ಸಹೋದರ
ಯಾತಕ್ಕಾಗಿ ಈ ದ್ವೇಷ
ನಿನ್ನ ಹೆಗಲ ಮೇಲಿರುವ
ಕೇಸರಿ ಶಾಲನ್ನು ನನಗೆ ನೀಡು
ಅದನ್ನೆ ಹಿಜಾಬ್ ಆಗಿ ಕಟ್ಟಿಕೊಳ್ಳುವೆ
ನಾನು ಅಕ್ಷರಸ್ಥಳಾಗುವುದು
ನಿನಗೆ ಇಷ್ಟವಿಲ್ಲವೆ
ನಿನ್ನಿಂದಾಗಿ ನಾನು
ಅನಕ್ಷರಸ್ಥಳಾಗಬೇಕೆ
ನನ್ನ ಅಣ್ಣ ಅಪ್ಪನಿಗೆ
ಮುಖಕ್ಕೆ ಮುಖಕೊಟ್ಟು ಮಾತಾಡದ ನಾನು
ಕತ್ತಲೆಯ ಕೋಣಿಯಲ್ಲಿದ್ದೇನೆ
ಹೊಸ್ತಿಲು ದಾಟದ ನಾನು
ಈಗೀಗ
ಈ ಹಿಜಾಬ್ ಕಟ್ಟಿಕೊಂಡಾದರೂ
ಅಕ್ಷರ ಮತ್ತು ಅರಿವಿಗಾಗಿ
ನಿನ್ ಪಕ್ಕದಲ್ಲಿ ಕುಳಿತಿರುವೆ
ಇದಕ್ಕೂ ಕಲ್ಲಾಕಬೇಡ
ಅಂಗಳದ ಮಾತು ಬೇರೆ
ಎದೆಯಂಗಳದ ಮಾತು ಬೇರೆ
ಯೋಚಿಸಿ ನೋಡು
ತಾಳ್ಮೆ ಇರಲಿ
ನಿನ್ನಾಸೆಯಂತೆ ಈ ಹಿಜಾಬ್
ತೆಗೆದು ಬರುವ ಕಾಲವೊಂದು ಬರಲಿದೆ
ಅಲ್ಲಿಯವರೆಗೂ
ಈ ಸಹೋದರಿಗೆ ನೆರಳಾಗಿರು
ಅಕ್ಷರ ಕಲಿಕೆಗೆ ಉರುಳಾಗಬೇಡ
ಮತ್ತೊಮ್ಮೆ ಹೇಳುವೆ
ಅಂಗಳದ ಮಾತು ಬೇರೆ
ಎದೆಯಂಗಳದ ಮಾತು ಬೇರೆ...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.