ಮುಂಬೈ (ಪಿಟಿಐ): ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಮಧ್ಯಂತರ ತ್ರೈಮಾಸಿಕ ಹಣಕಾಸು ನೀತಿಯಲ್ಲಿ ಅಲ್ಪಾವಧಿ ಬಡ್ಡಿ ದರ ತಗ್ಗಿಸದ ಹಿನ್ನೆಲೆಯಲ್ಲಿ ಮುಂಬೈ ಷೇರು ಪೇಟೆ ಸಂವೇದಿ ಸೂಚ್ಯಂಕ ಸೋಮವಾರ 244 ಅಂಶಗಳಷ್ಟು ಕುಸಿತ ಕಂಡಿದ್ದು, ಹೂಡಿಕೆದಾರರ ರೂ75 ಸಾವಿರ ಕೋಟಿಗಳಷ್ಟು ಸಂಪತ್ತು ಕರಗಿದೆ.
ಗ್ರೀಕ್ ಬಿಕ್ಕಟ್ಟಿಗೆ ಸಂಬಂಧಿಸಿದ ಧನಾತ್ಮಕ ಬೆಳವಣಿಗೆಗಳಿಂದ ಸೂಚ್ಯಂಕ ಸೋಮವಾರ ಬೆಳಗಿನ ವಹಿವಾಟಿನಲ್ಲಿ 160 ಅಂಶಗಳಷ್ಟು ಏರಿಕೆ ಕಂಡು 17 ಸಾವಿರ ಗಡಿ ಸಮೀಪ ತಲುಪಿತ್ತು. ಆದರೆ, `ಆರ್ಬಿಐ~ ಹಣಕಾಸು ನೀತಿ ಪ್ರಕಟಗೊಳ್ಳುತ್ತಿದ್ದಂತೆ ತೀವ್ರ ಮಾರಾಟದ ಒತ್ತಡ ಎದುರಿಸಿತು. ಬ್ಯಾಂಕಿಂಗ್ ರಿಯಾಲ್ಟಿ ಆಟೊ ವಲಯದ ಷೇರುಗಳು ಗರಿಷ್ಠ ಹಾನಿ ಅನುಭವಿಸಿದವು. ರಾಷ್ಟ್ರೀಯ ಷೇರು ಸೂಚ್ಯಂಕ `ನಿಫ್ಟಿ~ ದಿನದ ವಹಿವಾಟಿನಲ್ಲಿ 74 ಅಂಶಗಳಷ್ಟು ಇಳಿಕೆ ಕಂಡು 5,064 ಅಂಶಗಳಿಗೆ ವಹಿವಾಟು ಕೊನೆಗೊಳಿಸಿತು.
ಡಾಲರ್ ಎದುರು ರೂಪಾಯಿ ವಿನಿಮಯ ಮೌಲ್ಯ ಮತ್ತೆ ರೂ56 ತಲುಪಿರುವುದು, ಜಾಗತಿಕ ಸಾಲ ಮೌಲ್ಯಮಾಪನ ಸಂಸ್ಥೆ `ಫಿಟ್ಚ್~ ದೇಶದ ಆರ್ಥಿಕ ಮುನ್ನೋಟ ತಗ್ಗಿಸಿರುವುದು ಷೇರುಪೇಟೆಯಲ್ಲಿ ಮತ್ತೆ ಒತ್ತಡ ಹೆಚ್ಚುವಂತೆ ಮಾಡಿದೆ.
`ಆರ್ಬಿಐ~ ಕ್ರಮದಿಂದ ಹೂಡಿಕೆದಾರರ ಆತ್ಮವಿಶ್ವಾಸ ತಗ್ಗಿದೆ. ಇದರ ಜತೆಗೆ ಕ್ರೆಡಿಟ್ ರೇಟಿಂಗ್ ಸಂಸ್ಥೆ ಫಿಟ್ಚ್ ಸಾಲ ಮುನ್ನೋಟ ತಗ್ಗಿಸಿರುವುದು ಮುಂಬರುವ ದಿನಗಳಲ್ಲಿ ವಹಿವಾಟಿನ ಮೇಲೆ ತೀವ್ರ ಪರಿಣಾಮ ಬೀರಲಿದೆ ಎಂದು `ಸಿಎನ್ಐ~ ಸಂಶೋಧನಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕಿಶೋರ್ ಪಿ. ಓಸ್ವಾಲ್ ಅಭಿಪ್ರಾಯಪಟ್ಟಿದ್ದಾರೆ. ಈ ನಡುವೆ ಯೂರೋ ವಲಯ ಚೇತರಿಕೆಯಿಂದ ಏಷ್ಯಾದ ಷೇರುಪೇಟೆಗಳು ಶೇ 1.8ರಷ್ಟು ಏರಿಕೆ ಕಂಡಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.