ಹಾಸಾಕೃ ಸಂಪಾದಕರು: ಎನ್.ಕೆ. ಮೋಹನ್ರಾಂ, ಎಂ.ಕೆ. ಶಂಕರ್
ಸಾಹಿತ್ಯ, ಪತ್ರಿಕೋದ್ಯಮ, ರಂಗಭೂಮಿ, ಸಿನಿಮಾ...ಹೀಗೆ ವಿವಿಧ ಕ್ಷೇತ್ರಗಳಲ್ಲಿ ಹಾಸ್ಯ ಮತ್ತು ಮೊನಚು ಭಾಷೆಯಿಂದ ತಮ್ಮತನವನ್ನು ಮೂಡಿಸಿದವರು ಹಾಸಾಕೃ. ಎಚ್.ಎಸ್. ಕೃಷ್ಣಮೂರ್ತಿ ಎಂಬ ತಮ್ಮ ಜನ್ಮನಾಮವನ್ನೇ ಮೀರಿ ‘ಹಾಸ್ಯವಿಲ್ಲದ ಸಾರವಿಲ್ಲದ ಕೃತಿಗಳನ್ನು ರಚಿಸುವವನು’ (ಹಾಸಾಕೃ) ಎಂದು ತಮ್ಮನ್ನು ತಾವೇ ಗೇಲಿಮಾಡಿಕೊಳ್ಳುತ್ತಾ, ಸಮಾಜದ ಓರೆಕೋರೆಗಳನ್ನು ತಮ್ಮ ತೀಕ್ಷ್ಣ ಹಾಗೂ ನಿರ್ಭಿಡೆಯ ಮಾತು, ಬರಹಗಳಿಂದ ವಿಮರ್ಶೆ ಮಾಡಿದವರು. ಇಂಥ ಅಪರೂಪದ ವ್ಯಕ್ತಿತ್ವವನ್ನು ಅವರದೇ ಹೆಸರಿನ ‘ಹಾಸಾಕೃ’ ಕೃತಿಯಲ್ಲಿ ಸೊಗಸಾಗಿ ಕಟ್ಟಿಕೊಡಲಾಗಿದೆ.
83 ವರ್ಷಕ್ಕೆ ಕಾಲಿಟ್ಟಿರುವ ಹಾಸಾಕೃ ಕುರಿತು ಅವರ ಆಪ್ತರು, ಒಡನಾಡಿಗಳು ಕಟ್ಟಿಕೊಟ್ಟ ನೆನಪುಗಳು ಕೃತಿಯ ಮೌಲ್ಯವನ್ನು ಹೆಚ್ಚಿಸಿವೆ. ಕನ್ನಡ ಮತ್ತು ಇಂಗ್ಲಿಷ್ ಸೇರಿ ಒಟ್ಟು 15 ಬರಹಗಳಿರುವ ಈ ಕೃತಿಯಲ್ಲಿ ಗುಜ್ಜಾರ್ ಅವರ ಸೊಗಸಾದ ಚಿತ್ರಗಳಿವೆ. ಬಹುತೇಕ ಅಭಿನಂದನಾ ಗ್ರಂಥಗಳಲ್ಲಿ ವ್ಯಕ್ತಿಯ ಹೊಗಳಿಕೆಯೇ ಮೇಲುಗೈ ಸಾಧಿಸುತ್ತಿರುವ ನಡುವೆ ಈ ಕೃತಿ ಭಿನ್ನವಾಗಿ ನಿಲ್ಲುತ್ತದೆ. ಹಾಸಾಕೃ ವ್ಯಕ್ತಿತ್ವವಷ್ಟೇ ಅಲ್ಲ, 50ರ ದಶಕದಿಂದ ಇತ್ತೀಚಿನ ವರ್ಷಗಳ ತನಕದ ರಾಜಕೀಯ, ಸಾಂಸ್ಕೃತಿಕ ಪಲ್ಲಟಗಳನ್ನೂ ಇಲ್ಲಿನ ಬರಹಗಳು ಸೂಕ್ಷ್ಮವಾಗಿ ದಾಖಲಿಸಿವೆ. ವಿಶ್ವ ವಿಖ್ಯಾತ ಸಿನಿಮಾ ನಿರ್ದೇಶಕ ಡೇವಿಡ್ ಲೀನ್ ಅವರ ‘ಎ ಪ್ಯಾಸೇಜ್ ಟು ಇಂಡಿಯಾ’ ಸಿನಿಮಾದಲ್ಲಿನ ಹಾಸಾಕೃ ನಟನೆಯ ಅನುಭವ ಕಥನ ಓದುಗರನ್ನು ಹಿಡಿದಿಡುತ್ತದೆ.
ತಮ್ಮ ಆಳವಾದ ಅರಿವಿನಿಂದ ಪುಟ್ಟ ಪಾತ್ರಕ್ಕೂ ವಿಶೇಷ ಕಳೆ ತರಬಲ್ಲ ಹಾಸಾಕೃ ಮನಸು ಮಾಡಿದ್ದರೆ ಏನೆಲ್ಲ ಆಗಬಹುದಿತ್ತು ಅನ್ನುವುದನ್ನು ಅವರ ಆಪ್ತ ಒಡನಾಡಿಗಳು ತಮ್ಮ ನೆನಪಿನ ಬುತ್ತಿಗಂಟಿನಲ್ಲಿ ಬಿಚ್ಚಿಟ್ಟಿದ್ದಾರೆ. ಹಾಸಾಕೃ ಕಳೆದುಹೋಗಿರುವ ಕಾಲವೊಂದರ ಸಾಕ್ಷಿಕಲ್ಲಿನಂತಿದ್ದಾರೆ ಎನ್ನುವ ಬರಹವೊಂದರ ಸಾಲು ಇಡೀ ಕೃತಿಗೆ ಹಿಡಿದ ಕೈಗನ್ನಡಿಯಂತಿದೆ.
ಪುಸ್ತಕ: ಹಾಸಾಕೃ
ಸಂ: ಎನ್.ಕೆ. ಮೋಹನ್ರಾಂ, ಎಂ.ಕೆ. ಶಂಕರ್
ಪ್ರ: ಚಾರುಮತಿ ಪ್ರಕಾಶನ
ಸಂ: 94482 35553
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.