ಬೆಂಗಳೂರು: ಬಿಗ್ ಬಜಾರ್, ಕಿರಾಣಿ ಅಂಗಡಿಗಳಿಗೆ ಹಣ್ಣು ಮತ್ತು ತರಕಾರಿಗಳನ್ನು ಪೂರೈಸುವ ಬೆಂಗಳೂರಿನ ಜಿಎಸ್ ಫಾರ್ಮ್ ತಾಜಾ ಕಂಪೆನಿಯು ಹೂಡಿಕೆದಾರರಿಂದ ಹಂತ ಹಂತವಾಗಿ ₹52 ಕೋಟಿಗಳಷ್ಟು ಬಂಡವಾಳ ಸಂಗ್ರಹಿಸಿದೆ.
ಹಾಂಕಾಂಗ್ ಮೂಲದ ಎಪ್ಸಿಲನ್ ವೆಂಚರ್ಸ್ ಪಾರ್ಟ್ನರ್ಸ್ ಒಳಗೊಂಡು ವಿವಿಧ ಸಂಸ್ಥೆಗಳು ಈ ಹೂಡಿಕೆ ಮಾಡಿವೆ. 2015ರಲ್ಲಿ ಕಂಪೆನಿ ಆರಂಭಿಸಲು ಸಿಲಿಕಾನ್ ವ್ಯಾಲಿಯ ಏಂಜಲ್ ಇನ್ವೆಸ್ಟರ್ಸ್ನಿಂದ ಆರಂಭಿಕ ಬಂಡವಾಳ ಸಂಗ್ರಹಿಸಿತ್ತು. ಬೆಂಗಳೂರು, ಚೆನ್ನೈ ಮತ್ತು ಹೈದರಾಬಾದ್ನಲ್ಲಿ ಕಾರ್ಯಾಚರಣೆ ಕೇಂದ್ರಗಳನ್ನು ಹೊಂದಿದೆ.
ಸುಧಾರಿತ ತಂತ್ರಜ್ಞಾನ ಅಳವಡಿಕೆ ಮೂಲಕ ಕಾರ್ಯಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಈ ಬಂಡವಾಳ ಅನುಕೂಲವಾಗಲಿದೆ. ರೈತರಿಂದ ನೇರವಾಗಿ ಅಂಗಡಿಗಳಿಗೆ ಯಾವುದೇ ಅಡೆತಡೆಗಳಿಲ್ಲದೆ ಹಣ್ಣು, ತರಕಾರಿಗಳನ್ನು ಪೂರೈಸಲು ನಿರ್ಧರಿಸಲಾಗಿದೆ. ಇದಕ್ಕೆ ಪೂರಕವಾಗುವಂತೆ ಹೊಸ ತಂತ್ರಜ್ಞಾನ ಕಲಿಕೆ, ಕೃತಕ ಬುದ್ಧಿಮತ್ತೆ ಮತ್ತು ಡೇಟಾ ವಿಶ್ಲೇಷಣೆ ಬಗ್ಗೆ ಗಮನ ನೀಡಲಾಗುವುದು ಎಂದು ಕಂಪೆನಿ ಸಿಇಒ ಕುಮಾರ ರಾಮಚಂದ್ರನ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
‘1400ಕ್ಕೂ ಹೆಚ್ಚು ರೈತರು ಫಾರ್ಮ್ ತಾಜಾ ಸಂಸ್ಥೆಯೊಂದಿಗೆ ಸಹಯೋಗ ಹೊಂದಿದ್ದು, 150ಕ್ಕೂ ಹೆಚ್ಚು ವಿಧದ ತರಕಾರಿ ಹಾಗೂ ಹಣ್ಣು
ಪೂರೈಸುತ್ತಿದ್ದಾರೆ. ರೈತರ ಸಂಖ್ಯೆಯನ್ನು 15,000ಕ್ಕೆ ವಿಸ್ತರಿಸುವುದು ನಮ್ಮ ಗುರಿ. ಸದ್ಯ ರಿಲಯನ್ಸ್, ಬಿಗ್ ಬಜಾರ್, ಸ್ಟಾರ್ ಬಜಾರ್ನಂತಹ ಕಂಪೆನಿಗಳಿಗೆ ಹಣ್ಣು, ತರಕಾರಿ ಪೂರೈಕೆಯಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.