ADVERTISEMENT

ಆಹಾರ ಹಣದುಬ್ಬರ: ವರ್ಷಾಂತ್ಯಕ್ಕೆ ಇಳಿಕೆ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2011, 19:30 IST
Last Updated 26 ಅಕ್ಟೋಬರ್ 2011, 19:30 IST

ನವದೆಹಲಿ (ಪಿಟಿಐ):  ಪ್ರಸಕ್ತ ಹಣಕಾಸು ವರ್ಷದ ಅಂತ್ಯದ ವೇಳೆಗೆ ಆಹಾರ ಹಣದುಬ್ಬರ ದರವು ಹಿತಕರ ಮಟ್ಟವಾಗಿರುವ ಶೇ 7ರ ಆಸುಪಾಸಿಗೆ ಇಳಿಕೆ ಕಾಣಲಿದೆ ಎಂದು ಹಣಕಾಸು ಸಚಿವಾಲಯ ಅಂದಾಜಿಸಿದೆ.

ಕಚ್ಚಾ ತೈಲ ಬೆಲೆ ಏರಿಕೆ ಮತ್ತು ಅಗತ್ಯ ಸರಕುಗಳ ದರ ಹೆಚ್ಚಳದಿಂದ  ಹಣದುಬ್ಬರವು ಸದ್ಯಕ್ಕೆ ಗರಿಷ್ಠ ಮಟ್ಟದಲ್ಲಿದೆ. ಆದರೆ, ಬೆಲೆ ಏರಿಕೆಯ ಬಿಸಿ ಮಾರ್ಚ್ ಅಂತ್ಯದ ವೇಳೆಗೆ ಗಮನಾರ್ಹವಾಗಿ ತಗ್ಗಲಿದೆ ಎಂದು ಹಣಕಾಸು ವ್ಯವಹಾರಗಳ ಕಾರ್ಯದರ್ಶಿ ಆರ್. ಗೋಪಾಲನ್ ಹೇಳಿದ್ದಾರೆ.

ಕಳೆದ ವರ್ಷದ ಇದೇ ಅವಧಿಯಲ್ಲಿ ಶೇ 8.9ರಷ್ಟಿದ್ದ ಸಗಟು ಸೂಚ್ಯಂಕ ಆಧರಿಸಿದ ಹಣದುಬ್ಬರ ದರವು ಸೆಪ್ಟೆಂಬರ್ ತಿಂಗಳಲ್ಲಿ ಶೇ 9.72ರಷ್ಟಾಗಿದೆ. ಹಾಲು, ಹಣ್ಣು, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳು ಮತ್ತು ತಯಾರಿಕೆ ಉತ್ಪನ್ನಗಳ ದರಗಳು ಹೆಚ್ಚಿವೆ. ಹಣದುಬ್ಬರ ದರ ಹಿತಕರ ಮಟ್ಟಕ್ಕೆ ಇಳಿಯದ ಹಿನ್ನೆಲೆಯಲ್ಲಿ,  ಆರ್‌ಬಿಐ ಮತ್ತೊಮ್ಮೆ ಅಲ್ಪಾವಧಿ ಬಡ್ಡಿ ದರಗಳನ್ನು ಶೇ 0.25ರಷ್ಟು ಹೆಚ್ಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.