ADVERTISEMENT

'ಮಾನವ ಹಕ್ಕುಗಳು' ಪುಸ್ತಕ ವಿಮರ್ಶೆ: ಬಾಯಿ ಬೀಗ ತೆರೆಸುವ ಯತ್ನ

​ಪ್ರಜಾವಾಣಿ ವಾರ್ತೆ
Published 9 ಜನವರಿ 2022, 2:14 IST
Last Updated 9 ಜನವರಿ 2022, 2:14 IST
ಮಾನವ ಹಕ್ಕುಗಳು
ಮಾನವ ಹಕ್ಕುಗಳು    

ಮಾನವ ಹಕ್ಕುಗಳು
ಲೇ: ಎಚ್‌.ಎನ್‌. ನಾಗಮೋಹನದಾಸ್‌
ಪ್ರ: ಜನ ಪ್ರಕಾಶನ ಬೆಂಗಳೂರು
ಮೊ: 9448324727

‘ದುಷ್ಟರ ಗೆಲುವಿಗೆ ಸಜ್ಜನರ ಮೌನವೇ ಕಾರಣ... ಇನ್ನಾದರೂ ನಮ್ಮ ಬಾಯಿಗೆ ಹಾಕಿರುವ ಬೀಗವನ್ನು ತೆರೆಯಬೇಕು. ಅನ್ಯಾಯದ ವಿರುದ್ಧ ಧ್ವನಿಯೆತ್ತಬೇಕು’ ಎಂಬ ಪ್ರಬಲ ಆಶಯವನ್ನು ಕೃತಿಯ ಮೊದಲ ಅಧ್ಯಾಯದಲ್ಲೇ ಮಂಡಿಸಿದ್ದಾರೆ ಲೇಖಕ ನ್ಯಾಎಚ್‌.ಎನ್‌. ನಾಗಮೋಹನದಾಸ್‌.

ಲೇಖಕರು ನ್ಯಾಯಮೂರ್ತಿಯಾಗಿದ್ದಾಗಲೂ, ನಿವೃತ್ತರಾದ ಮೇಲೂ ಸಾಮಾಜಿಕ ನ್ಯಾಯ, ನೀತಿ ನಿಯಮಗಳ ಬಗ್ಗೆ ಸ್ಪಷ್ಟ ನಿಲುವನ್ನು ಪ್ರತಿಪಾದಿಸಿದವರು. ಅವರ ವೃತ್ತಿಬದುಕಿನ ಅನುಭವ, ಅಧ್ಯಯನ ಮತ್ತು ಪ್ರಚಲಿತ ಸನ್ನಿವೇಶಗಳಿಗೆ ಪ್ರತಿಸ್ಪಂದನದ ರೂಪವಾಗಿ ಕೃತಿ ಮೈದಾಳಿದೆ. 22 ಚಿಕ್ಕಚಿಕ್ಕ ಅಧ್ಯಾಯಗಳಲ್ಲಿ ವಿಸ್ತಾರವಾದ ವಿಷಯ ವಿವರಣೆ ಇದೆ. ಸಂವಿಧಾನ, ರಾಜ್ಯಶಾಸ್ತ್ರ ವಿದ್ಯಾರ್ಥಿಗಳಿಗೆ, ಸಂಶೋಧಕರಿಗೆ, ಸಾಮಾಜಿಕ ಹೋರಾಟಗಾರರಿಗೆ ಮಾರ್ಗದರ್ಶಿ ಆಗಬಲ್ಲ ಕೃತಿಯಿದು.

ADVERTISEMENT

ಕೃತಿಯಲ್ಲಿ ಬಸವಾದಿ ಶರಣರ ಚಿಂತನೆಗಳ ಉಲ್ಲೇಖ ಇದೆ. ಮೌಢ್ಯಾಚರಣೆಗಳ ವಿರುದ್ಧ ವೈಜ್ಞಾನಿಕ ಅಧ್ಯಯನ ಸಹಿತ ಆಧಾರ ಒಳಗೊಂಡ ಅಧ್ಯಾಯವಿದೆ. ಮೌಢ್ಯ ನಿವಾರಣೆಗೆ ಕಾನೂನೊಂದೇ ಅಸ್ತ್ರ ಅಲ್ಲ. ಜನರ ಮನೋಭಾವ ಬದಲಾವಣೆ ಆಗಬೇಕಾದದ್ದೂ ಮುಖ್ಯ ಎಂದು ಪ್ರತಿಪಾದಿಸಿದ್ದಾರೆ.

ಶಿಕ್ಷಣ ಮಾಧ್ಯಮದ ಗೊಂದಲವನ್ನು ಚರ್ಚಿಸಿರುವ ಲೇಖಕರು ಇಂಗ್ಲಿಷ್‌ ಭಾಷೆಗೆ ಪ್ರಾಮುಖ್ಯತೆ ಕೊಡಲೇಬೇಕು. ಆದರೆ, ಕನ್ನಡಕ್ಕೆ ಬದಲಾಗಿ ಇಂಗ್ಲಿಷ್‌ ಆಗಬಾರದು. ಸಮಾನ ಶಿಕ್ಷಣ ಸಾಧಿಸಲು ಹೊಸ ಶಿಕ್ಷಣ ನೀತಿ ಬೇಕು ಎಂದು ‘ತೀರ್ಪು’ ಕೊಟ್ಟಿದ್ದಾರೆ.‘ಭಕ್ತಿಪಂಥ’ ಶರಣರು, ಸಂತರ ಬಗ್ಗೆ ಕೃತಿ ಮಾತನಾಡಿದೆ. ಕ್ರಾಂತಿ ಮತ್ತು ಕಾನೂನು ಕ್ರಾಂತಿಯಿಂದಾಗಿ ನಡೆದ ಜಾಗತಿಕ ವಿದ್ಯಮಾನಗಳನ್ನೂ ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.