ಸಂಜಲಿ ಸೆಂಟರ್ ಫಾರ್ ಒಡಿಸ್ಸಿ ಡಾನ್ಸ್ ವತಿಯಿಂದ ಮಾರ್ಚ್ 15ರಂದು ವೈಟ್ಫೀಲ್ಡ್ನಲ್ಲಿರುವ ಜಾಗೃತಿ ಥಿಯೇಟರ್ನಲ್ಲಿ ‘ಆನರ್ತನಂ’ ಒಡಿಸ್ಸಿ ನೃತ್ಯ ಸಂಜೆ ಜರುಗಲಿದೆ.
ಖ್ಯಾತ ಒಡಿಸ್ಸಿ ನೃತ್ಯಪಟು ಶರ್ಮಿಳಾ ಮುಖರ್ಜಿ ಅವರ ಪರಿಕಲ್ಪನೆಯ ‘ಆನರ್ತನಂ’ ತಾಜಾ ಹಾಗೂ ಅಸಾಂಪ್ರದಾಯಿಕ ಥೀಮ್ಗಳನ್ನು ಒಳಗೊಂಡ ನಾಲ್ಕು ವಿಭಿನ್ನ ಕೊರಿಯೋಗ್ರಫಿಗಳ ನೃತ್ಯ ಸಂಯೋಜನೆ.
ಆನರ್ತನಂ ‘ಗ್ರೀಷ್ಮ ಗೀತಂ’ ಮೂಲಕ ಆರಂಭಗೊಳ್ಳಲಿದೆ. ಕಾಳಿದಾಸನ ‘ಋತುಸಂಹಾರ’ ಆಧರಿಸಿ ಬೇಸಿಗೆಯ ಋತುವಿನ ಕುರಿತ ಕಾವ್ಯಾತ್ಮಕ ಒಡಿಸ್ಸಿ ನೃತ್ಯ ಇದಾಗಿದೆ. ಗ್ರೀಷ್ಮ ಗೀತಂ ಬೇಸಿಗೆಯ ಋತುವಿನ ಪ್ರಖರ, ಹೊಳಪುಳ್ಳ ಹಾಗೂ ವರ್ಣರಂಜಿತ ಬಣ್ಣಗಳನ್ನು ಅನಾವರಣಗೊಳಿಸುತ್ತದೆ. ನಂತರದಲ್ಲಿ ಶರ್ಮಿಳಾ ಮುಖರ್ಜಿ ಅವರ ಏಕವ್ಯಕ್ತಿ ಅಭಿನಯ ‘ಕೈಕೇಯಿ’ ಪ್ರದರ್ಶನಗೊಳ್ಳಲಿದೆ. ರಾಮಾಯಣದ ಅತ್ಯಂತ ದುಷ್ಟ ಪಾತ್ರವನ್ನು ಸಕಾರಾತ್ಮಕವಾಗಿ ತೋರಿಸುವ ಪ್ರಯತ್ನವೇ ಕೈಕೇಯಿ. ಕೈಕೇಯಿಯನ್ನು ಒಬ್ಬ ಪ್ರೀತಿಯ ಪತ್ನಿಯಾಗಿ, ವಾತ್ಸಲ್ಯಭರಿತ ತಾಯಿಯಾಗಿ, ಕರ್ತವ್ಯನಿಷ್ಠ ರಾಣಿಯಾಗಿ ಹಾಗೂ ವೀರ ಹೋರಾಟಗಾರ್ತಿಯಾಗಿ ತೋರಿಸುವ ಮೂಲಕ ಆಕೆಯ ಸಾಂಪ್ರದಾಯಿಕ ಚಿತ್ರಣವನ್ನು ಮರುಪರಿಶೀಲಿಸುವ ಪ್ರಯತ್ನ ಮಾಡಲಾಗುತ್ತದೆ.
ಆನರ್ತನಂ ಭಾಗವಾಗಿ ಶರ್ಮಿಳಾ ಮತ್ತು ತಂಡದ ಮುಂದಿನ ಪ್ರೊಡಕ್ಷನ್ ‘ಸೂಕ್ಷ್ಮ’ದ ಮುನ್ನೋಟವನ್ನೂ ನೀಡಲಿದೆ.
ಸೂಕ್ಷ್ಮ ಎನ್ನುವುದು ಎ.ಕೆ.ರಾಮಾನುಜಂ ಅವರ ಕನ್ನಡ ಜನಪದ ಕಥೆಯಾದ ‘ಎ ಫ್ಲವರಿಂಗ್ ಟ್ರೀ’ ಆಧರಿತ ಒಡಿಸ್ಸಿ ಬ್ಯಾಲೆಟ್ ನೃತ್ಯ. ನೃತ್ಯದ ಪರಿಭಾಷೆಯ ಮೂಲಕ ಪ್ರದರ್ಶಿಸಲ್ಪಡುವ ‘ಸೂಕ್ಷ್ಮ’ವು, ಮಹಿಳೆ ಮತ್ತು ನಿಸರ್ಗದ ಮೌಲ್ಯವನ್ನು ಸಮಾನವಾಗಿ ಗೌರವಿಸಬೇಕಾದ ಅಗತ್ಯವನ್ನು ಪ್ರತಿಪಾದಿಸುತ್ತದೆ. ‘ಮೋಕ್ಷಂ’ ಕಾರ್ಯಕ್ರಮದ ಸಮಾರೋಪ ನೃತ್ಯ. ಇದು ಅಧ್ಯಾತ್ಮಿಕ ಸ್ವಾತಂತ್ರ್ಯವನ್ನು ಪ್ರತಿಧ್ವನಿಸುತ್ತದೆ.
ಸ್ಥಳ: ಜಾಗೃತಿ ಥಿಯೇಟರ್, ವರ್ತೂರು ರಸ್ತೆ, ವೈಟ್ಫೀಲ್ಡ್. ಮಾರ್ಚ್ 15 ರಾತ್ರಿ 8ಕ್ಕೆ ಪ್ರವೇಶ ದರ ₹ 500. ಟಿಕೆಟ್ ದೊರೆಯುವ ಸ್ಥಳ: ಜಾಗೃತಿ ಬಾಕ್ಸ್ ಆಫೀಸ್ ಮತ್ತು ಬುಕ್ ಮೈ ಶೋ. ಮಾಹಿತಿಗೆ:9886 231500
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.