ಗ್ರಾಮ ಭಾರತದ ಸಮಕಾಲೀನ ಮಾನವೀಯ ಘಟನೆಗಳನ್ನು ಕತೆಯಾಗಿಸಿ ಮಕ್ಕಳಿಗೆ ತಿಳಿಸುವ ಯತ್ನ ವಿರಳವೇ. ಪಿ. ಸಾಯಿನಾಥ್ ಅವರ ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾ (PARI) ಅಂತಹ ಕೆಲಸವನ್ನು ವೆಬ್ ಪೋರ್ಟಲ್ ಮೂಲಕ ಅದಾಗಲೇ ಪ್ರಾರಂಭಿಸಿದೆ. ಆ ಕಥಾಸರಣಿಯ ಐದನ್ನು ಬಹುರೂಪಿ ಪ್ರಕಾಶನ ಕಿರು ಪುಸ್ತಕಗಳಾಗಿ ಕನ್ನಡಕ್ಕೆ ತಂದಿದೆ.
ವಲಸೆ ಕಾರ್ಮಿಕರ ಮಕ್ಕಳ ಶಿಕ್ಷಣದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ‘ಮರಳಿ ಮಣ್ಣಿಗೆ’ (ಪ್ರೀತಿ ಡೇವಿಡ್, ಕನ್ನಡಕ್ಕೆ: ರಾಜಾರಾಂ ತಲ್ಲೂರು, ಬೆಲೆ: ₹125), ಆಂಧ್ರದಿಂದ ಕೊಚ್ಚಿಗೆ ಕೆಲಸ ಹುಡುಕಿಕೊಂಡು ಟಿಕೆಟ್ ಇಲ್ಲದೆ ಪಯಣಿಸುವ ಆರು ಮಂದಿಯ ಆಸಕ್ತಿಕರ ಕಥನ ‘ಟಿಕೆಟ್ ಇಲ್ಲ, ಪ್ರಯಾಣ ನಿಲ್ಲಲ್ಲ’ (ಸುಬೂಹಿ ಜಿವಾನಿ, ಕನ್ನಡಕ್ಕೆ: ಅಬ್ಬೂರು ಪ್ರಕಾಶ್, ಬೆಲೆ: ₹125), ಅಂಗವೈಕಲ್ಯ ಮೀರಿ ಪ್ಯಾರಾಲಂಪಿಕ್ನಲ್ಲಿ ಪಾಲ್ಗೊಳ್ಳುವ ಮಟ್ಟಕ್ಕೆ ಬೆಳೆಯುವ ಹುಡುಗಿಯ ಸ್ಫೂರ್ತಿದಾಯಕ ವಿಷಯದ ‘ಗೆದ್ದೇ ಬಿಟ್ಟೆ...!’ (ನಿವೇಧಾ ಗಣೇಶ್, ಕನ್ನಡಕ್ಕೆ: ಸಂತೋಷ ತಾಮ್ರಪರ್ಣಿ), ತಮಿಳುನಾಡಿನಲ್ಲಿ ಸಂಪಂಗಿ ಫಾರ್ಮ್ ನೋಡಿಕೊಳ್ಳುತ್ತಲೇ ಸಿಂಗಲ್ ಪೇರೆಂಟ್ ಆಗಿ ಯಶಸ್ಸು ಸಾಧಿಸುವ ವ್ಯಕ್ತಿಯ ಹೂರಣ ಇರುವ ‘ನಂದಿನಿ ಎಂಬ ಜಾಣೆ’ (ಅಪರ್ಣಾ ಕಾರ್ತಿಕೇಯನ್, ಕನ್ನಡಕ್ಕೆ: ವಿ. ಗಾಯತ್ರಿ, ಬೆಲೆ: ₹150), ಎಚ್ಐವಿ ಇರುವ ಮಕ್ಕಳೇ ಕಲಿಲಯುವ ಶಾಲೆಯಲ್ಲಿ ಗುರಿ ಇಟ್ಟುಕೊಂಡು ಮುನ್ನಡೆಯುವ ಮಗುವಿನ ಮನಕಲಕುವ ಕಥೆಯ ‘ಸ್ನೇಹಗ್ರಾಮದ ಸಂಸತ್ತು’ (ವಿಶಾಖ ಜಾರ್ಜ್, ಕನ್ನಡಕ್ಕೆ: ಪ್ರಸಾದ್ ನಾಯ್ಕ್, ಬೆಲೆ: ₹ 150) ಬಹುರೂಪಿ ಕನ್ನಡೀಕರಿಸಿರುವ ಪುಟ್ಟ ಕೃತಿಗಳ ಗುಚ್ಛ.
ಅಚ್ಚುಕಟ್ಟಾದ ಅನುವಾದ, ಸೊಗಸಾದ ಮುಖಪುಟಗಳು ಕೃತಿಯನ್ನು ಅಂದಗಾಣಿಸಿವೆ. ತಮ್ಮದೇ ಜಗತ್ತಿನಲ್ಲಿ ಇರುವ ಮಕ್ಕಳಿಗೆ ಸ್ಫೂರ್ತಿ ತುಂಬುವ, ಚಿಂತನೆಗೆ ಹಚ್ಚುವ, ವಿವೇಕ ವರ್ಧಿಸುವ ಇಂತಹ ಕಥೆಗಳು ನಿಜಕ್ಕೂ ಟಾನಿಕ್ನಂತೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.