಿಯಾಗಬೇಕಿತ್ತು; ಆದರೆ ಬಹುತೇಕರ ಕಣ್ಣಿಗೆ ಕಂಡದ್ದು, ಹಳ್ಳಿಯಿಂದ ಹೊರಟು ಸೆಲೆಬ್ರಿಟಿಯಾದ ಬಗೆ ಮಾತ್ರ.

ಅದೇನೇ ಇರಲಿ, ಆಕೆ ಪರಿಸರ ಚಳವಳಿಗಳ ಜೊತೆಗೆ, ಅನೇಕ ಜನಚಳವಳಿಗಳ ಭಾಗವೂ ಆಗಿದ್ದಳು. ಅದು ಬಹಳ ದೊಡ್ಡದು. ಅವಳು ಹೋದಲ್ಲೆಲ್ಲಾ ಹಸಿರು ಮೆರೆಯುತ್ತಿತ್ತು. ಅವಳ ಮುಗ್ಧತೆ ಹೂಪಕಳೆಯಾಗಿ ಸುರಿಯುತ್ತಿತ್ತು. ಅವಳ ಜನಪದ ಆಳವಾಗಿ ಬೇರು ಬಿಡುತ್ತಿತ್ತು ಮತ್ತು ಅವಳ ಜೀವಪರ ಕಾಳಜಿ ಶಬ್ದಕೋಶಗಳಿಗೆ ನಿಲುಕದಷ್ಟು ಎತ್ತರಕ್ಕೆ ಹಬ್ಬುತ್ತಿತ್ತು. 

ಈ ಹೊತ್ತು ಅವಳು ನೆಟ್ಟ ಮರಗಿಡಗಳನ್ನು ಘಾಸಿಗೊಳಿಸದಷ್ಟು ನಾವು ಸಹೃದಯತೆ ಬೆಳೆಸಿಕೊಳ್ಳಬೇಕಿದೆ. ಡೇವಿಡ್ ಹೆನ್ರಿ ಥೋರೋ ಅವರ ವಾಲ್ಡನ್ ಪಾಂಡ್ ನಮಗೆ ಮಾದರಿಯಾಗಬೇಕು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.