ಮಂಗಳೂರು: ಕರ್ಣಾಟಕ ಬ್ಯಾಂಕ್ನ ವಾರ್ಷಿಕ ನಿವ್ವಳ ಲಾಭ ₹ 325.61 ಕೋಟಿಗೆ ತಲುಪಿದೆ. ಮಾರ್ಚ್ಗೆ ಕೊನೆಗೊಂಡ ವರ್ಷಕ್ಕೆ ಪ್ರತಿ ಷೇರಿಗೆ ₹3ರಂತೆ ಲಾಭಾಂಶ ನೀಡಲು ಬ್ಯಾಂಕ್ನ ನಿರ್ದೇಶಕ ಮಂಡಳಿ ಶಿಫಾರಸು ಮಾಡಿದೆ.
ಈ ವರ್ಷ ಮಾರ್ಚ್ 31ಕ್ಕೆ ಬ್ಯಾಂಕ್ನ ಒಟ್ಟು ವ್ಯವಹಾರವು ₹1,10,123 ಕೋಟಿಗೆ ತಲುಪಿದ್ದು, ಇದು ವಾರ್ಷಿಕ ಶೇ 17.59 ರಷ್ಟು ಬೆಳವಣಿಗೆಯಾಗಿದೆ. ಕಳೆದ ವರ್ಷಾಂತ್ಯಕ್ಕೆ ₹56,733 ಕೋಟಿಗಳಷ್ಟು ಇದ್ದ ಠೇವಣಿಯು ಶೇ 10.82 ರಷ್ಟು ಏರಿಕೆಯಾಗಿದ್ದು, ಪ್ರಸಕ್ತ ವರ್ಷಾಂತ್ಯದಲ್ಲಿ ₹62,871 ಕೋಟಿ ತಲುಪಿದೆ. ಸಾಲ ವಿತರಣೆಯು ಕಳೆದ ವರ್ಷದ ₹36,916 ಕೋಟಿಯಿಂದ ₹47,252 ಕೋಟಿ ತಲುಪಿದೆ. ಸಾಲ ವಿತರಣೆಯಲ್ಲಿ ಶೇ 28 ರಷ್ಟು ಪ್ರಗತಿಯಾಗಿದೆ.
‘ನಾಲ್ಕನೇ ತ್ರೈಮಾಸಿಕದಲ್ಲಿನ ನಿವ್ವಳ ಲಾಭವು ₹ 11 ಕೋಟಿಗಳಷ್ಟಾಗಿದೆ. ವರ್ಷದ ಹಿಂದಿನ ಲಾಭವು ₹ 138 ಕೋಟಿಗಳಷ್ಟಿತ್ತು. ವಸೂಲಾಗದ ಸಾಲಗಳಿಗಾಗಿ ಹೆಚ್ಚಿನ ಮೊತ್ತ ತೆಗೆದು ಇರಿಸಿದ್ದರಿಂದ ನಿವ್ವಳ ಲಾಭ ಕಡಿಮೆಯಾಗಿದೆ’ ಎಂದು ಸಿಇಒ ಮಹಾಬಲೇಶ್ವರ ಎಂ.ಎಸ್. ಹೇಳಿದ್ದಾರೆ.
‘ಬ್ಯಾಂಕಿಂಗ್ ವಲಯದ ಪ್ರತಿಕೂಲ ವಾತಾವರಣದ ಮಧ್ಯೆಯೂ ಒಟ್ಟು ವಸೂಲಾಗದ ಸಾಲ (ಜಿಎನ್ಪಿಎ) ಶೇ 4.92 ಕ್ಕೆ ಹಾಗೂ ನಿವ್ವಳ ವಸೂಲಾಗದ ಸಾಲದ ಪ್ರಮಾಣ (ಎನ್ಎನ್ಪಿಎ) ಶೇ 2.96 ಕ್ಕೆ ನಿಯಂತ್ರಿಸಿರುವುದು ಸಮಾಧಾನಕರ ಬೆಳವಣಿಗೆ’ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.