ADVERTISEMENT

ಕೊನೆಯ ತರ್ಪಣ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2019, 19:30 IST
Last Updated 7 ಸೆಪ್ಟೆಂಬರ್ 2019, 19:30 IST
ಕಲೆ: ವೆಂಕಟ್ರಮಣ ಭಟ್‌
ಕಲೆ: ವೆಂಕಟ್ರಮಣ ಭಟ್‌   

ಗಂಟೆ ಬಾರಿಸುತ್ತಲೇ ಇದೆ
ಕತ್ತಲಿನ ದಪ್ಪ ಗೋಡೆಗೆ
ಮರ ನಿಶ್ಚಲ ಹಕ್ಕಿ ಮೌನ
ಎಲ್ಲರ ಎದೆಗೂಡು ಹಿಮಗಡ್ಡೆ

ಯಾವ ಸೂಚನೆ?
ಬಿಸಿಯುಸಿರ ಅಡವಿಟ್ಟುಕೊಂಡ ನೀನು
ಕಿವುಡಾಗಿದ್ದೀಯೇನು?
ಅಥವಾ
ಕೂತಲ್ಲೇ ಹಿಮಗಟ್ಟಿದ್ದೀಯೋ?

ನಿನ್ನೆ ಬೆಳಗಿನಿಂದ
ಮೊದ ಮೊದಲು
ತೆಳು ರೆಂಬೆಗಳಿಗೆ ಬೂದು ಬಣ್ಣದ ಚಿಟ್ಟೆ ಜೋತು
ರೆಕ್ಕೆ ಮರೆತವರಂತೆ ಮಂಪರಿನಲ್ಲಿದ್ದವು
ಬಿಸಿಲೇರಿದರೂ ಮಿಸುಕಲಿಲ್ಲ
ಏನೋ ಎಡವಟ್ಟಿರಬೇಕೆಂದು
ಹಗಲು ನೂಕಿ
ಇರುಳ ಬಾಗಿಲಿಗೆ ಬಂದರೆ
ಯಾವ ಲೋಹದ ಝಣಪೋ!
ಗಂಟೆ ತಡೆದ ಈ ಗಂಟೆ ಸದ್ದು

ADVERTISEMENT

ಎಲ್ಲವೂ ಕುಸಿತ
ಕೊಡುವರಿಲ್ಲದೆ ಕೊಳ್ಳುವರಿಲ್ಲದೆ
ಜೀವ ಪ್ರೇಮ!

ಋತುಮಾನಗಳ ಮೈಯಡರಿದ ತಣುವಿಗೆ
ಆಸನಕೆ ರೂಪಿಸಿದ ಸಂಚುಗಾರರು
ಪರ ವಿರೋಧದ ಮೊನಚು ಕಳೆದು
ಸುಕ್ಕಾಗಿ ಸುರುಟುತ್ತಿರುವ
ಪುಪ್ಪಸಗಳ ಹಿಡಿದು
ಬಿದ್ದು ಒದ್ದಾಡುತ್ತಿರುವರು
ರಣರಂಗದ ಗಾಯಾಳುಗಳಂತೆ

ಅಹ! ಹದ್ದಿನ ರೆಕ್ಕೆಯ ಮೇಲೆ ಸಹ್ಯಾದ್ರಿ ಸಾಲು
ಕಟ್ಟಿಲ್ಲದ ನದಿ ದಂಡೆಗೊಂದೊಂದು ಗದ್ದೆ ಹೊಲ
ನೇಗಿಲಯೋಗಿಯ ಗೀತೆ
ಮತ್ತೆ ಕೊಟ್ಟೀತೆ
ಅನ್ನ
ಪ್ರೀತಿ
ಕರುಣೆ
ಮತ್ತು
ಈ ಪಾತಕಿಗಳಿಗೊಂದು ಕೊನೆಯ ತರ್ಪಣ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.