ADVERTISEMENT

ಪುಟಾಣಿ ಕವಿತೆ | ಪನಿಶ್ಮೆಂಟು

ಚಿದಾನಂದ ಸಾಲಿ
Published 12 ನವೆಂಬರ್ 2022, 19:30 IST
Last Updated 12 ನವೆಂಬರ್ 2022, 19:30 IST
ಚಿದಾನಂದ ಸಾಲಿ ಹಾಗೂ ಹೆಗ್ಗಡಹಳ್ಳಿ ಸರ್ಕಾರಿ ಪ್ರೌಢಶಾಲೆಯ 9ನೇ ತರಗತಿ ಐಶ್ವರ್ಯ ಬರೆದ ಚಿತ್ರ
ಚಿದಾನಂದ ಸಾಲಿ ಹಾಗೂ ಹೆಗ್ಗಡಹಳ್ಳಿ ಸರ್ಕಾರಿ ಪ್ರೌಢಶಾಲೆಯ 9ನೇ ತರಗತಿ ಐಶ್ವರ್ಯ ಬರೆದ ಚಿತ್ರ   

ಟ್ರಿಣ್ ಟ್ರಿಣ್ ಬೆಲ್ಲು ಬಾರಿಸಿತು
ಸ್ಕೂಲಿಗೆ ಟೈಮು ಆಗೋಯ್ತು

ಕಾಲಿಗೆ ಮಣಭಾರ ಬೂಟೇರ್ಸಿ
ಕೊರಳಿಗೆ ಬಾಟಲಿ ನೇತಾಡ್ಸಿ

ಬೆನ್ನಿಗೆ ಹೆಣಭಾರದ ಬ್ಯಾಗು
ಮುಖದಲಿ ಹುಸಿನಗೆಯ ಸೋಗು

ADVERTISEMENT

ಕಾಲೆಳಕೊಂಡು ಹೋಗ್ಬೇಕು
ಮೂಗೇರಿಸಿಕೊಂಡು ಕೂರ್ಬೇಕು

ಗಲಾಟೆ ಮಾಡಿದರೆ ಬೈತಾರೆ
ಅತ್ತರೆ ಹಂಗಿಸಿ ನಗುತಾರೆ

ಮಿಸ್ಸಿನ ಮಾತು ಹಾಗಿರಲಮ್ಮ
ಆಯಾನೂ ಕಂಪ್ಲೇಂಟ್ ಕೊಡ್ತಾಳೆ

ನಿಜ ಹೇಳಮ್ಮ ನಿಜ ಹೇಳು
ಸ್ಕೂಲನು ಕಂಡ್ಹಿಡಿದವರಾರೇಳು?

ಎಲ್ಲಕೂ ನನಗೇ ಬೈತೀಯಲ್ಲ
ಅಂತವರಿಗೆ ಪನಿಶ್ಮೆಂಟ್ ಇಲ್ಲೇನು?!

==============================

ವಾರ್ನಿಂಗ್

ಕೋಳಿ ಕೋಳಿ ಕೊಕ್ಕೊಕ್ಕೋ
ಬೆಳಿಗ್ಗೆ ಸುಮ್ನೆ ನೀ ಮಕ್ಕೋ /ಅ/

ನೀನೇನ್ ಶಾಲೇಗ್ ಹೋಗ್ತೀಯ?
ನಮ್ಮಂಗ್ ಏಟು ತಿಂತೀಯ?

ಟೀವಿ ಗೀವಿ ನೋಡದೆ
ಠೀವಿಯಿಂದ ಇರ್ತೀಯ
ಹೋಮ್ ವರ್ಕೇ ಇಲ್ಲದೆ
ಓಣಿ ಓಣಿ ತಿರುಗ್ತೀಯ

ಇಕ್ಕಿದ್ದುಂಡು ಸಿಕ್ಕಲ್ ಮಲಗಿ
ಕುನುಕು ನಿದ್ದೆ ತೆಗಿತೀಯ
ಬೆಳಿಗ್ಗೆ ಬೇಗ್ನೆ ಎದ್ದು
ನಮ್ಮ ಪ್ರಾಣ ತಿಂತೀಯ

ನೀನೂ ಶಾಲೆಗೆ ಬಂದ್ನೋಡು
ನಮ್ಮ ಕಷ್ಟ ತಿಳಿಯುತ್ತೆ
ಟೀವಿ ಮುಂದೆ ಕುಂತ್ನೋಡು
ಕೂಗೋದು ತಾನೇ ನಿಲ್ಲುತ್ತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.