ಅಮೆರಿಕದ ವಿಲ್ ಡುರಾಂಟ್ (ವಿಲಿಯಂ ಜೇಮ್ಸ್ ಡುರಾಂಟ್) ಇತಿಹಾಸ ತಜ್ಞ. ಪತ್ನಿ ಏರಿಯಲ್ ಜೊತೆ ಸೇರಿ ‘ದಿ ಸ್ಟೋರಿ ಆಫ್ ಸಿವಿಲೈಸೇಷನ್’ ಎಂಬ ಹನ್ನೊಂದು ಸಂಪುಟಗಳ ಕೃತಿಯನ್ನು ರಚಿಸುತ್ತಾರೆ. ಆಗ ಇಂಡಿಯಾದ ಬಗ್ಗೆ ಹುಟ್ಟಿದ ಕುತೂಹಲದಿಂದ 1930ರಲ್ಲಿ ಭಾರತಕ್ಕೆ ಭೇಟಿ ನೀಡುತ್ತಾರೆ. ತಮ್ಮ ಪ್ರವಾಸದ ಅನುಭವವನ್ನು ‘ದಿ ಕೇಸ್ ಫಾರ್ ಇಂಡಿಯಾ’ದಲ್ಲಿ ಕಟ್ಟಿಕೊಟ್ಟಿದ್ದಾರೆ. ಪತ್ರಕರ್ತ ಕೆ.ಎನ್.ವೆಂಕಟಸುಬ್ಬರಾವ್ ಅದನ್ನು ‘ಇಂಡಿಯಾ ಅಂದು’ ಎಂಬ ಹೆಸರಿನಲ್ಲಿ ಕನ್ನಡ ಓದುಗರಿಗೆ ಅವರ ಓದಿನ ಅನುಭವದ ಭಾವವನ್ನು ದಾಟಿಸಿದ್ದಾರೆ.
ಕೃತಿಯು ಇಂಡಿಯಾ, ಗಾಂಧೀ, ಸಂಗ್ರಾಮ/ಕ್ರಾಂತಿ, ದಿ ಕೇಸ್ ಫಾರ್ ಇಂಗ್ಲೆಂಡ್ ಎಂಬ ನಾಲ್ಕು ಅಧ್ಯಾಯಗಳನ್ನು ಒಳಗೊಂಡಿದೆ. ಜನಾಂಗಿಕ ಮತ್ತು ಭಾಷಾ ಸಾಮ್ಯತೆಯನ್ನು ಲೇಖಕ ಆರಂಭದಲ್ಲೇ ಗುರುತಿಸುತ್ತಾರೆ. ಇಂಗ್ಲೆಂಡ್ ವಸಾಹತು ಸರ್ಕಾರ ಇಂಡಿಯಾವನ್ನು ಶೋಚನೀಯವಾಗಿ ಶೋಷಣೆ ಮಾಡಿದೆ. ಉತ್ತರ ಭಾರತದ ಬಹುತೇಕರು ಗ್ರೀಕರಂತೆ, ರೋಮನ್ನರಂತೆ, ನಮ್ಮಂತೆ ಇಂಡೋ ಯೂರೋಪಿಯನ್ ಅಥವಾ ಆರ್ಯನ್ ವರ್ಗಕ್ಕೆ ಸೇರಿದವರಾಗಿದ್ದಾರೆ ಎನ್ನುವುದು ಡುರಾಂಟ್ ದನಿ.
ಬ್ರಿಟಿಷರು ಭ್ರಷ್ಟಾಚಾರದ ಮೂಲಕ ಆಡಳಿತವನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಮೀರ್ ಜಾಫರನಿಗೆ ಬಂಗಾಳದ ಅಧಿಕಾರ ನೀಡಲು ಮೇಜರ್ ಜನರಲ್ ರಾಬರ್ಟ್ ಕ್ಲೈವ್ ಲಂಚ ಪಡೆದಿದ್ದ. ಸೇನೆಯಲ್ಲಿ ತಾರತಮ್ಯ ಮಾಡುತ್ತಿದ್ದರು. ಜಾತಿ ವ್ಯವಸ್ಥೆಯ ಸೂಕ್ಷ್ಮವನ್ನು, ‘ಜಾತಿ ವ್ಯವಸ್ಥೆ ನಾಲ್ಕು ವರ್ಗಗಳಿಂದ ರೂಪುಗೊಂಡಿದೆ; ನೈಜ ಬ್ರಾಹ್ಮಣರು ಅಂದರೆ ಬ್ರಿಟಿಷ್ ಅಧಿಕಾರಿಗಳು, ನೈಜ ಕ್ಷತ್ರಿಯರು ಅಂದರೆ ಬ್ರಿಟಿಷ್ ಸೇನೆ, ನೈಜ ವೈಶ್ಯರು ಅಂದರೆ ಬ್ರಿಟಿಷ್ ವಣಿಕರು ಮತ್ತು ನಿಜವಾದ ಶೂದ್ರ ಮತ್ತು ಅಸ್ಪೃಶ್ಯರು ಅಂದರೆ ಹಿಂದೂ ಜನರು’ ಹೀಗೆ ಡುರಾಂಟ್ ನೋಡುತ್ತಾರೆ. ಗಾಂಧಿ ಧಾರ್ಮಿಕ ವ್ಯಕ್ತಿ. ಸ್ವಾತಂತ್ರ್ಯ ಚಳವಳಿಯ ವೀರಗಾಥೆಯೂ ಸೇರಿ ದಾಸ್ಯಕ್ಕೆ ತುತ್ತಾಗಿರುವ ಇಂಡಿಯಾ ಪರಿಸ್ಥಿತಿಯನ್ನು ವಿಮರ್ಶಾ ದೃಷ್ಟಿಯಲ್ಲಿ ನೋಡಿದ್ದಾರೆ. ಇಂಡಿಯಾ ಆಧುನಿಕತೆಗೆ ಒಡ್ಡಿಕೊಳ್ಳುತ್ತಾ ತನ್ನ ಸಿರಿವಂತಿಕೆಯನ್ನು ಬರಿದುಮಾಡಿಕೊಂಡಿದೆ ಎನ್ನುವ ವಿಷಾದ ಭಾವ ಕೃತಿಯ ರೂಪ.
ಇಂಡಿಯಾ ಅಂದು
ಮೂಲ: ವಿಲ್ ಡುರಾಂಟ್
ಭಾವಾನುವಾದ: ಕೆ.ಎನ್. ವೆಂಕಟಸುಬ್ಬರಾವ್
ಪ್ರ: ಕಾಮಧೇನು ಪುಸ್ತಕ ಭವನ
ಸಂ: 9945002444
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.