ADVERTISEMENT

ಚಾಂದ್ ಪಾಷ ಎನ್.ಎಸ್ ಅವರ ಕವನ ‘ಈ ಸಾವನ್ನೊಮ್ಮೆ ಸ್ವಾಗತಿಸು‘!

ಚಾಂದ್ ಪಾಷ ಎನ್.ಎಸ್
Published 16 ಜನವರಿ 2022, 0:15 IST
Last Updated 16 ಜನವರಿ 2022, 0:15 IST
ಸಾಂದರ್ಭಿಕ ಕಲೆಕಲೆ: ಡಿ.ಕೆ. ರಮೇಶ್‌
ಸಾಂದರ್ಭಿಕ ಕಲೆಕಲೆ: ಡಿ.ಕೆ. ರಮೇಶ್‌   

ಪ್ರತಿ ರಾತ್ರಿಗಳು ನಿನ್ನ ನೆನಪಿನ ಕುಣಿಕೆಗೆ ಬದುಕನೊಪ್ಪಿಸಿ
ಸತ್ತು ಮಲಗಿದ ಶವ ಕಂಡು,
ಕರಗಿದ ಕತ್ತಲೆಗೂ ಕಣ್ಣೀರು ಬಂದೀತು!
ಹೂತಿಟ್ಟ ಬಯಕೆಗಳ ಗಂಟನ್ನೊಮ್ಮೆ ಬಿಚ್ಚಿ ನೋಡು
ಬರಿಗೈಯ ಬಡವನ ರೇಖೆಯಲ್ಲೂ ನೋವಿನ ನಕಾಶೆ ಕಾಣಬಹುದು!
ಅಳಿದುಳಿದ ಬದುಕ ಹಿಡಿದು ಹಿಂಸಿಸು
ಬಾ ಈ ಸಾವನ್ನೊಮ್ಮೆ ಸ್ವಾಗತಿಸು!

ಪ್ರತಿ ಮಾತಿಗೂ ತಗಾದೆ ತೆಗೆಯುವ ನಿನ್ನ ಮೌನವ ಹಿಡಿದು, ಕೈ ಕಾಲ ಕತ್ತರಿಸಿ ಎದೆ ಸೀಳಿ, ತಲೆ ಹೋಳಾಗುವಷ್ಟು ಸಿಟ್ಟು ಬರುತ್ತಲೇ ಇದೆ!
ಬೀದಿಗೆ ಬಿದ್ದ ಪ್ರೇಮ ಕಲಾಪಕ್ಕೆ ಹುಕುಂ ನೀಡುವ ಅಧಿಕಾರವಿಲ್ಲದ ಹೂಗಳ ಕಿತ್ತೆಸೆದು ಬಿಡು
ಮಧುರತೆ ಮಗ್ಗಲು ಬದಲಿಸಲಿ
ಮುಳ್ಳ ಮೂತಿಗೆ ತಿವಿದು ಗಾಯಗಳ ಗೌರವಿಸು!

ರಾಗದೆದೆಯಲ್ಲಿ ರೋಗ ಬಿತ್ತಿದ ಮೊದಲ ಕುಡಿ ನೋಟಕ್ಕೆ ಬದುಕಿನ ಸಂಗೀತವೆಲ್ಲ ಸದ್ದು ಗದ್ದಲವಾಯಿತು.
ಗಾಳಿಯಲ್ಲಿ ಮುಚ್ಚಿಟ್ಟ ಮುತ್ತುಗಳಿಗೆ ಮುಪ್ಪು ಬಂದಿರಬಹುದು
ಯೌವನದ ಎದೆ ಮೇಲೂ ನೆರೆಗೂದಲು
ಸುಡುವ ಕಿಡಿಗಳ ಸುರಿದು ಬಿಡು, ಪಾದದಡಿಗೆ
ಅಡಿಗಡಿಗೆ ಅಲೆಯುವ ಹೆಜ್ಜೆಗೆ ಗೋರಿ ಕಟ್ಟಿಬಿಡು!

ADVERTISEMENT

ಪ್ರತಿ ಬಾರಿಯೂ ಹೀಗೆ ಪೊಳ್ಳು ವರದಿ ಒಪ್ಪಿಸುವ
ಹರಾಮಿ ವರದಿಗಾರನ ಬೇನಾಮಿ ಪತ್ರಿಕೆ ನೀನು!
ಪ್ರಜ್ಞೆ ತಪ್ಪುವವರೆಗೂ ಪ್ರೀತಿಸಿ ಬಿಡು
ಎಚ್ಚರದ ಅಮಲಿನಲ್ಲೂ ಸಾವಿನ ಸೆಳೆತವಿದೆ.
ಬದುಕ ಏಣಿ ಹತ್ತಿ ಕಾಲು ಕಳೆದುಕೊಂಡಿರುವೆ
ಹೆಚ್ಚು ಕಾಡಿಸದೆ ಬಾ ಈ ಸಾವನ್ನೊಮ್ಮೆ ಸ್ವಾಗತಿಸು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.