ಶಿವಕುಮಾರ ಸ್ವಾಮೀಜಿ ಕುರಿತು ಕವಿ ಜಿ.ಎಸ್.ಸಿದ್ದಲಿಂಗಯ್ಯ ಕವನ ‘ಸಿದ್ಧಗಂಗೆಯ ಬೆಳಕು’
–––
ಗವಿಯ ಹೊಗಲಿಲ್ಲ; ಬೋಧಿಯನರಸಿ ಮರಗಿಡದ
ಬುಡಕ್ಕೂ ಹೊಗಲಿಲ್ಲ ; ಆಳ ತನ್ನೊಳಗಿಳಿದು
ಕಂಡುದನದೆಲ್ಲರಿಗು ಹಂಚುವಾಸೆಯ ಹೊತ್ತು
ಸಿದ್ಧಗಂಗೆಗೆ ಬೆಳಕ ತಿಲಕವಿಟ್ಟವರಿವರು!
ಮಹಮನೆಯ ಹೊಕ್ಕಂತೆ ಸ್ವಾಗತಿಸುವುದು ಪ್ರೀತಿ ;
ಅನುಭವದ ಅಮೃತ ಮೈತೆರೆಯುವುದು ; ಭಕ್ತಿಯಲಿ
ನಿಂದವರು, ಹರಕೆಯೊಪ್ಪಿಸಲೆಂದು ಬಂದವರು,
ನುಡಿಯೆ ನಡೆಯಾಗುವುದ ಕಾಂಬ ಕೌತುಕದವರು,
ಜೇನಕ್ಕರೆಗೆ ಬಾಯಾರಿ ಜಾತ್ರೆ ನೆರೆದವರು
ಎಲ್ಲರೆದುರೂ ಇವರು ಬೆಟ್ಟಕ್ಕೆ ಕೈ ಕಾಲು
ಗಳು ಮೂಡಿ ನಡೆದಂತೆ ಸಾಕಾರವಾಗುವರು
ಶರಣಲೋಕದಲಿ ನಮ್ಮನುಸಿರಾಡಿಸುವರು
ಜ್ಞಾನದಲಿ ಪ್ರೀತಿಯಲಿ ಶಿವಕುಮಾರರು ಇವರು
ಬೆಳೆಯುತ್ತ ಹೋಗುವರು, ನಾವು ಬೆಳೆಬೆಳೆದಷ್ಟು.
– ಜಿ.ಎಸ್. ಸಿದ್ಧಲಿಂಗಯ್ಯ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.