ಮೂರು ಗುದ್ದಲಿ ಮಣ್ಣು ಅಗೆದು
ಗುಳಿ ತೆಗೆದು
ಎರಡು ಬೊಗಸೆ ಗೊಬ್ಬರ
ಒಂದಿಷ್ಟು ನಾರು ಸತ್ತೆ ತುಂಬಿ
ಟೊಂಗೆ ಸಗಣಿಗೆ ಅದ್ದಿ
ನೆಡುವ ಹೊತ್ತಿಗೆ
ನಾನು ತುಂಬಿದ ಬಿಮ್ಮನಸಿ
ಊರುವ ಮುನ್ನ ಉಸುರುತ್ತೇನೆ
ಹಡೆಯಲಿರುವ ಗಿಡದ ಕಿವಿಯಲ್ಲಿ
ತಾಯಾಗುವುದೆಂದರೆ
ಎಲೆಯನ್ನು ಹುಳುವಾಗಿಸಿ
ಬೇರನ್ನು ಹೇನಾಗಿಸಿ
ಹರೆಯಲ್ಲಿ ಇರುವೆ ಬಾಳಿಸಿ
ಹೂವನ್ನು ಚಿಟ್ಟೆ ಮಾಡಿ
ಹಣ್ಣನ್ನು ಹಕ್ಕಿಯಾಗಿಸುವುದು
ಎಂದು
ಸೋಜಿಗದಲ್ಲಿ ಮಾತಾಡುತ್ತದೆ ಟೊಂಗೆ
ಮಕ್ಕಳುಮರಿ ಮೈನೋಯುವಂತೆ ಎಳೆದರೆ
ಸುಮ್ಮನಾದರೂ ಹರಿದರೆ ಎಲೆ
ಬಿಡಿಸಿದರೆ ಮೊಗ್ಗು
ಮೈಯುಜ್ಜಿದರೆ ಎಮ್ಮೆ
ಕಡಿದರೆ ಕೊಂಬೆ
ಮುರಿದರೆ ಚಿಗುರು
ಬೀರಿದರೆ ಕಲ್ಲು ದೋರೆಗಾಯಿಗೆ?
ಮರಕ್ಕೂ ನೋವಿರುತ್ತವೆ ಅಸಲಿಗೆ
ಮನುಷ್ಯರಿಗಲ್ಲದೆ ಮರಕ್ಕಾ ಎನ್ನುವುದು
ಸುಮ್ಮನೇ ಸಲೀಸಲ್ಲ.
ಹೂವಿಂದ ಬೆಳಕು
ಹಸಿರಲ್ಲಿ ಮೌನ
ಋತುವಿಗೊಂದು ಷರತ್ತು
ಹಸಿದ ಹಕ್ಕಿಗೆ ಪಸೆ
ಮುಂಗಲೂರಿದ ದುಂಬಿಗೆ
ಮಧುಗುಂಭ
ಓಡುವ ಮೋಡಕ್ಕೆ ಆಸರ
ಉರಿವ ಸೂರ್ಯನಿಗೆ ಅರೆಘಳಿಗೆ ನೆರಳು
ಗಾಳಿಗೆ ನೀವು ಕೈಕಾಲು
ಒಡಲುಗೊಂಡಾದ ಮೇಲೆ
ತಿಳಿಯುತ್ತದೆ ಮುಗುದೆ
ತಾಯಾಗುವುದು ತನ್ನಿಂತಾನೇ
ಎರಡು ಮುತ್ತುಗಳ ಮೀಸಲಿಡು
ದಳದ ತುದಿಯಲ್ಲಿ ಸದಾ
ನೋಡಿಕೊ ಖರ್ಚಾಗದಂತೆ
ಬರುತ್ತಾನೆ ಸೂಕ್ತ ವಾರಸುದಾರ
ಸುತ್ತೂ ಜಗತ್ತು ನಸುನಕ್ಕಿತು
ಕವಿಯೆಂಬುವವಳು ಈ ಲೋಕಕ್ಕೆ ತಾಯಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.