ADVERTISEMENT

ಸಮಾಜದ ದ್ವಂದ್ವಕ್ಕೆ ಹಿಡಿದ ಕೈಗನ್ನಡಿ

ಮೊದಲ ಓದು, ಪುಸ್ತಕ: ರಾಜ ಕಡೆಗೂ ಮದುವೆಯಾಗಿಯೇ ಬಿಟ್ಟ!

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2019, 19:45 IST
Last Updated 12 ಅಕ್ಟೋಬರ್ 2019, 19:45 IST
   

ಸಮಾಜದಲ್ಲಿನ ಉಬ್ಬರಗಳು ಸಹಜವಷ್ಟೆ. ಅಂತೆಯೇ ವ್ಯಕ್ತಿಗತ ಮನೋಸ್ಥಿತಿಯಲ್ಲೂ ಕೂಡ. ಅದನ್ನು ಒಪ್ಪಿಕೊಳ್ಳಲು ಮುಂದಾಗದ ಮಂದಿ, ತಮ್ಮ ಮೂಗಿನ ನೇರಕ್ಕಿಲ್ಲದ ಸಂಗತಿಗಳಿಗೆ ಮಡಿ–ಮೈಲಿಗೆಗಗಳ ಪರಿಕಲ್ಪನೆ ತೊಡಿಸುವುದೂ ಇಲ್ಲದಿಲ್ಲ.

ಧರ್ಮ, ಜಾತಿ, ಅಂತಸ್ತು, ವಿವಾಹ ಪೂರ್ವ ದೈಹಿಕ ಸಂಬಂಧ, ಕೆಲ ಪೂರ್ವಾಗ್ರಹ ಮುಂತಾದವುಗಳಿಗೆ ಕಟ್ಟುಬಿದ್ದು, ಕಟ್ಟಳೆಗಳ ಚೌಕಟ್ಟಿನಲ್ಲಿ ಅವನ್ನಿಟ್ಟು ನೋಡುವುದೂ ನಿತ್ಯಸತ್ಯ. ಪರಿಣಾಮ ಸಮಾಜ ಮತ್ತು ವ್ಯಕ್ತಿಗಳ ನಡುವೆ ದಾಟಲಾರದ ಕಂದಕ, ಮಡಿವಂತಿಕೆಯ ಮುಸುಕು. ಇಂತಹದ್ದೇ ವೈರುಧ್ಯಗಳ ಚರ್ಚಿತ 16 ಕಥೆಗಳ ಗುಚ್ಛ ‘ರಾಜ ಕಡೆಗೂ ಮದುವೆಯಾಗಿಯೇ ಬಿಟ್ಟ!’.

ಇಲ್ಲಿರುವ ಎಲ್ಲ ಕಥೆಗಳೂ ಸಮಾಜದ ದ್ವಂದ್ವಕ್ಕೆ ಹಿಡಿದ ಕೈಗನ್ನಡಿಯಂತಿವೆ. ಶತಮಾನಗಳಿಂದಲೂ ನಡೆದು ಬಂದಿರುವ ಸ್ತ್ರೀ ಶೋಷಣೆ, ದಬ್ಬಾಳಿಕೆ, ದೌರ್ಜನ್ಯ, ಅಸಹಾಯಕತೆ, ಪ್ರಭುತ್ವ ಸೃಷ್ಟಿಸುವ ಅಸಂಗತತೆ, ಅಧಿಕಾರ‌ಶಾಹಿಯ ನಿರ್ದಾಕ್ಷಿಣ್ಯ ನಿರ್ಣಯಗಳು ಜನಸಾಮಾನ್ಯರ ಮೇಲೆ ಉಂಟು ಮಾಡಬಹುದಾದ ವ್ಯತಿರಿಕ್ತ ಪರಿಣಾಮಗಳ ಹಂದರವನ್ನು ತೆರೆದಿಟ್ಟಿದೆ ಈ ಪುಸ್ತಕ.

ADVERTISEMENT

ಕಲ್ಪನೆಗಳಿಗೂ ವಾಸ್ತವದ ಹಿನ್ನೆಲೆಯುಂಟು. ಅರ್ಥಾತ್ ಇಲ್ಲಿರುವ ಐತಿಹಾಸಿಕ, ಸಾಮಾಜಿಕ, ಕೌಟುಂಬಿಕ, ಆರ್ಥಿಕತೆಯ ಎಳೆಗಳನ್ನೊಳಗೊಂಡ ಕಥೆಗಳು ಸಾಮಾಜಿಕ ವೈರುಧ್ಯಗಳನ್ನು ಕೆಣಕಿ ಎಬ್ಬಿಸುತ್ತವೆ. ಕಂಡ, ಅನುಭವಿಸಿದ, ಕೇಳಿದ ಸಂಗತಿಗಳನ್ನು ಯಾವ, ಯಾರ ಮರ್ಜಿಗೂ ಒಳಗಾಗದೆ ನಿರ್ಭಿಡೆಯಿಂದ ಚಿತ್ರಿಸಿರುವ ಲೇಖಕರ ನಿರೂಪಣೆ ಮನಸ್ಸಿಗೆ ತಟ್ಟುತ್ತದೆ. ಎಲ್ಲ ಘಟ‌ನೆ, ವರ್ತನೆಗಳಿಗೂ ಕಾರ್ಯಕಾರಣ ಸಂಬಂಧವಿದೆ. ಅದನ್ನರಿಯುವಲ್ಲಿ ತೊಡರುವ ಮಂದಿ ಅದಕ್ಕೆ ಸಮಾಜಬಾಹಿರ ಪಟ್ಟ ಕಟ್ಟುತ್ತಾರೆ. ಇಲ್ಲಿ ದೋಷಿ ಎನಿಸಿದವರ ವಿಚಾರದಲ್ಲಿ ಸಲ್ಲಬೇಕಾದುದು ಕ್ರೋಧವಲ್ಲ, ಕನಿಕರ ಎಂಬುದು ಲೇಖಕರ ಅಂಬೋಣ. ಇಲ್ಲಿನ ಎಲ್ಲ ಕಥೆಗಳು ಕಾಡುವ ಮತ್ತು ಮರು ಓದಿಗೂ ಒಡ್ಡುವ ಗುಣಗ್ರಾಹಿಯಾಗಿವೆ.

ಪ್ರಕಾಶನ: ಮಲೆನಾಡು ಪ್ರಕಾಶನ, ಚಿಕ್ಕಮಗಳೂರು

ಪುಟಗಳು: 164

ಬೆಲೆ: 130

ದೂರವಾಣಿ: 8971186090

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.