ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್, ಮುಂಬರುವ ದಿನಗಳಲ್ಲಿ ತನ್ನ ಅಲ್ಪಾವಧಿ ಬಡ್ಡಿ ದರಗಳನ್ನು ಹೆಚ್ಚಿಸುವ ಸಾಧ್ಯತೆ ಇಲ್ಲ ಎಂದು ಹಣಕಾಸು ಸಚಿವಾಲಯ ನಿರೀಕ್ಷಿಸಿದೆ.
‘ಜೂನ್ ದ್ವೈಮಾಸಿಕ ಹಣಕಾಸು ಪರಾಮರ್ಶೆಯಲ್ಲಿ ಆರ್ಬಿಐ ಬಡ್ಡಿ ದರ ಹೆಚ್ಚಳವನ್ನು ಪರಿಗಣಿಸಲಿದೆ’ ಎಂದು ಡೆಪ್ಯುಟಿ ಗವರ್ನರ್ ವಿರಲ್ ಆಚಾರ್ಯ ಅವರು ಇಂಗಿತ ವ್ಯಕ್ತಪಡಿಸಿದ್ದರೂ, ಅಂತಹ ಪರಿಸ್ಥಿತಿ ಎದುರಾಗುವುದಿಲ್ಲ ಎಂದು ಸಚಿವಾಲಯ ಅಂದಾಜಿಸಿದೆ.
‘ಬಡ್ಡಿ ದರಗಳು ಈಗಾಗಲೇ ಗರಿಷ್ಠ ಮಟ್ಟದಲ್ಲಿ ಇವೆ. ಅವುಗಳು ಇನ್ನಷ್ಟು ಏರಿಕೆ ಆಗಲಿವೆಯೆಂದು ನನಗೆ ಅನಿಸುವುದಿಲ್ಲ’ ಎಂದು ಹಣಕಾಸು ವ್ಯವಹಾರಗಳ ಕಾರ್ಯದರ್ಶಿ ಸುಭಾಷ್ ಚಂದ್ರ ಗರ್ಗ್ ಅವರು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಏಪ್ರಿಲ್ ತಿಂಗಳಲ್ಲಿ ನಡೆದ ಹಣಕಾಸು ನೀತಿ ಸಮಿತಿಯ ಸಭೆಯ ನಡಾವಳಿಯ ಪ್ರಕಾರ, ಕಡಿಮೆ ಬಡ್ಡಿ ದರದ ಸುಲಭ ಹಣಕಾಸು ನೀತಿ ಕೈಬಿಡಬೇಕು ಎಂದು ಆರ್ಬಿಐ ಡೆಪ್ಯುಟಿ ಗವರ್ನರ್ ವಿರಲ್ ಆಚಾರ್ಯ ಅವರು ತಮ್ಮ ಅನಿಸಿಕೆ ದಾಖಲಿದ್ದಾರೆ. ಈ ನಿರ್ಧಾರಕ್ಕೆ ಬರುವ ಮೊದಲು ಕೇಂದ್ರೀಯ ಬ್ಯಾಂಕ್ ಇನ್ನಷ್ಟು ಸಮಯ ಕಾದು ನೋಡಬೇಕು ಎಂದು ಅವರು ಹೇಳಿದ್ದಾರೆ.
ಸಾಲ ಪಡೆಯುವ ಪ್ರಮಾಣದಲ್ಲಿ ನಿರಂತರವಾಗಿ ಪ್ರಗತಿ ಮತ್ತು ಆರ್ಥಿಕ ಚಟುವಟಿಕೆಗಳಲ್ಲಿ ಚೇತರಿಕೆ ಕಂಡು ಬರುತ್ತಿರುವುದರ ಬಗ್ಗೆ ಇನ್ನಷ್ಟು ದತ್ತಾಂಶ ಕೈಸೇರುವವರೆಗೆ ಕಾದು ನೋಡುವುದಾಗಿ ಆರ್ಬಿಐ ಗವರ್ನರ್ ಉರ್ಜಿತ್ ಪಟೇಲ್ ಹೇಳಿದ್ದಾರೆ.
ಪಟೇಲ್ ನೇತೃತ್ವದ ಆರು ಮಂದಿ ಸದಸ್ಯರ ಹಣಕಾಸು ನೀತಿ ಸಮಿತಿಯು (ಎಂಪಿಸಿ), ಏಪ್ರಿಲ್ ತಿಂಗಳ ದ್ವೈಮಾಸಿಕ ಪರಾಮರ್ಶೆಯಲ್ಲಿ ಸತತ ಮೂರನೇ ಬಾರಿಯೂ ಬಡ್ಡಿ ದರಗಳಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.