ADVERTISEMENT

ಭಾರತೀಯರಲ್ಲಿ ನೌಕರಿ ಅಭದ್ರತೆ!

ಒತ್ತಡದಿಂದ ಬೊಜ್ಜು, ಮಧುಮೇಹ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2013, 19:30 IST
Last Updated 21 ಡಿಸೆಂಬರ್ 2013, 19:30 IST

ನವದೆಹಲಿ(ಪಿಟಿಐ): ಹಣ­ಕಾಸು ಮಾರುಕಟ್ಟೆ­ಯಲ್ಲಿನ ಅಸ್ಥಿರತೆ ಮತ್ತು ಜಾಗತಿಕ ಆರ್ಥಿಕ ಹಿಂಜರಿತದಿಂದ ಮತ್ತೆ ‘ಉದ್ಯೋಗ ಭೀತಿ’ ಮೂಡಿ­ದೆ. ಇಂತಹ ನಕಾರಾತ್ಮಕ ಬೆಳವಣಿ­ಗೆಗಳಿಂದ ಭಾರ­ತೀಯ ಉದ್ಯೋ­ಗಿ­ಗಳು ಹೆಚ್ಚು ಒತ್ತಡಕ್ಕೆ ಒಳಗಾಗಿದ್ದಾರೆ, ಅವರ ಆತ್ಮವಿಶ್ವಾಸವೂ ತಗ್ಗಿದೆ ಎಂದು ಮಾರುಕಟ್ಟೆ ಅಧ್ಯಯನ ಸಂಸ್ಥೆ ‘ರೇಗಸ್‌’ ನಡೆಸಿದ ಸಮೀಕ್ಷೆ ತಿಳಿಸಿದೆ.

ಆರ್ಥಿಕ ಅಸ್ಥಿರತೆಯಿಂದ ಮತ್ತೆಲ್ಲಿ ಉದ್ಯೋಗ ಕಳೆದುಕೊಳ್ಳಬೇಕಾಗಿ ಬರು­ತ್ತದೆಯೋ ಎಂಬ ಭೀತಿಯೇ ಭಾರತೀಯರನ್ನು ಕಾಡುತ್ತಲೇ ಇದೆ. ಸಮೀಕ್ಷೆಯಲ್ಲಿ ಭಾಗವ­ಹಿಸಿದ ಶೇ 71ರಷ್ಟು ಉದ್ಯೋಗಿ­ಗಳು ತಾವು ಉದ್ಯೋಗ ಭದ್ರತೆಗೆ ಸಂಬಂಧಿ­ಸಿದ ಒತ್ತಡ ಎದುರಿಸುತ್ತಿರು­ವುದಾಗಿ ಹೇಳಿದ್ದಾರೆ ಎಂದು ಈ ಅಧ್ಯಯನ ಹೇಳಿದೆ.

‘2008ರ ಮೊದಲು ಸುತ್ತಿನ ಜಾಗತಿಕ ಹಿಂಜರಿತದ ಭೀತಿ ಇನ್ನೂ ಅನೇ­ಕರನ್ನು ಬಿಟ್ಟಿಲ್ಲ. ಹಲವು ಉದ್ಯೋಗಿಗಳು ಈಗಲೂ ‘ಉದ್ಯೋಗ ಅಭದ್ರತೆ’ ಒತ್ತಡದಲ್ಲೇ ಕೆಲಸ ಮಾಡು­ತ್ತಿದ್ದಾರೆ. ಹೀಗಾಗಿ ಅನೇಕರಿಗೆ ಬೊಜ್ಜು, ಮಧು­ಮೇಹ, ಅಸ್ತಮಾ, ಅಸಿಡಿಟಿ ಸಮಸ್ಯೆಗಳು ಕಾಣಿಸಿಕೊಂಡಿವೆ’ ಎಂದೂ ‘ರೇಗಸ್‌’ ಗಮನಸೆಳೆದಿದೆ.

ಭಾರತವೂ ಸೇರಿದಂತೆ ಸುಮಾರು 90 ದೇಶಗಳ 20 ಸಾವಿರಕ್ಕೂ ಹೆಚ್ಚು  ಉದ್ಯೋಗಿಗಳನ್ನು ಸಮೀಕ್ಷಾ ತಂಡ ಸಂದರ್ಶಿಸಿದೆ. ಇವರಲ್ಲಿ ಭಾರತೀಯರೇ ಹೆಚ್ಚು (ಉದ್ಯೋಗ ಕಳೆದುಕೊಳ್ಳುವ ಭೀತಿ) ಒತ್ತಡ ಅನುಭವಿಸುತ್ತಿದ್ದಾರೆ.  ಶೇ 34ರಷ್ಟು ಭಾರತೀಯರು ತಮ್ಮ ಉದ್ಯೋಗ ಭದ್ರತೆಯ ಬಗ್ಗೆ ಯೋಚಿಸಿ ರಾತ್ರಿ ಸರಿಯಾಗಿ ನಿದ್ರೆಯನ್ನೂ ಮಾಡುತ್ತಿಲ್ಲವಂತೆ, ದಿನಬೆಳಗಾದರೆ ಪತ್ರಿಕೆಗಳಲ್ಲಿ ಉದ್ಯೋಗ ಮಾರುಕಟ್ಟೆ ಚೇತರಿಕೆ ಮತ್ತು ಆರ್ಥಿಕ ಪುನಶ್ಚೇತನದ ಬಗೆಗಿನ ಸುದ್ದಿ ಹುಡುಕುತ್ತಾರೆ ಹೀಗೆ ಕುತೂ­ಹಲಕರ ಸಂಗತಿಗಳನ್ನೂ ಅಧ್ಯಯನ ಬಹಿರಂಗಗೊಳಿಸಿದೆ.

‘ಉದ್ಯೋಗ ಸಂಬಂಧಿತ ಒತ್ತಡಗಳು ವೃತ್ತಿ ಮತ್ತು ವೈಯಕ್ತಿಕ ಬದುಕಿನ ಮೇಲೂ ನಕಾರಾತ್ಮಕ ಪರಿಣಾಮ ಬೀರುತ್ತವೆ. ಭಾರತೀಯ ಕಂಪೆನಿಗಳು ಒತ್ತಡ ಮುಕ್ತ ವಾತಾವರಣ ಕಲ್ಪಿಸಲು ಗಮನ ಹರಿಸಬೇಕು’ ಎಂದು ರೇಗಸ್‌ ಇಂಡಿಯಾದ ಕಾರ್ಯನಿರ್ವಾಹಕ ಅಧಿಕಾರಿ ಶಶಿಲ್‌ ವರ್ಮಾ ಅಭಿಪ್ರಾಯ­ಪಟ್ಟಿದ್ದಾರೆ.

ಜಾಗತಿಕ ಮಟ್ಟದಲ್ಲಿ ಶೇ 48ರಷ್ಟು ಉದ್ಯೋಗಿಗಳು ಮಾತ್ರ ‘ನೌಕರಿ ಅಭದ್ರತೆ’ ಎದುರಿಸುತ್ತಿರುವುದಾಗಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.