ADVERTISEMENT

ಪುಸ್ತಕ ವಿಮರ್ಶೆ | ಬಿಡಿ ಬರಹಗಳ ಸಂಕಲನ

​ಪ್ರಜಾವಾಣಿ ವಾರ್ತೆ
Published 6 ಮೇ 2023, 20:50 IST
Last Updated 6 ಮೇ 2023, 20:50 IST
sabha
sabha   

ವೃತ್ತಿಯಿಂದ ಇಂಗ್ಲಿಷ್‌ ಉಪನ್ಯಾಸಕಿಯಾಗಿರುವ ಸಿ.ಬಿ.ಶೈಲಾ ಬರವಣಿಗೆಯಿಂದ ಕನ್ನಡ ಸಾಹಿತ್ಯ ಲೋಕದಲ್ಲಿ ಪರಿಚಿತರು. ಈ ಹಿಂದೆ ಕೆಲ ಕಥೆ, ಕವನ ಸಂಕಲಗಳನ್ನು ರಚಿಸಿದ್ದ ಶೈಲಾ ಅವರು ಈಗ ‘ಸಭಾ ಮರ್ಯಾದೆ’ ಎಂಬ ಕೃತಿ ಪ್ರಕಟಿಸಿದ್ದಾರೆ. 18 ಲೇಖನಗಳನ್ನು ಒಳಗೊಂಡಿರುವ ಲೇಖನಗಳ ಸಂಗ್ರಹ ಇದಾಗಿದೆ. ತಮ್ಮ ನಿತ್ಯದ ಬದುಕಿಗೆ ಸಿಕ್ಕ ಅನುಭವಗಳನ್ನು ಚುಟುಕಾಗಿ ಹೇಳುತ್ತ ಹೋಗುತ್ತಾರೆ. ಚಿತ್ರದುರ್ಗದ ಆಕಾಶವಾಣಿಗಾಗಿ ಹಾಗೂ ಸಾಮಾಜಿಕ ಜಾಲತಾಣಕ್ಕಾಗಿ ಬರೆದ ಬರಹಗಳಿವು ಎಂದು ಲೇಖಕರು ಪ್ರಾರಂಭದಲ್ಲಿಯೇ ಹೇಳುತ್ತಾರೆ. 

‘ಭಾಷೆ ಬೇರೆ ಆತ್ಮವೊಂದೇ’ ಎಂಬ ಲೇಖನದಲ್ಲಿ ಭಾಷಾಂತರದ ಎಡವಟ್ಟುಗಳನ್ನು, ಅನುವಾದವನ್ನು ನಮ್ಮದೇ ಮೂಲ ಎನ್ನುವಷ್ಟು ಸೊಗಸಾಗಿಸುವ ಪರಿಯನ್ನು ವಿವರಿಸುತ್ತಾರೆ. ಕನ್ನಡ ಅನುವಾದ ಜಗತ್ತಿಗೆ ದಿಗ್ಗಜರ ಕೊಡುಗೆಗಳನ್ನು ಸ್ಮರಿಸುತ್ತಾರೆ. ಭಾಷಾನುವಾದದ ಕುರಿತು ಮಾಹಿತಿಯೋಗ್ಯ ಬರಹ.

ಇಲ್ಲಿನ ಬಹುತೇಕ ಬರಹಗಳು ಎಲ್ಲರ ಬದುಕಿನಲ್ಲಿ ನಿತ್ಯವೂ ನೋಡಲು ಸಿಗುವ ವಿಷಯಗಳೇ ಆಗಿವೆ. ಹೀಗಾಗಿ ಬಹಳ ಬೇಗ ಮನಸ್ಸಿಗೆ ತಲುಪುತ್ತವೆ. ‘ಬದಲಿ ವ್ಯವಸ್ಥೆ’ ಎಂಬ ಲೇಖನ ನಾವು ಹೇಗೆ ಅಗತ್ಯಕ್ಕೆ ತಕ್ಕಂತೆ ಬದಲಾವಣೆಗಳಿಗೆ ಒಗ್ಗಿಕೊಳ್ಳುತ್ತೇವೆ ಎಂಬುದನ್ನು ವಿವರಿಸುತ್ತದೆ. ಗಟ್ಟಿಯಾದ ವಿವರಣೆಗಳೊಂದಿಗೆ, ಉದಾಹರಣೆಗಳೊಂದಿಗೆ ಲಘು ದಾಟಿಯ ಬರಹಗಳು ಇಲ್ಲಿವೆ. ಜಗತ್ತಿನಲ್ಲಿ ನಿತ್ಯವೂ ನಡೆಯುವ ನೂರೆಂಟು ಸಭೆ, ಸಮಾರಂಭಗಳು, ಅನುಕೂಲಕ್ಕೆ ತಕ್ಕಂತೆ ಅವುಗಳಲ್ಲಿನ ಮಾಪಾರ್ಡುಗಳು, ಸಭೆಗೆ ಇರಬೇಕಾದ ಗೌರವಗಳ ಕುರಿತು ವಿವರಿಸುವ ‘ಸಭಾ ಮರ್ಯಾದೆ’ ಲೇಖನ ಸಭೆಗಳ ಕುರಿತಾಗಿನ ಒಳನೋಟವನ್ನು ನೀಡುತ್ತದೆ.

ADVERTISEMENT

ಕೃ: ಸಭಾ ಮರ್ಯಾದೆ

ಲೇ: ಸಿ.ಬಿ.ಶೈಲಾ ಜಯಕುಮಾರ್‌

ಪ್ರ: ತೇಜಸ್‌ ಇಂಡಿಯಾ

ಬೆ:150

ಪು:128

ಸಂ: 9482200056

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.