ಬೆಂಗಳೂರು: `ದುಪ್ಪಟ್ಟು ತೆರಿಗೆ ತಪ್ಪಿಸುವ ಕುರಿತು ಭಾರತ ಮತ್ತು ಸ್ವಿಟ್ಜರ್ಲೆಂಡ್ ದೇಶಗಳು ಮಾಡಿಕೊಂಡಿರುವ ಒಪ್ಪಂದಕ್ಕೆ ಸ್ವಿಟ್ಜರ್ಲೆಂಡ್ ಸಂಸತ್ತಿನ ಅನುಮೋದನೆ ದೊರೆಯಬೇಕಿದೆ. ತನ್ನ ದೇಶದ ತೆರಿಗೆ ಕಳ್ಳರು ಮತ್ತು ಕಪ್ಪುಹಣ ಇಟ್ಟವರ ಕುರಿತ ಮಾಹಿತಿ ಪಡೆದುಕೊಳ್ಳಲು ಭಾರತಕ್ಕೆ ಈ ಒಪ್ಪಂದಕ್ಕೆ ಅನುಮೋದನೆ ದೊರೆತ ನಂತರ ಸಾಧ್ಯವಾಗಲಿದೆ.~
- ಇದು ಸ್ವಿಟ್ಜರ್ಲೆಂಡ್ನ ಭಾರತದ ರಾಯಭಾರಿ ಫಿಲಿಪ್ ವೆಲ್ಟಿ ಹೇಳಿದ ಮಾತು. `ಕರ್ನಾಟಕ ವಾಣಿಜ್ಯೋದ್ಯಮ ಮಹಾಸಂಘ~ದಲ್ಲಿ (ಎಫ್ಕೆಸಿಸಿಐ) ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಅವರು, `ಒಪ್ಪಂದಕ್ಕೆ ಈ ವರ್ಷದ ಅಂತ್ಯದ ವೇಳೆಗೆ ಸ್ವಿಟ್ಜರ್ಲೆಂಡ್ ಸಂಸತ್ತಿನ ಅನುಮೋದನೆ ದೊರೆಯುವ ಸಾಧ್ಯತೆ ಇದೆ~ ಎಂದು ತಿಳಿಸಿದರು.
`ನಮ್ಮ ದೇಶದಲ್ಲಿ ತೆರಿಗೆ ವಂಚನೆಯನ್ನು ಕ್ರಿಮಿನಲ್ ಅಪರಾಧ ಎಂದು ಪರಿಗಣಿಸಲಾಗುತ್ತದೆ, ಆದರೆ ತೆರಿಗೆ ತಪ್ಪಿಸಿಕೊಳ್ಳುವುದು ನಮ್ಮಲ್ಲಿ ಆಡಳಿತಾತ್ಮಕ ಅಪರಾಧ ಎಂದಷ್ಟೇ ಪರಿಗಣಿಸಲಾಗುತ್ತದೆ~ ಎಂದು ಅವರು ಮಾಹಿತಿ ನೀಡಿದರು.
ದೂತಾವಾಸ ಕಚೇರಿ: ಸ್ವಿಟ್ಜರ್ಲೆಂಡ್ನ ಬ್ಯಾಂಕಿಂಗ್ ವ್ಯವಸ್ಥೆ ಗಟ್ಟಿಯಾಗಿದೆ, ಕಾನೂನು ಬದ್ಧವಾಗಿದೆ ಮತ್ತು ಗೋಪ್ಯತೆ ಕಾಪಾಡುವ ವಿಚಾರದಲ್ಲಿ ಕಠಿಣವಾಗಿಯೂ ಇದೆ ಎಂದರು. ಸ್ವಿಟ್ಜರ್ಲೆಂಡ್ ವೀಸಾ ಬಯಸುವವರ ಸಂಖ್ಯೆ ದಕ್ಷಿಣ ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಸ್ವಿಟ್ಜರ್ಲೆಂಡ್ ದೂತಾವಾಸ ಕಚೇರಿಯನ್ನು ಆರಂಭಿಸಲಾಗಿದೆ ಎಂದರು.
ಬೆಂಗಳೂರಿನ ಸ್ವಿಸ್ ದೂತಾವಾಸ ಕಚೇರಿ 2012ರ ವೇಳೆಗೆ ಹೊಸ ಕಚೇರಿಯಲ್ಲಿ ಕಾರ್ಯಾಚರಣೆ ಆರಂಭಿಸಲಿದೆ. ಇಲ್ಲಿನ ದೂತಾವಾಸ ಕಚೇರಿ ಆಂಧ್ರಪ್ರದೇಶ, ಕರ್ನಾಟಕ, ಕೇರಳ, ತಮಿಳುನಾಡು, ಪುದುಚೇರಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ವೀಸಾ ಅರ್ಜಿಗಳನ್ನು ನಿರ್ವಹಿಸಲಿದೆ.
ಎಫ್ಕೆಸಿಸಿಐ ಅಧ್ಯಕ್ಷ ಎನ್.ಎಸ್. ಶ್ರೀನಿವಾಸ ಮೂರ್ತಿ, ಬೆಂಗಳೂರಿನ ಸ್ವಿಸ್ ದೂತಾವಾಸ ಕಚೇರಿಯ ಅಧಿಕಾರಿ ರಾಲ್ಫ್ ಪ್ರೇ ಮತ್ತಿತರರು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.