ADVERTISEMENT

ವಸುಂಧರಾ ಕದಲೂರು ಬರೆದ ಕವನ: ಅಂಥಾ ಜರೂರತ್ತು ಇರುವುದಿಲ್ಲ

ವಸುಂಧರಾ ಕದಲೂರು
Published 23 ಏಪ್ರಿಲ್ 2022, 19:30 IST
Last Updated 23 ಏಪ್ರಿಲ್ 2022, 19:30 IST
ಸಾಂದರ್ಭಿಕ ಕಲೆಕಲೆ: ವಾಗೀಶ ಹೆಗಡೆ
ಸಾಂದರ್ಭಿಕ ಕಲೆಕಲೆ: ವಾಗೀಶ ಹೆಗಡೆ   

ಕೆಂಬೂತದ್ದು ತಪ್ಪಿರಲಿಲ್ಲ

ಮಾತ್ಸರ್ಯದಲಿ ಹೋಲಿಸಿ
ಹಂಗಿಸಿ ನವಿಲ ರೂಪವನು
ನಾವೇ ದೊಡ್ಡದು ಮಾಡುವುದು

ಜೀವಮಾನದಲ್ಲೇ ನವಿಲ
ಕಂಡಿರದ ಕೆಂಬೂತ
ಅದಾವ ಸೊಬಗಿಗೆ ಕೊರಗಿ
ಏಕೆ ಬಾಧೆ ಪಟ್ಟೀತು

ADVERTISEMENT

ಹೊಳಪಿನ ಪುಕ್ಕದ ರಂಗು
ನರ್ತನದ ಕಾಲ್ನಡುಗೆ;
ಗರಿಗೆದರಿ ಕುಣಿವ ಖದರು
ಕೆಂಬೂತದ ನೆಮ್ಮದಿ ತೆಗೆದೀತೇ

ಮಯೂರಕೆ ಸೌಂದರ್ಯ ಕಿರೀಟ
ತೊಡಿಸಿ, ಕೆಂಬೂತಕೆ ಅಪರಾಧಿ
ಬೇಡಿ ತೊಡಿಸಿ; ಪಾತ್ರ ಕಟ್ಟಿ ನಮ್ಮ
ತಲೆಪರದೆ ಮೇಲೆ ಕುಣಿಸಿದೆವು

ಕಡೆಗೆ ನವಿಲು ಕೆಂಬೂತ ಯಾವುದೂ
ಆಗದವರು ಮತ್ಸರದಿ ಅಯ್ಯೋ,
ಇದು ಅದರಂತಾಗಲಿಲ್ಲೆಂದು
ರೋದಿಸಿ ಮೊಸಳೆ ಕಣ್ಣೀರಿಡುವೆವು

ನವಿಲ ಬಾಳು ಕೆಂಬೂತ ಬದುಕುವ
ಜರೂರತ್ತೆಂದಿಗೂ ಇರುವುದಿಲ್ಲ.
ಹೆಣ್ಣು ಕೆಂಬೂತ ಇಷ್ಟ ಪಡುವುದು
ಗಂಡು ನವಿಲನ್ನೇನೂ ಅಲ್ಲ……

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.