ADVERTISEMENT

ದೊಡ್ಡರಂಗೇಗೌಡ ಅವರು ಬರೆದ ಕವಿತೆ: ಈ ಲೋಕದ ಶಾಶ್ವತ ಸತ್ಯಗಳು

ದೊಡ್ಡರಂಗೇಗೌಡ
Published 10 ಸೆಪ್ಟೆಂಬರ್ 2022, 19:30 IST
Last Updated 10 ಸೆಪ್ಟೆಂಬರ್ 2022, 19:30 IST
ಸಾಂದರ್ಭಿಕ ಕಲೆಕಲೆ: ಪ್ರವೀಣ್‌ ಆಚಾರ್ಯ
ಸಾಂದರ್ಭಿಕ ಕಲೆಕಲೆ: ಪ್ರವೀಣ್‌ ಆಚಾರ್ಯ   

ಹೆಬ್ಬಾವಿನಂತೆ ಸುತ್ತಿಕೊಂಡಿದೆ ಭಷ್ಟಾಚಾರದ ಲಂಚದ ಉರಗ;

ಸಾಯುವುದಿಲ್ಲ...ಎಂದಿಗೂ...ಸಾಯುವುದಿಲ್ಲ!

ಪಾಪಸುಕಳ್ಳಿಯಂತೆ ಸಮೃದ್ಧ ಬೆಳೆದ

ADVERTISEMENT

ಜಾತೀಯತೆ ಕ್ಯಾಕ್ಟಸ್‌ ಅಳಿಯುವುದಿಲ್ಲ

ಮಲ್ಲಿಗೆಯಂತೆ ಕಂಪನು ಕೊಡುವ

ಪ್ರಾಮಾಣಿಕತೆಯ ಮಲ್ಲಿಗೆ ಹೂವು

ಅರಳುವುದಿಲ್ಲ ಎಂದೆಂದಿಗೂ ಅರಳುವುದಿಲ್ಲ

ಸ್ವಾರ್ಥದ ಲಾಲಸೆ ಕಬಂದ ರಾಕ್ಷಸನಂತೆ

ಬೆಳೆವುದೇ ಸೋಜಿಗ! ಏನಾಯ್ತು ಈ ಜಗ!

ಅನ್ಯಾಯವೆಂಬುದೇ ಬಾಯ್ತೆರೆದಘಾಸುರ

ಅಸತ್ಯವೆಂಬುದೇ ಬೆಳೆವ ಬಕಾಸುರ

ಧರ್ಮವೆಂಬುದೇ ಗ್ರಾಂಡ್‌ ಕ್ಯಾನ್ಯನ್‌ ಕಂದರ!

ಅಕ್ರಮವೆಂಬುದೇ ಚಿರಂತನ ನಯಾಗರ

ಆ ಕಡೆ ಈ ಕಡೆ ಯಾಕಡೆ ನೋಡಲಿ ನಿತ್ಯನಿತ್ಯವೂ ಅತ್ಯಾಚಾರ;

ಗದ್ದುಗೆಗಾಗಿ ಕುರುಕ್ಷೇತ್ರದ ಕದನ

ಹಣಗಳಿಕೆಗಾಗಿ ಅಗಣಿತ ಯಜ್ಞ

ಸುತ್ತಮುತ್ತಲೂ ದುಶ್ಯಾಸನರ ಸಂತೆ

ದೇವರು ದಿಂಡರು ಅಗಣಿತದ ಒರತೆ,

ಕಾವಿ ಕಾಕಿ ಖಾದಿ ಊರೊಳಗಿನ ಚಿರತೆ...

ಉಳಿದೀತೆ ಮಾನವತೆ ಹಿಮಗಿರಿಯಂತೆ ಅಚಲ?

ಝಣ ಝಣ ಉಕ್ಕುವ ನೈಲ್‌ ಉದ್ದ ನೈಲ್‌ ಅಗಲ,

ಎಲ್ಲೆಲ್ಲೂ ಆಷಾಢಭೂತಿಗಳ ಅಮೆಜಾನ್‌ ಕಾಡು

ಸ್ನೇಹ ಪ್ರೀತಿ ವಿಶ್ವಾಸ ಮರುಭೂಮಿ ಸಹರಾ

ಈ ವಿಕೃತಿ ಮಧ್ಯದಲಿ ಖಂಡೀತೆ ಪ್ರಕೃತಿ?

ಸುಗತಿಗಳ ಹನನದಲಿ ವಿಗತಿಗಳ ಸಂಗತಿ

ಎತ್ತತಿರುಗಲಿ ಕಣ್ಣು ಅತ್ತತ್ತ ಪಾಷಂಡಿ ಸಂತತಿ

ಸಿಕ್ಕೀತೆ ಸತ್ಸಂಗ? ಕಂಡೀತೆ ಸನ್ಮಾರ್ಗ?

ಹಗಲಲ್ಲೂ ಆವರಿಸಿದೆ ಭ್ರಮೆಯ ಕುರುಡು ಸ್ವರ್ಗ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.