ADVERTISEMENT

ಕವನ ಸ್ಪರ್ಧೆ 2021: ಅಂಜನಾ ಹೆಗಡೆ ಅವರ ಕವನ ‘ಹಚ್ಚೆ ಹಾಕುವವನಿಗೆ’

ಅಂಜನಾ ಹೆಗಡೆ
Published 20 ನವೆಂಬರ್ 2021, 22:00 IST
Last Updated 20 ನವೆಂಬರ್ 2021, 22:00 IST
ಸಾಂದರ್ಭಿಕ ಕಲೆ
ಸಾಂದರ್ಭಿಕ ಕಲೆ   

ಎದೆಯಮೇಲೆ ಹೂವರಳಿಸುವವನ ಕೈಗೆ
ತಲ್ಲಣಗಳು ತಾಕುವುದಿಲ್ಲ
ಸೂರ್ಯ-ಚಂದ್ರ ತಾರೆಗಳೆಲ್ಲವೂ
ನಿಲುಕುತ್ತವೆ ಅವನ ಬೆರಳಿಗೆ
ನಕ್ಷತ್ರ ನೀಲಿಯಾಗಿ
ಆಕಾಶ ಕೆಂಪಗಾಗಿ!
ಎಲ್ಲವೂ ಅವನಿಷ್ಟದಂತೆಯೇ ಇಲ್ಲಿ
ಪದಗಳಿಲ್ಲದ ಕವಿತೆ ಎದೆತುಂಬ

ತಂದು ಕೂರಿಸುತ್ತಾನೆ ಎಲ್ಲೆಂದರಲ್ಲಿ
ಅಲ್ಲೆಲ್ಲೋ ಹಾರಾಡುವ ಚಿಟ್ಟೆಯ
ಅಂಗಳದ ಮೈಮೇಲಿನ ರಂಗೋಲಿ
ನುಣುಪಾದ ಪಾದಗಳ ಮೇಲೆ!
ನಾಜೂಕು ಪದರಗಳೊಳಗೆ
ಚುಚ್ಚಿದ ಬಣ್ಣಗಳು ತನಗಂಟದಂತೆ
ಅಂತರವ ಕಾಯ್ದುಕೊಳ್ಳುತ್ತಾನೆ

ಮರಿಜಿಂಕೆಯೊಂದು ಕಾಲಮರೆತು
ಕಣ್ಣುಮಿಟುಕಿಸುತ್ತದೆ
ನಿಂತಸಮಯದ ಒಡಲಿನಲ್ಲಿ
ಸದಾ ಹಸಿರಾದ ಹುಲ್ಲುಗಾವಲು!
ಶಿವನ ಶಿರದಿಂದಿಳಿದ ಗಂಗೆ
ಸ್ಪರ್ಶಕ್ಕೆ ಸಿಕ್ಕುತ್ತಾಳೆ
ಮೂರ್ತ-ಅಮೂರ್ತಗಳೆಲ್ಲವೂ
ಅವನಾಜ್ಞೆಯಂತೆಯೇ ಇಲ್ಲಿ
ಸಾಲುಸಾಲು ಕತೆಗಳು
ಬಿಡಿಬಿಡಿಯಾಗಿ ಹರಡಿಕೊಳ್ಳುತ್ತವೆ

ADVERTISEMENT

ಬಾಲಕೃಷ್ಣನ ನವಿಲುಗರಿ
ಬೆನ್ನಮೇಲೆ ಕಚಗುಳಿಯಿಡುವಾಗ
ಮೊಲದಮರಿಯೊಂದು ಕುತ್ತಿಗೆಯ ಮುದ್ದಿಸುತ್ತದೆ
ಕೀಗೊಂಚಲಿನಿಂದ ಹೊರಟ
ರೆಕ್ಕೆಯೊಂದು ಬಯಲ ತಲುಪಿದರೆ
ಆಗಸದಿಂದಿಳಿದ ಅದೃಷ್ಟದೇವತೆ
ಮುಂಗೈಮೇಲೆ!
ನೆನಪ ಹಿಡಿದಿಡುವ ಕಾಯಕದಲ್ಲಿ
ನೋವಿನ ಮಾರಾಟ ರಿಯಾಯಿತಿಯಲ್ಲಿ

ಹೊಕ್ಕುಳಿಗೆ ಸೂಜಿ ಚುಚ್ಚುವವನ
ತೆರೆದ ಎದೆಯಮೇಲೆ
ಬಣ್ಣದ ಹೂಗಳ ಹರಡಬೇಕಿದೆ;
ಪರಿಮಳದ ಎಳೆಯೊಂದ ಎಳೆಯಬೇಕಿದೆ!
ಸೂಜಿಗಂಟಿದ ಸತ್ಯಗಳೆಲ್ಲ
ಬಳ್ಳಿಯಾಗಿ ಹಬ್ಬಿಕೊಳ್ಳಲಿ
ಹಚ್ಚೆ ಹಾಕುವವನ ಹೃದಯದಲ್ಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.