
ಮತ್ತೆ ಮುಖ್ಯಮಂತ್ರಿ
ಪ್ರಜಾಪ್ರಭತ್ವದ ಮೂಲ ರೂವಾರಿಗಳು ಪ್ರಜೆಗಳೇ ಆಗಿದ್ದರೂ ವಾಸ್ತವದ ಅಧಿಕಾರದಲ್ಲಿ ಅವರೇನು ಆಗಿದ್ದಾರೆ ಎನ್ನುವುದನ್ನು ‘ಮತ್ತೆ ಮುಖ್ಯಮಂತ್ರಿ’ ನಾಟಕ ಪ್ರತಿಬಿಂಬಿಸುತ್ತದೆ.
ನಾಟಕಕಾರರು ಇಂದಿನ ರಾಜಕಾರಣದ ಒಳ ಹೊರಗಿನ ಪರಿಸ್ಥಿತಿಯ ವ್ಯಂಗ್ಯವನ್ನು ಇಲ್ಲಿ ತಂದಿದ್ದಾರೆ. ಅಧಿಕಾರದ ಹಪಹಪಿಯ ಈ ರಂಗರೂಪ ಸಂವಿಧಾನದ ಆಶಯವನ್ನು ಹಾಳುಮಾಡುತ್ತಿರುವ ವಿವಿಧ ರೂಪವನ್ನೂ ಓದುಗನಿಗೆ ದಾಟಿಸುತ್ತದೆ. ವ್ಯಕ್ತಿಯನ್ನು ವೋಟಿನ ಲೆಕ್ಕಾಚಾರದಲ್ಲಿ ನೋಡುವ ರಾಜಕಾರಣದಲ್ಲಿ ಸಂವಿಧಾನದ ಆಶಯದ ಘನತೆಗೆ ಕುಂದುಂಟಾಗುತ್ತಿದೆ. ಇದನ್ನು ನಿಯಂತ್ರಿಸುವ ಯಾವ ವ್ಯವಸ್ಥೆಯೂ ಸಮರ್ಪಕವಾಗಿಲ್ಲ. ಆ ವಿಷಯದಲ್ಲಿ ಮಾಧ್ಯಮ ರಂಗವೂ ವೈಫಲ್ಯ ಆಗುತ್ತಿರುವುದು ಈ ಕಥನದ ಹೂರಣ.
ವಾಸ್ತವವಾದಿ ವಸ್ತುವನ್ನು ರಂಗಕ್ಕೆ ವಿನ್ಯಾಸ ಮಾಡುವುದು ಸವಾಲಿನ ಕೆಲಸ. ಅದರಲ್ಲೂ ರಾಜಕೀಯ ಪ್ರಧಾನ ಆಗಿದ್ದರೆ ಅದರ ಭಾರ ಮತ್ತಷ್ಟು ಹೆಚ್ಚೇ ಆಗುತ್ತದೆ. ಅಂತಹ ಸವಾಲನ್ನು ಇಟ್ಟುಕೊಂಡು ಕೆ.ವೈ. ನಾರಾಯಣಸ್ವಾಮಿ ಈ ನಾಟಕವನ್ನು ರಚಿಸಿದ್ದಾರೆ. ‘ಗೋವಿನ ಹಾಡು’ ಜನಪದ ಕಥನ ಗೀತೆಯನ್ನು ರಂಗರೂಪಕ್ಕೆ ಪರಿವರ್ತಿಸಿದ್ದಾರೆ. ಆ ‘ಪೂರ್ವರಂಗ’ ಗೀತೆ ಗಾಂಧಿ–ಅಂಬೇಡ್ಕರ್, ಬಸವಾದಿ ಮಾರ್ಗದ ಪ್ರಜಾತಂತ್ರದ ಕನಸನ್ನು ಸ್ಮರಿಸುತ್ತದೆ. ಮುಖ್ಯಮಂತ್ರಿ ಶೀಲವಂತ ಆದರ್ಶವಾದಿ ರಾಜಕಾರಣಿಯಾಗಿ ಕಾಣಿಸುತ್ತಾರೆ.
ರಾಜ್ಯದ ದೀರ್ಘ ರಾಜಕಾರಣದ ಒಂದಂಶ ನಾಟಕದ ಕೇಂದ್ರವಾಗಿದೆ. ಜಾತಿ ಮತ್ತು ಭ್ರಷ್ಟಾಚಾರ ವ್ಯವಸ್ಥೆಯ ದಿಕ್ಕನ್ನು ಯಾವತ್ತೂ ತಪ್ಪಿಸುತ್ತದೆ. ಅದನ್ನು ಮೌಢ್ಯ ಮತ್ತಷ್ಟು ಪೋಷಣೆ ಮಾಡುತ್ತದೆ. ಮುಖ್ಯಮಂತ್ರಿ ಶೀಲವಂತ, ಗೋಪಾಲಗೌಡರ ಪಾದದ ಮೇಲೆ ಆಣೆ ಮಾಡಿ ಅಧಿಕಾರದ ಗದ್ದುಗೆ ಏರಿದ್ದಾನೆ. ಚುನಾವಣೆ ರಾಜಕಾರಣದಲ್ಲಿ ಆತನೇ ಯಶಸ್ಸಿನ ಅಸ್ತ್ರವಾಗುತ್ತಾನೆ. ಆಡಳಿತದಲ್ಲಿ ಆದ ಲೋಪಗಳಿಂದ ನ್ಯಾಯದ ಕಟಕಟೆಯಲ್ಲಿ ಆತನೇ ನಿಲ್ಲಬೇಕಾಗುತ್ತದೆ. ತನ್ನ ಅಧಿಕಾರದ ಅಕ್ರಮಗಳಿಂದ ಪ್ರಾಮಾಣಿಕ ಅಧಿಕಾರಿಗಳೂ ಶಿಕ್ಷೆಗೆ ಒಳಗಾಗಿದ್ದಾರೆ. ಅವರನ್ನು ರಕ್ಷಿಸಬೇಕು, ತನ್ನ ಆಡಳಿತದ ಅಕ್ರಮಕ್ಕೆ ಸಂಬಧಿಸಿ ತನಿಖೆಗೆ ಆದೇಶಿಸಬೇಕು ಎಂದು ನ್ಯಾಯಪೀಠಕ್ಕೆ ವಿನಂತಿಸುತ್ತಾನೆ. ಕೆಲವೇ ಕ್ಷಣದಲ್ಲಿ ಮುಖ್ಯಮಂತ್ರಿ ಎದೆಗೆ ಗುಂಡು ನಾಟುತ್ತದೆ. ಪ್ರಾಮಾಣಿಕ ವ್ಯವಸ್ಥೆಯ ನಿರೀಕ್ಷೆ ಇನ್ನೂ ನ್ಯಾಯಪೀಠದ ಮುಂದಿದೆ ಎನ್ನುವುದನ್ನು ಧ್ವನಿಸುತ್ತಲೇ ನಾಟಕ ಮುಗಿಯುತ್ತದೆ. ಮತ್ತೆ ಪೂರ್ವರಂಗ ಗೀತೆ ಅನುರಣಿಸುತ್ತದೆ.
ಮತ್ತೆ ಮುಖ್ಯಮಂತ್ರಿ
ಲೇ: ಕೆ.ವೈ. ನಾರಾಯಣಸ್ವಾಮಿ
ಪ್ರ: ಮಾವಲಿ ಪಬ್ಲಿಕೇಶನ್
ಸಂ: 6360915721
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.