ADVERTISEMENT

ನೇರ ಸಬ್ಸಿಡಿ: ವಿಶೇಷ ಕಾರ್ಯಪಡೆ ರಚನೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2011, 18:10 IST
Last Updated 16 ಫೆಬ್ರುವರಿ 2011, 18:10 IST

ನವದೆಹಲಿ (ಪಿಟಿಐ): ಸೀಮೆಎಣ್ಣೆ, ಅಡುಗೆ ಅನಿಲ ಮತ್ತು ರಸಗೊಬ್ಬರಕ್ಕೆ ಕಲ್ಪಿಸಲಾಗಿರುವ ನೇರ ಸಬ್ಸಿಡಿ ವ್ಯವಸ್ಥೆಯಲ್ಲಿನ  ಲೋಪಗಳ ಬಗ್ಗೆ ಅಧ್ಯಯನ ನಡೆಸಲು ಕೇಂದ್ರ ಸರ್ಕಾರವು, ರಾಷ್ಟ್ರೀಯ ವಿಶಿಷ್ಠ ಗುರುತಿನ ಸಂಖ್ಯೆ ಪ್ರಾಧಿಕಾರದ (ಯುಐಡಿಎಐ) ಅಧ್ಯಕ್ಷ ನಂದನ್ ನಿಲೇಕಣಿ ಅಧ್ಯಕ್ಷತೆಯಲ್ಲಿ  ವಿಶೇಷ ಕಾರ್ಯಪಡೆ ರಚಿಸಿದೆ. 

 ಈ ಸಮಿತಿ ನೇರ ಸಬ್ಸಿಡಿ ವ್ಯವಸ್ಥೆಗೆ  ಸಂಬಂಧಿಸಿದ ಸುಧಾರಿತ  ಕಾರ್ಯತಂತ್ರ  ಶಿಫಾರಸು ಮಾಡಲಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ. 
ಸರ್ಕಾರವು ಕಡು ಬಡವರಿಗೆ (ಬಿಪಿಎಲ್) ಕುಟುಂಬಗಳಿಗೆ ಪಡಿತರ ವ್ಯವಸ್ಥೆಯ ಮೂಲಕ ಸೀಮೆಎಣ್ಣೆಯನ್ನು ಸಬ್ಸಿಡಿ ದರದಲ್ಲಿ ನೀಡುತ್ತಿದೆ. ಆದರೆ, ಈಗಿನ ನೀತಿಯಲ್ಲಿ ಹಲವು ನ್ಯೂನತೆಗಳಿದ್ದು, ಸೀಮೆಎಣ್ಣೆ ಸೋರಿಕೆ, ಕಲಬೆರಕೆ, ದುರುಪಯೋಗ, ಅಸಮರ್ಪಕ ವಿತರಣೆ ಇತ್ಯಾದಿ ಪ್ರಕರಣಗಳು ವರದಿಯಾಗಿವೆ. ಈ ಹಿನ್ನೆಲೆಯಲ್ಲಿ ಕಾರ್ಯಪಡೆಯು ಸುಧಾರಣಾ ಕ್ರಮಗಳ ಕುರಿತು ರೂಪುರೇಷೆ ಸಿದ್ಧಪಡಿಸಲಿದೆ ಹಾಗೂ ಎಲ್ಲ ಸಂಗತಿಗಳ ಕುರಿತು ಅಧ್ಯಯನ ನಡೆಸಿ ಶೀಘ್ರದಲ್ಲಿ ವರದಿ ಸಲ್ಲಿಸಲಿದೆ ಎಂದೂ  ಸಚಿವಾಲಯ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.