ADVERTISEMENT

ಎನ್‌ಎಂಪಿಟಿ: ಸರಕು ನಿರ್ವಹಣೆ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2012, 19:30 IST
Last Updated 3 ಏಪ್ರಿಲ್ 2012, 19:30 IST

ಮಂಗಳೂರು:  ನವಮಂಗಳೂರು ಬಂದರು ಮಂಡಳಿ (ಎನ್‌ಎಂಪಿಟಿ) 2011-12 ಸಾಲಿನಲ್ಲಿ ಸರಕು ಸಾಗಣೆಯಲ್ಲಿ ಶೇ 12ರಷ್ಟು ಪ್ರಗತಿ ಸಾಧಿಸಿದೆ ಎಂದು ಅಧ್ಯಕ್ಷ ಪಿ. ತಮಿಳವಾಣನ್ ತಿಳಿಸಿದರು.

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, `ಸರಕು ಸಾಗಣೆಯಲ್ಲಿ ಕಳೆದ 2010-11 ಸಾಲಿಗೆ ಹೋಲಿಸಿದಲ್ಲಿ ಶೇ 12.08 ಅಭಿವೃದ್ಧಿಯಾಗಿದೆ. 2010-11 ಸಾಲಿನಲ್ಲಿ 40,158 ಸರಕು ಕಂಟೇನರ್‌ಗಳನ್ನು ನಿರ್ವಹಿಸಲಾಗಿದ್ದು, 2011-12 ಸಾಲಿನಲ್ಲಿ 45,009 ಕಂಟೇನರ್‌ಗಳನ್ನು ನಿರ್ವಹಿಸುವ ಮೂಲಕ ಗಣನೀಯ ಪ್ರಗತಿ ಸಾಗಿಸಲಾಗಿದೆ~ ಎಂದು ತಿಳಿಸಿದರು.

 367 ಕೋಟಿ ಆದಾಯ: `ನವಮಂಗಳೂರು ಬಂದರಿನಲ್ಲಿ ಒಟ್ಟು ್ಙ 367 ಕೋಟಿ ವರಮಾನ ಸಂಗ್ರಹಣೆಯಾಗಿದ್ದುರೂ123 ಕೋಟಿ ಲಾಭಾಂಶ ದಾಖಲಾಗಿದೆ. ಅಲ್ಲದೇ ್ಙ 40.26 ಕೋಟಿ ಸರ್ಕಾರದ ಸಾಲ ತೀರಿಸಲಾಗಿದೆ. ಪ್ರತಿವರ್ಷ ಎನ್‌ಎಂಪಿಟಿ ಪ್ರಗತಿ ಸಾಧಿಸುತ್ತಿದ್ದು, ಒಂದೇ ಸಾಗಣೆಯಲ್ಲಿ 2011-12 ಸಾಲಿನಲ್ಲಿ 1512 ಕಂಟೇನರ್‌ಗಳನ್ನು ನಿರ್ವಹಿಸಿದ್ದು, ಕಂಟೇನರ್ ನಿರ್ವಹಣೆಯಲ್ಲಿ ಮುಂಬೈ ಬಂದರಿಗಿಂತಲೂ ಅಧಿಕ ಸಾಧನೆ ಮಾಡಿದೆ~ ಎಂದು ತಮಿಳವಾಣನ್ ಹೇಳಿದರು.

2011 ರ ಡಿಸೆಂಬರ್ ತಿಂಗಳಿನಿಂದ ಬೆಂಗಳೂರು- ಮಂಗಳೂರು ನಡುವೆ ಸರಕು ಸಾಗಣೆ ರೈಲು ಮಾರ್ಗವಾಗಿ ಪ್ರಾರಂಭವಾಗಿದೆ. ಟಿಂಬರ್‌ಗಳನ್ನು ಹಡುಗುಗಳಿಗೆ ಲೋಡ್ ಮಾಡಲು ಸೆಮಿ ಮೆಕಾನಿಕಲ್ ವ್ಯವಸ್ಥೆ ಪ್ರಾರಂಭಿಸಲಾಗಿದೆ ಎಂದರು.

ಈ ಸಾಲಿನಲ್ಲೇ ಶ್ರೇಷ್ಠ ಗುಣಮಟ್ಟದ 1,24,253 ಕಚ್ಚಾ ಗೋಡಂಬಿಯನ್ನು ನಿರ್ವಹಿಸಲಾಗಿದೆ. 4 ದಶಲಕ್ಷ ಟನ್ ಕಲ್ಲಿದ್ದಲು, 6.58 ಲಕ್ಷ ಟನ್ ಅಡುಗೆ ಎಣ್ಣೆ, 1216 ಕಂಟೇನರ್ ಮೇಣದ ಬತ್ತಿ ನಿರ್ವಹಿಸಿರುವುದೂ ಸಾಧನೆ ಎಂದು  ತಿಳಿಸಿದರು.

ಪ್ರಯಾಣಿಕರ ಹಡಗು ಹೆಚ್ಚಳ: ಬಂದರಿಗೆ ಬರುತ್ತಿರುವ ಪ್ರಯಾಣಿಕ ಹಡಗು (ಕ್ರ್ಯೂಸ್ ವೆಸೆಲ್)ಗಳ ಸಂಖ್ಯೆಯಲ್ಲೂ ಹೆಚ್ಚಳ ದಾಖಲಾಗಿದೆ. 2010-11 ಸಾಲಿನಲ್ಲಿ 14 ಹಡಗುಗಳಲ್ಲಿ 5854 ಪ್ರಯಾಣಿಕರಿದ್ದರೆ, 2011- 12 ರಲ್ಲಿ 17 ಹಡಗುಗಳಲ್ಲಿ 10,620 ಪ್ರಯಾಣಿಕರು ಭೇಟಿ ನೀಡಿದ್ದಾರೆ. ಮಂಗಳೂರು ಬಂದರಿನಲ್ಲೇ ಟಿಕೆಟ್ ಬುಕ್ ಮಾಡುವ ಕೌಂಟರ್ ತೆರೆಯಲು ವಿದೇಶಿ ಹಡಗುಗಳಿಗೆ ಮನವಿ ಮಾಡಿದ್ದು, ಪೂರಕ ಸ್ಪಂದನೆ ಲಭಿಸಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.