ಅನುವರ್ತನ
ಲೇ: ಪ್ರೊ.ಎಚ್.ಎಸ್. ಹರಿಶಂಕರ್
ಪ್ರ: ಸಪ್ನ ಬುಕ್ಹೌಸ್, ಬೆಂಗಳೂರು
ದೂ: 080– 40114455
‘ಅನುವರ್ತನ’ –ಸಂಶೋಧನೆ, ಭಾಷಾಂತರ ತತ್ತ್ವ ಮತ್ತು ಸಿದ್ಧಾಂತಗಳು, ಪರಿಚಯಾತ್ಮಕ ವಿಮರ್ಶೆಗೆ ಸಂಬಂಧಿಸಿದ ಕೃತಿ. ಪ್ರೊ.ಎಚ್.ಎಸ್. ಹರಿಶಂಕರ್ ಬರೆದಿರುವ ಹದಿನೇಳನೆಯ ಶತಮಾನಕ್ಕೆ ಸಂಬಂಧಿಸಿದ ಲೇಖನಗಳ ಗುಚ್ಛ ಇದಾಗಿದೆ.
ತಿರುಮಲಾರ್ಯನ ಅಪ್ರತಿಮ ಚರಿತೆ, ತಿರುಮಲಾರ್ಯನ ಚಿಕದೇವರಾಯ ವಂಶಾವಳಿ, ತಿರುಮಲಾರ್ಯನ ಚಿಕದೇವರಾಯನ ವಿಜಯ ಮತ್ತು ತಿರುಮಲಾರ್ಯನ ಶಾಸನಗಳ ಬಗ್ಗೆಯೂ ಈ ಕೃತಿಯು ಬೆಳಕು ಚೆಲ್ಲುತ್ತದೆ. ಪುಸ್ತಕದ ಮುನ್ನಡಿಯಲ್ಲಿಯೇ ಲೇಖಕರು ಕನ್ನಡ ಸಾಹಿತ್ಯದಲ್ಲಿ ಭಾಷಾಂತರ ಅಪರೂಪದ ಸ್ಥಾನ ಪಡೆದುಕೊಂಡಿರುವ ಬಗ್ಗೆ ಉಲ್ಲೇಖಿಸಿದ್ದಾರೆ. ‘ಭಾಷಾಂತರ– ಕೆಲವು ವಿಚಾರಗಳು’ ಲೇಖನದಲ್ಲಿ ಮುಕ್ಕಾಲು ಪಾಲು ಅನುವಾದಗಳು ಮೂಲವನ್ನು ಪ್ರತಿಬಿಂಬಿಸಲು ವಿಫಲವಾಗಿರುವ ಬಗ್ಗೆ ಹೇಳಿದ್ದಾರೆ. ಹ್ಯಾಮ್ಲೆಟ್ ಮತ್ತು ರಕ್ತಾಕ್ಷಿ ನಾಟಕಗಳಲ್ಲಿ ಬರುವ ಕೆಲವು ಸಮಾನ ಸಂಗತಿಗಳ ಬಗ್ಗೆಯೂ ಈ ಪುಸ್ತಕದಲ್ಲಿ ಪ್ರಸ್ತಾಪಿಸಿದ್ದಾರೆ.
***
‘ನಾನೆಂಬುದು ನಾನಲ್ಲ’
ತನ್ನ ಸುತ್ತ ಮುತ್ತಲ ಪರಿಸರದಲ್ಲಿ ನಡೆದಂತಹ ಪ್ರಕರಣಗಳನ್ನು ಸಾಹಿತ್ಯಿಕವಾಗಿ, ಅಲ್ಲದೆ ಜನರ ಭಾವಕ್ಕೆ ತಾಕುವಂತೆ ಕಟ್ಟಿಕೊಡುವುದುಆತ್ಮಕಥೆ ಹಾಗೂ ಕಾದಂಬರಿಗಳಲ್ಲಿನ ಒಂದು ಕಥಾ ಶೈಲಿ.
ಪ್ರೊ.ಸಣ್ಣರಾಮ ತಮ್ಮ ‘ನಾನೆಂಬುದು ನಾನಲ್ಲ’ ಎಂಬ ಆತ್ಮಕಥನದಲ್ಲಿ ಲಂಬಾಣಿ ಸಮುದಾಯದ ಕುರಿತು ಅವರು ಅನುಭವಿಸುತ್ತಿರುವ ಸಮಸ್ಯೆಗಳು, ಎದುರಿಸುತ್ತಿರುವ ಸವಾಲುಗಳನ್ನು ಕಟ್ಟಿಕೊಟ್ಟಿದ್ದಾರೆ.
ಲೇಖಕರು ‘ಈ ಕೃತಿಯು ನನ್ನ ಆತ್ಮಚರಿತೆಯಾದರೂ, ಇದು ಒಂದು ಸಮಾಜದ ಚರಿತೆ, ಒಂದು ದೇಶದ ಚರಿತೆ’ ಎಂದು ಹೇಳಿಕೊಂಡಿದ್ದು, ಅವರ ಚಿಂತನೆಗಳನ್ನು ಮತ್ತು ಸಮುದಾಯದ ಬಗೆಗಿರುವ ಕಳವಳವನ್ನು ಈ ಕೃತಿಯಲ್ಲಿ ವ್ಯಕ್ತಪಡಿಸಿದ್ದಾರೆ.
ಲಂಬಾಣಿ ಸಮುದಾಯದ ಜೀವನ ಶೈಲಿಯನ್ನು ವಿವರಿಸುತ್ತಾ, ಆರ್ಥಿಕ ದುಃಸ್ಥಿತಿಯಿಂದಾಗಿ ಸಮುದಾಯ ಎದುರಿಸುತ್ತಿರುವ ನೋವುಗಳನ್ನೂ, ದುಡಿಮೆಯಿಲ್ಲದೆ ಕಳ್ಳಭಟ್ಟಿ ಸಾರಾಯಿ ವ್ಯಾಪಾರವನ್ನೇ ಜೀವನಾಧಾರವಾಗಿಸಿಕೊಂಡು ಪಡುತ್ತಿರುವ ಬವಣೆಗಳನ್ನುಈ ಕೃತಿ ಸಾಧ್ಯಂತವಾಗಿ ಬಿಚ್ಚಿಟ್ಟಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.