ಉಸ್ತಾದ್ ಫಯಾಜ್ ಖಾನ್ ಸಾರಂಗಿ ಅವರು ಅಪರೂಪದ ‘ಸಾರಂಗಿ ಕುಟುಂಬ’ದ ಕುಡಿ. ಸಾರಂಗಿಯೇ ಅವರ ಸರ್ ನೇಮ್. ಕಳೆದ ಒಂಬತ್ತು ತಲೆಮಾರುಗಳಿಂದ ಸಾರಂಗಿ ನುಡಿಸುತ್ತಿರುವ ಈ ಕುಟುಂಬ ಸದಸ್ಯರು ಐತಿಹಾಸಿಕ ವಾದ್ಯವನ್ನು ಜತನದಿಂದ ಕಾಪಾಡಿಕೊಂಡು ಬಂದಿದ್ದಾರೆ. ಇವರ ಮೂಲ ಉತ್ತರ ಪ್ರದೇಶದ ‘ಕಿರಾಣಾ’ ಎಂಬ ಊರು, ಕಿರಾಣಾ ಘರಾಣೆಯ ಮೂಲ ಸ್ಥಳ.
ಫಯಾಜ್ ಖಾನ್ ಅವರ ತಾತ ಉಸ್ತಾದ್ ಶೇಖ್ ಅಬ್ದುಲ್ಲಾ ಖಾನ್ ಅವರು ಗ್ವಾಲಿಯರ್ ಆಸ್ಥಾನ ವಿದ್ವಾಂಸರಾಗಿದ್ದರು. ತಂದೆ ಉಸ್ತಾದ್ ಅಬ್ದುಲ್ ಖಾದರ್ ಖಾನ್ ಅವರು ಜೀವನದ ನೆಲೆ ಅರಸಿ ದಕ್ಷಿಣಕ್ಕೆ ವಲಸೆ ಬಂದರು. ಹೈದರಾಬಾದ್ ನಿಜಾಮರ ಆಸ್ಥಾನ, ಮೈಸೂರು ಅರಸರ ಆಸ್ಥಾನದಲ್ಲಿ ಸಾರಂಗಿ ನುಡಿಸುತ್ತಿದ್ದರು.
1950ರಲ್ಲಿ ಧಾರವಾಡ ಆಕಾಶವಾಣಿ ಅವರ ಕೈಬೀಸಿ ಕರೆಯಿತು. ಧಾರವಾಡದಲ್ಲೇ ಹುಟ್ಟಿದ ಫಯಾಜ್ ಖಾನ್ ಕನ್ನಡಿಗರಾಗಿಯೇ ಬೆಳೆದರು, ಕನ್ನಡ ಶಾಲೆಯಲ್ಲೇ ಕಲಿತರು. ಅತ್ಯಂತ ಸಣ್ಣ ವಯಸ್ಸಿನಲ್ಲೇ ತಂದೆ–ತಾಯಿಯನ್ನು ಕಳೆದುಕೊಂಡ ಫಯಾಜ್ ಖಾನ್ ಅವರು ಕಷ್ಟದ ಪರಿಸ್ಥಿತಿ ಎದುರಿಸಿದರು. ಆದರೂ ಮುಂಬೈನ ಪಂಡಿತ್ ರಾಮ್ ನಾರಾಯಣ್ ಅವರ ಬಳಿ ಸಾರಂಗಿ ಕಲಿಕೆ ಮುಂದುವರಿಸಿ ಕುಟುಂಬದ ಪರಂಪರೆಯನ್ನು ಎತ್ತಿ ಹಿಡಿದರು.
ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಜೊತೆಗೆ ದಾಸವಾಣಿ, ವಚನವಾಣಿ, ದಾರಾವಾಹಿ ಶೀರ್ಷಿಕೆ ಗೀತೆ, ಸಿನಿಮಾ ಹಿನ್ನೆಲೆ ಸಂಗೀತದಲ್ಲೂ ಅವರು ಗುರುತಿಸಿಕೊಂಡಿದ್ಧಾರೆ. 2 ಸಾವಿರ ಬಂದಿಶ್ಗಳನ್ನು ಬರೆದು ರಾಗಸಂಯೋಜನೆ ಮಾಡಿ ಹಾಡಿದ್ದಾರೆ. ಇಂತಿಪ್ಪ ಉಸ್ತಾದ್ ಫಯಾಜ್ ಖಾನ್ ಅವರ ಬದುಕಿನಲ್ಲಿ ನಡೆದ ಒಂದು ನೋವಿನ ಅನುಭವ ಈ ವಾರದ ‘ಜಸ್ಟ್ ಮ್ಯೂಸಿಕ್’ ಸರಣಿಯಲ್ಲಿದೆ.
ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್ಬುಕ್ನಲ್ಲಿ ಲೈಕ್ ಮಾಡಿ
ಟ್ವಿಟರ್ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್ನಲ್ಲಿ ನೋಡಿ...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.