ADVERTISEMENT

ಜಿಎಸ್‌ಟಿ: ಇಂದು ಸಂಪುಟ ಪರಿಗಣನೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2011, 16:20 IST
Last Updated 14 ಮಾರ್ಚ್ 2011, 16:20 IST

ನವದೆಹಲಿ (ಪಿಟಿಐ): ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಗೆ ಸಂಬಂಧಿಸಿದ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಮಂಗಳವಾರ ಕೇಂದ್ರ ಸಚಿವ ಸಂಪುಟ ಸಭೆ ಪರಿಗಣಿಸಲಿದೆ.

‘ಜಿಎಸ್‌ಟಿ’ ತೆರಿಗೆಯಿಂದ ದೇಶದಾದ್ಯಂತ ಏಕರೂಪದ ತೆರಿಗೆ ವ್ಯವಸ್ಥೆ ಜಾರಿಗೆ ಬರಲಿದೆ. ಮೂಲಗಳ ಪ್ರಕಾರ ಈ ಮಸೂದೆಯನ್ನು ಸಂಪುಟ ಪರಿಗಣಿಸಿದರೆ, ಈ ಅಧಿವೇಶನದಲ್ಲೇ ಇದು ಸಂಸತ್ತಿನಲ್ಲಿ ಮಂಡನೆಯಾಗುವ ಸಾಧ್ಯತೆ ಇದೆ.

ಹಣಕಾಸು ಸಚಿವಾಲಯ ಮಸೂದೆಯ ಅಂತಿಮ ಕರಡನ್ನು ಸಿದ್ಧಪಡಿಸಿದೆ. ಈ ಹಿಂದೆ ಮೂರು ಬಾರಿ ಕೇಂದ್ರ ಸಿದ್ಧಪಡಿಸಿದ ಕರಡನ್ನು ತಮ್ಮ ಸ್ವಾಯತ್ತತೆಗೆ ಧಕ್ಕೆಯಾಗುತ್ತದೆ ಎನ್ನುವ ಕಾರಣ ನೀಡಿ ರಾಜ್ಯಗಳು ತಳ್ಳಿಹಾಕಿದ್ದವು.

ಈಗ ಸಿದ್ಧವಾಗಿರುವ ನಾಲ್ಕನೆಯ ಕರಡು ಮಸೂದೆ, ಎರಡನೆಯ ಮತ್ತು ಮೂರನೆಯ ಮಸೂದೆಗಳ ಪ್ರಸ್ತಾವಗಳನ್ನು ಒಳಗೊಂಡಿದೆ. ರಾಷ್ಟ್ರಪತಿಗಳ ಸೂಚನೆಯ ಮೇರೆಗೆ ನೇಮಕಗೊಂಡಿರುವ  ‘ಜೆಎಸ್‌ಟಿ ವಿಶೇಷ ಸಮಿತಿ’ ಈ ಮಸೂದೆಯಲ್ಲಿನ ಮಹತ್ವದ ವಿಷಯಗಳ ಕುರಿತು ಚರ್ಚೆ ನಡೆಸಿದೆ.

‘ಜಿಎಸ್‌ಟಿ’ ಮಸೂದೆ ಸಂಯೋಜನೆಗೆ  ಸಂಬಂಧಿಸಿದಂತೆ ವಿವಾದ ಇತ್ಯರ್ಥ ಪ್ರಾಧಿಕಾರವೂ ಸಂವಿಧಾನ ತಿದ್ದುಪಡಿಯ ಒಂದು ಭಾಗವಾಗಿದ್ದು, ಇದನ್ನು ಕೂಡ ಸಂಸತ್ತು ನಿರ್ಧರಿಸುತ್ತದೆ. ಪೆಟ್ರೋಲಿಯಂ, ನೈರ್ಸಗಿಕ ಅನಿಲ, ಡೀಸೆಲ್‌ಗಳನ್ನು ‘ಜಿಎಸ್‌ಟಿ’ ಅಂತಿಮ ಕರಡು ಮಸೂದೆಯಿಂದ ಹೊರಗಿಡಲಾಗಿದೆ.

 ಈಗಾಗಲೇ ‘ಬಿಜೆಪಿ’ ಆಡಳಿತವಿರುವ ರಾಜ್ಯಗಳಲ್ಲಿ ‘ಜಿಎಸ್‌ಟಿ’ ಮಸೂದೆಗೆ ವಿರೋಧ ವ್ಯಕ್ತವಾಗಿದೆ. ಇದರಿಂದ ರಾಜ್ಯಗಳ ತೆರಿಗೆ ವಿಷಯದಲ್ಲಿ ಕೇಂದ್ರ ಹಣಕಾಸು ಸಚಿವರಿಗೆ ವಿಶೇಷ ಅಧಿಕಾರ (ವಿಟೊ) ಲಭಿಸಿದಂತಾಗುತ್ತದೆ ಎಂದು ಆರೋಪಿಸಿವೆ.

ಏಪ್ರಿಲ್ 2010ರ ಗಡುವು ವಿಸ್ತರಣೆಯ ನಂತರ ಏಪ್ರಿಲ್ 2011ರಲ್ಲಿ ಮಸೂದೆ ಮಂಡಿಸಬೇಕು ಎಂದು ಸರ್ಕಾರ ನಿರ್ಧರಿಸಿತ್ತು. ‘ಜಿಎಸ್‌ಟಿ’ಯನ್ನು ಏಪ್ರಿಲ್ 1, 2012ರಿಂದ ಜಾರಿಗೆ ತರುವುದು ಕಷ್ಟ ಎಂದು ಕಂದಾಯ ಕಾರ್ಯದರ್ಶಿ ಸುನಿಲ್ ಮಿತ್ರಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.