ADVERTISEMENT

ವಿಕಾಸ್ ಆರ್‌.ಮೌರ್ಯ ಬರೆದ ಕವಿತೆ: ನಿರುದ್ಯೋಗಿ ಪ್ರಲಾಪ

ವಿಕಾಸ ಆರ್ ಮೌರ್ಯ, ಬೆಂಗಳೂರು
Published 31 ಜುಲೈ 2021, 19:30 IST
Last Updated 31 ಜುಲೈ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಂಡವರ ಮನೆಯ ಮುಸುರೆ ಮೆತ್ತಿದ ಅಮ್ಮನ ಕೈ

ಒಲೆಯೊಳಗೆ ಕಟ್ಟಿಗೆ ನೂಕಿ
ಹಿಟ್ಟಿನೆಸರು ಬೇಯಿಸುವಾಗ
ಕೊತ ಕೊತನೇ ಸದ್ದು
ನಾನದರಲ್ಲಿ ಕುದ್ದು
ದಿನಬೆಳಗೆಲ್ಲ ಕಣ್ಬಿಟ್ಟು ಓದಿದ್ದೆ

ಮುಂಗಾರು ಮಳೆ ಕೈ ಕೊಟ್ಟು
ಕಾಫಿ ಸೀಮೆಯ ಕದ ಬಡಿದ ಅಪ್ಪ
ತೊಡೆ ಕಚ್ಚಿದ ಜಿಗಣೆ ಬಿಡಿಸಿ
ಉಜ್ಜಿಕೊಳ್ಳುವುದ ಹೇಳುವಾಗ
ಕೇಳುತ್ತಲೇ ಕೆಂಡವಾಗಿ
ರಾತ್ರಿಯಿಡಿ ದೀಪ ಉರಿಸಿದ್ದೆ

ADVERTISEMENT

ಗೌಡನಿಗೆ ಶಾಪ ಹಾಕುತ್ತಾ ತಾತ
ಮುಂಜಾವಿನಲ್ಲಿ ಹಿಡಿದ ಒಳಶುಂಠಿ
ಕೋಪ ತರಿಸಲಿಲ್ಲ
ಆಗಾಗ ಹೋಗುತ್ತಿದ್ದ ಕರೆಂಟು
ಕತ್ತಲೆಯಾಗಿಸಿದರೂ
ಬುಡ್ಡಿ ದೀಪ ಕೈ ಬಿಡಲಿಲ್ಲ
ಗುರುಗಳ ಕೈಯಲ್ಲಿದ್ದ ಕೋಲು
ಸಿಟ್ಟು ಬರಿಸಿದ್ದಿಲ್ಲ

ಎದೆ ಮೇಲೆ‌ ಸೈಜುಗಲ್ಲಿಟ್ಟ ಹಾಗೆ
ನಿದ್ದೆ ಬಾರದ ನಡುರಾತ್ರಿ
ಪರೀಕ್ಷೆಯ ಕಂಡರೆ
ಹಾಳಾದ್ದು ಹಸಿವಿಗೂ ಭಯ
ಕಷ್ಟಪಟ್ಟು ಕಟ್ಟಿಕೊಂಡ ರೆಕ್ಕೆಗಳು
ಹಾರಾಡುವುದೊಂದೇ ಬಾಕಿ

ಓದು ಮುಗಿದು ಬೀದಿಗೆ ಬಿದ್ದೆ
ಹಾದಿಯಲ್ಲೆಲ್ಲ ರೆಕ್ಕೆಯ ಗರಿಗಳು
ಬೆಂದ ಬದುಕುಗಳ ಬಂಡೆಕಲ್ಲು
ಕಂಡ ಕನಸುಗಳ ಬೂದಿ ರಾಶಿ
ಯಾರಿಗಾಗಿ ಈ ಓದು?
ಯಾತಕ್ಕಾಗಿ ಈ ಓದು?
ಬುಡ್ಡಿದೀಪಕ್ಕೆ ಜ್ಞಾನೋದಯದ ಸಮಯ

ನನ್ನ ಮುಂದೆಯೇ
ಟ್ಯೂಷನ್ ಗೆಲ್ಲುತ್ತದೆ
ಆನ್ಲೈನ್ ಗೆಲ್ಲುತ್ತದೆ
ನೇಷನ್ ಗೆಲ್ಲುತ್ತದೆ
ನಾನು ಸೋತಿರುತ್ತೇನೆ
ನಾ-ನಿಲ್ಲದ ‘ನೇಷನ್’
ಯಾರು ಕೊಡುತ್ತಾರೆ
ಕೆಲಸ
ಮತ್ತೆಲ್ಲಿ ಸಿಗುತ್ತದೆ ಪೌರತ್ವ ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.