ADVERTISEMENT

ಕವಿತೆ | ‘ಕೊಳ ಮತ್ತು ಕಲ್ಲು’

ಶಂಕರ್ ಸಿಹಿಮೊಗೆ
Published 16 ಏಪ್ರಿಲ್ 2022, 19:30 IST
Last Updated 16 ಏಪ್ರಿಲ್ 2022, 19:30 IST
ಸಾಂದರ್ಭಿಕ ಕಲೆಕಲೆ: ಮಂಜುನಾಥ ವಿ.ಎಂ.
ಸಾಂದರ್ಭಿಕ ಕಲೆಕಲೆ: ಮಂಜುನಾಥ ವಿ.ಎಂ.   

ಕೊಳಕ್ಕೆ ಬಿದ್ದ ಕಲ್ಲು
ವೃತ್ತವಾಗುತ್ತಲೆ,
ತೀರಕ್ಕೆ ತಲುಪುತ್ತದೆ.
ಈಗ ಕಲ್ಲು,
ಬಿದ್ದ ಕೊಳದಲ್ಲಿದೆಯೋ!
ಇಲ್ಲ ದಡದಲ್ಲಿ!

*
ತನ್ನ ಸರದಿಗಾಗಿ
ಕಾಯುತ್ತಿರುವ,
ದಡದ ಮತ್ತೊಂದು ಕಲ್ಲಿಗೆ
ಮೂಲೆಗಳಿಂದಲೇ ತುಂಬಿರುವ
ಚೌಕವಾಗುವ ಬಯಕೆ,
ಆದರೆ ಕೊಳಕ್ಕೆ ಬಿದ್ದ ಮೇಲೆ
ವೃತ್ತವಾಗದೆ ಬೇರೆ ಆಯ್ಕೆಗಳಿಲ್ಲ!

*
ಅಣ್ಣಾ ಕಲ್ಲಣ್ಣ ನೋಡೋ
ಜಲದೊಳಗೆ ಮೈದುಂಬಿ ನಗುತ್ತಾಳೆ
ಈ ನೈದಿಲೆ,
ನಾಳೆ ಅದ್ಯಾವ ಕಟುಕನ ಕೈಗೆ ಸಿಕ್ಕು
ಮುರಿದು ಹೋಗುತ್ತಾಳೋ!
ನಮಗೋ ದಡ,
ದಡ ಬಿಟ್ಟರೆ ಕೊಳದ ತಳ!

ADVERTISEMENT

*
ರೆಕ್ಕೆಯ ಮುರಿದರು
ಛಲವನು ಬಿಡದೆ
ಹಾರುತ್ತಿದೆ ಬಸವನ ಕುದುರೆ,
ಮುರಿದವರಾರು?
ಕೊಳದಲಿ ಮಿಂದು
ದಡದಲಿ ನಿಂತು
ಕಂಡವರಾರು?
ನಿಜವದು ತಿಳಿದರು ಹೇಳಲು ಬಾಯಿಗಳಿಲ್ಲ!

*
ದಡಕ್ಕು ಮತ್ತು ನೀರಿಗೂ
ಇರುವ ವ್ಯತ್ಯಾಸವನ್ನೇ ಅಳಿಸಿ
ತನ್ನ ಮಾಯಾಜಾಲದಲ್ಲಿ ಬಂಧಿಸುವಳಲ್ಲ
ಈ ಅನುದಿನದ ಅಂತರಗಂಗೆ
ಇವಳ ನಂಬಿ ಪಾತಳಕ್ಕೆ ಬಿದ್ದವರೆಷ್ಟೋ!
ಲೆಕ್ಕ ಉಂಟೆನೋ ಕಲ್ಲಣ್ಣ?
ನಾವು ಇತ್ತ ತೇಲಲು ಇಲ್ಲ!
ಮುಳುಗಿ ಮೇಲೆ ಏಳಲು ಇಲ್ಲ!

*
ಕೊಳದ ದಡದ ಮೇಲೆ ಬಿದ್ದುಕೊಂಡಿದ್ದ
ದಡೂತಿ ಕಲ್ಲೊಂದು ಸಣ್ಣ ಕಲ್ಲಿಗೆ ಹೇಳಿತು,
ತೇಲಲು ನಮಗೆ ದೇಹ ಹಗುರವಾಗಿಲ್ಲ
ಮುಳುಗಿ ಏಳಲು ನಾವು ನೀರಕ್ಕಿಯಲ್ಲ
ಬಿದ್ದಾಗ ಈಜಿ ದಡ ಸೇರಲು
ಮೀನುಗಳಂತೆ ನಮಗೆ ರೆಕ್ಕೆಯು ಇಲ್ಲ!
ಇಲ್ಲಿ ಬಿದ್ದಿರಬೇಕು
ಇಲ್ಲ ಯಾವುದೋ ಮಾಂತ್ರಿಕನ ಕೈ
ತೆಗೆದು ಎಸೆದಾಗ ಕೊಳದ ತಳದಲ್ಲಿರಬೇಕು!

*
ಕೊಳದ
ದಡದ ಬದಿಯಲಿ ತೆವಳುತ್ತಾ ಸಾಗುತ್ತಿದ್ದ
ಎರೆಹುಳುವೊಂದನು ಶಂಖುವಿನ ಹುಳ ಕೇಳಿತ್ತು,
ತೆವಳಿ ತೆವಳಿ ಸವೆಯುವುದು ಎಷ್ಟು ದಿನ
ನಮಗೂ ಪಾದಗಳಿರಬೇಕಿತ್ತು!
ನಗುತ್ತಲೆ ಹಾಡಿತ್ತು ಎರೆಹುಳು,
ಬಿದ್ದಿರುವ ಕಲ್ಲುಗಳಿಗೆ ಮೀನಾಗುವ ಬಯಕೆ
ಮುಳುಗಿ ಏಳುವ ನೀರಕ್ಕಿಗೆ ನೈದಿಲೆಯಾಗುವ ಬಯಕೆ
ನಗುವ ನೈದಿಲಿಗೆ ತೆವಳಿ ಸಾಗುವ ಹುಳವಾಗುವ ಬಯಕೆ
ನನಗೆ ಹದ್ದಾಗುವ ಬಯಕೆ
ನಿನಗೆ ಪಾದ ಪಡೆದು ಜಂಗಮನಾಗುವ ಬಯಕೆ
ಈ ಮಾಯೆಗೆ ಕೊನೆಯಿಲ್ಲವೆಂದು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.